ಸವಣೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಹಾಗೂ ಶ್ರಾವಣ ರಂಗ ಪ್ರತಿಷ್ಠಾನ ಸವಣೂರು ಇವುಗಳ ಸಂಯೋಜನೆಯಲ್ಲಿ ನಡೆಯುವ ಪವಿತ್ರ ಅಧಿಕ ಮಾಸದಲ್ಲಿ ‘ಶ್ರೀ ಹರಿ ದರ್ಶನ’ ತಾಳಮದ್ದಳೆ ಅಭಿಯಾನವು ದಿನಾಂಕ 24 ಮೇ 2026ರಂದು ಸವಣೂರು ಮುಗೇರು ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ‘ಶರಸೇತು ಬಂಧ’ ಎಂಬ ತಾಳಮದ್ದಳೆ ಕೂಟದ ಮೂಲಕ ಶುಭಾರಂಭಗೊಂಡಿತು.

ಕೂಟದ ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಚೆಂಡೆ ಮದ್ದಳೆಗಳಲ್ಲಿ ತಾರಾನಾಥ ಸವಣೂರು, ಅನೀಶ್ ಕೃಷ್ಣ ಮತ್ತು ಚಕ್ರ ತಾಳದಲ್ಲಿ ಪುಟ್ಟಣ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಹನೂಮಂತ), ಗುಂಡ್ಯಡ್ಕ ಈಶ್ವರ ಭಟ್ (ವೃದ್ಧ ವಿಪ್ರ), ಗುಡ್ಡಪ್ಪ ಬಲ್ಯ (ಅರ್ಜುನ), ತಾರಾನಾಥ ಸವಣೂರು (ಶ್ರೀ ರಾಮ) ಸಹಕರಿಸಿದರು. ಶ್ರೀ ದೇವಳದ ಅರ್ಚಕ ಪದ್ಮನಾಭ ಕುಂಜತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು. ತಾಳಮದ್ದಳೆ ಕೂಟಕ್ಕೆ ಅವಕಾಶವನ್ನಿತ್ತ ಶ್ರೀ ದೇವಳದ ಆಡಳಿತ ಸಮಿತಿ ಕಾರ್ಯದರ್ಶಿ ಶಿವರಾಮ ಶೆಟ್ಟಿ ಕಿನಾರ ಹಾಗೂ ಟ್ರಸ್ಟಿ ಶಿವರಾಮ ಗೌಡ ಇವರನ್ನು ಉಭಯ ಸಂಘಗಳ ಪರವಾಗಿ ಕೃಷ್ಣ ಭಟ್ ಕುಕ್ಕುಜೆ ಸನ್ಮಾನಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ಸಂಯೋಜಿಸಿದರು. ಸವಣೂರು ಯುವಕ ಮಂಡಲದ ಗಿರಿಶಂಕರ ಸುಲಾಯ, ಶ್ರೀಧರ ಸುಣ್ಣಾಜೆ ಮತ್ತಿತರರು ಸಹಕರಿಸಿದರು.
