ಮಂಗಳೂರು : ‘ಇಂಟೆಕ್ ಮಂಗಳೂರು ಚಾಪ್ಟರ್’ ವತಿಯಿಂದ ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಾತೃ ಭಾಷಾ ದಿನದ ಅಂಗವಾಗಿ ‘ಮಂಗಳೂರಿನ ಬಹುಭಾಷಿಕತೆ ಮತ್ತು ಸಾಂಸ್ಕೃತಿಕ ಗುರುತು’ ಎಂಬ ವಿಷಯದ ಮೇಲೆ ವಿಶೇಷ ಚರ್ಚಾ ಕಾರ್ಯಕ್ರಮವು ದಿನಾಂಕ 21 ಫೆಬ್ರವರಿ 2026ರಂದು ಮಂಗಳೂರು ಬಲ್ಲಾಳ್ ಬಾಗ್ ಕೊಡಿಯಾಲ ಗುತ್ತು ‘ಸೆಂಟರ್ ಫಾರ್ ಆರ್ಟ್ ಎಂಡ್ ಕಲ್ಚರ್’ನಲ್ಲಿ ನಡೆಯಿತು.
“ಅಂತರಾಷ್ಟ್ರೀಯ ಮಾತೃಭಾಷೆ ದಿನಾಚರಣೆ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಮಾನ್ಯತೆ ನೀಡಿ ಆಚರಿಸಲು ನಡೆದ ಹೋರಾಟದಿಂದ ಉದ್ಭವಿಸಿತು. ಇಂದಿಗೂ ಅದು ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಂತರ ಆಚರಿಸುವ ಮಹತ್ವದ ಏಕೈಕ ಧರ್ಮ ನಿರಪೇಕ್ಷ ಹಬ್ಬವಾಗಿದೆ” ಎಂದು ಇಂಟ್ಯಾಕ್ ಸಂಚಾಲಕರಾದ ಸುಭಾಷ್ ಬಸು ಅವರು ನುಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ ಕೃಷ್ಣಮೂರ್ತಿ ಅವರು ಮಾತನಾಡಿ “ನಾವೆಲ್ಲ ಬಹುಭಾಷಾ ಸಂಸ್ಕೃತಿಯೊಳಗೆ ಬದ್ಧರಾಗಿ ಬದುಕುತ್ತಿದ್ದೇವೆ. ನಮ್ಮಲ್ಲಿ ಬೇರೆ ಬೇರೆ ಮಾತೃಭಾಷೆಗಳಿದ್ದರೂ ಅಂತಿಮವಾಗಿ ಭಾಷೆಯೊಳಗಿನ ಭಾವವೇ ಪ್ರಧಾನವಾಗಿ ನಾವೆಲ್ಲ ಭಿನ್ನರಲ್ಲ ಒಂದೇ ಎಂಬ ಭಾವವನ್ನು ಬಿತ್ತಿ ಮಂಗಳೂರಿನ ಭಾಷಿಕ ಸಂಬಂಧಗಳು ಬೆಸೆದುಕೊಂಡಿವೆ” ಎಂದು ನುಡಿದರು.
ಕವಿ ಲೇಖಕ ಉಪನ್ಯಾಸಕರಾದ ರಘು ಇಡ್ಕಿದು ಮಾತನಾಡಿ “ಮಾತೃ ಭಾಷೆಯು ಸಂವಹನದ ಪರಿಧಿಯನ್ನು ಮೀರಿ ವ್ಯಕ್ತಿತ್ವದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ” ಎಂದು ಹೇಳಿದರು. ಕವಿ ಅನಾರ್ಕಲಿ ಸಲೀಂ ಮಂಡ್ಯ ಅವರು ಮಾತನಾಡಿ “ನಾನು ಉರ್ದು ಭಾಷೆಯನ್ನು ಬಳಸಿದರೂ ನನ್ನ ಸಂಪೂರ್ಣ ಜೀವನದಲ್ಲಿ ಕನ್ನಡವನ್ನು ಕಲಿತಿದ್ದೇನೆ ಮತ್ತು ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಮತ್ತು ಕೃತಿಗಳ ನಿರ್ಮಾಣಕ್ಕೆ ಕನ್ನಡವೇ ಪ್ರಧಾನ ಭಾಷೆಯಾಗಿ ನಿಂತಿದೆ” ಎಂದು ಹೇಳಿದರು.
ಪಿಂಗಾರ ಪತ್ರಿಕೆಯ ಹಿರಿಯ ಪತ್ರಕರ್ತ ರೇಮಂಡ್ ಡಿಕುನ್ಹಾ ಅವರು ಕೊಂಕಣಿ ಭಾಷೆಯ ಕುರಿತು ಮಾತನಾಡಿ “ಕೊಂಕಣಿ ಭಾಷೆಯನ್ನು ವಿವಿಧ ಧರ್ಮಗಳು ಮತ್ತು ಜಾತಿಗಳಲ್ಲಿ 40ಕ್ಕೂ ಹೆಚ್ಚು ಸಮುದಾಯಗಳು ಮಾತನಾಡುತ್ತಿವೆ. ಈ ಭಾಷೆ ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿದೆ. ಇಂದು ಮಂಗಳೂರಿನಲ್ಲಿ ವ್ಯಾಪಕವಾಗಿ ಈ ಭಾಷೆಯನ್ನು ಬಳಸುತ್ತಿದ್ದಾರೆ” ಎಂದು ಹೇಳಿದರು. ಕವಿ ಎನ್. ಸುಬ್ರಾಯ ಭಟ್ ಹವ್ಯಕ ಕನ್ನಡದ ವೈಶಿಷ್ಟ್ಯದ ಕುರಿತು ಮಾತನಾಡಿ “ಹವ್ಯಕ ಕನ್ನಡವು ಹಳೆ ಕನ್ನಡಕ್ಕೆ ಸಮೀಪವಾಗಿರುವ ವಿಶಿಷ್ಟ ಉಪಭಾಷೆಯಾಗಿದೆ. ಈ ಭಾಷೆಯಲ್ಲಿಯೂ ಸಾಹಿತ್ಯ ನಿರ್ಮಾಣ ನಡೆಯುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಣಿತ ಅವರು ಪಾಲ್ಗೊಂಡು “ಇಂಗ್ಲೀಷ್ ಭಾಷೆಯಲ್ಲಿಯೇ ನನ್ನ ಆಲೋಚನಾ ಕ್ರಮಗಳು ರೂಪುಗೊಂಡರೂ, ಒಬ್ಬಾಕೆ ತಾಯಿಯಾಗಿ ಮಗನ ಜೊತೆ ನನ್ನ ತುಳು ಪ್ರಧಾನ ಭಾಷೆಯಾಗಿದೆ” ಎಂದು ಹೇಳಿದರು. ಮಾಧ್ಯಮ ಕಾರ್ಯನಿರ್ವಾಹಕರಾದ ಪ್ರಕಾಶ್ ಪುತ್ತೂರು ಮಾತನಾಡಿ “ವಿದ್ವಾಂಸರೆಂದು ಕರೆಸಿಕೊಳ್ಳುವ ದೊಡ್ಡವರೆಲ್ಲ ಸಹಜವಾದ ಮಾತೃ ಭಾಷೆಗೆ ಅತಿ ರಂಜಿತ ಪದಗಳನ್ನು ಸೇರಿಸಿ ಮಾತನಾಡುವ ಮೂಲಕ ಭಾಷೆಯನ್ನು ಉಳಿಸುವ ಕೆಲಸ ಮಾಡುವುದಿಲ್ಲ. ಜನಸಾಮಾನ್ಯರಿಂದಲೇ ಮಾತೃಭಾಷೆಗಳು ಉಳಿಯುವುದು” ಎಂದು ಹೇಳಿದರು.
ಮಂಗಳೂರು ಮೀನುಗಾರಿಕಾ ಕಾಲೇಜಿನ ನಿವೃತ್ತ ಡೀನ್, ಕಲಾವಿದರಾದ ಶಿವಪ್ರಕಾಶ್ ರವರು ಮಾತನಾಡಿ ವಿದೇಶದಲ್ಲಿ ಮಾತೃಭಾಷೆಯವರು ಸಿಗದೇ ಇದ್ದಾಗ ಆಗುವ ಒದ್ದಾಟ ಮತ್ತು ಸಿಕ್ಕಾಗ ಆಗುವ ಸಂಭ್ರಮಗಳನ್ನು ವಿವರಿಸಿ ಮಾತೃ ಭಾಷೆಯ ಮಹತ್ವವನ್ನು ತಿಳಿಸಿಕೊಟ್ಟರು. ಕವಿ ವಿಘ್ನೇಶ್ ಬಿಡೆಯವರು ತಮ್ಮ ಚಿತ್ಪಾವನಿ ಭಾಷೆಯ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ, ಕವಿ ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು, ಕಲಾವಿದರಾದ ರಾಜೇಂದ್ರ ಕೇದಿಗೆ, ನೇಮಿರಾಜ್ ಶೆಟ್ಟಿ, ಹರೀಶ್ ಕೊಡಿಯಲ್ ಬೈಲ್ ಉಪಸ್ಥಿತರಿದ್ದರು. ಚರ್ಚೆಯಲ್ಲಿ ವಿದೇಶಗಳಲ್ಲಿ ಭಾಷಾ ಆಧಾರಿತ ಸಮುದಾಯಗಳ ಭಾಗವಹಿಸುವಿಕೆ, ಇಂಗ್ಲೀಷ್ ಶಿಕ್ಷಣದ ಹೇರಿಕೆ ಹಾಗೂ ಮುಂದಿನ ತಲೆಮಾರಿಗೆ ಮಾತೃಭಾಷೆಯ ಮೇಲೆ ಆಸಕ್ತಿ ಮೂಡಿಸುವ ಅಗತ್ಯತೆ ಮುಂತಾದ ವಿಷಯಗಳ ಕುರಿತು ಶ್ರೋತ್ರು ವರ್ಗದಿಂದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶ್ರೀ ಸುಭಾಷ್ ಬಸು ಸ್ವಾಗತಿಸಿ, ವಂದಿಸಿದರು.
