ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ. ಇಂದಿನ ಯುವ ಜನತೆಯಲ್ಲಿ ಅಧ್ಯಯನದ ಆಸಕ್ತಿ ಇಲ್ಲ, ಕೂತು ಸಂವಾದ ನಡೆಸುವ ತಾಳ್ಮೆ ಇಲ್ಲ, ಸೃಜನಶೀಲ ಅಭಿವ್ಯಕ್ತಿಯ ಹಂಬಲವಿಲ್ಲ, ಮೊಬೈಲ್ ಇತ್ಯಾದಿ ಡಿಜಿಟಲ್ ಸಾಧನಗಳಿಂದಾಚೆಗಿನ ಜಗತ್ತಿನ ಕುತೂಹಲ ಇಲ್ಲ ಇತ್ಯಾದಿ,,,,ಇತ್ಯಾದಿ. ಸಾಮಾನ್ಯವಾಗಿ ಹಿರಿಯ ತಲೆಮಾರಿನ ಹರಟೆಗಳ ನಡುವೆ ಕೇಳಿಬರುವ ಮಾತುಗಳಿವು. ಇದನ್ನು ಅಲ್ಲಗಳೆಯುವುದೂ ಸಾಧ್ಯವಾಗದ ಹಾಗೆ ಯುವ ಸಮೂಹ ಸ್ಮಾರ್ಟ್ ಫೋನ್ ಮತ್ತು ಮೋಜಿನ ಬದುಕಿಗೆ ಅಂಟಿಕೊಂಡಿದೆ. ಈ ಅನಿಸಿಕೆಗಳು ಸಾರ್ವತ್ರಿಕವಾಗಿರುವುದರಿಂದಲೇ ಪತ್ರಿಕಾ ಮಾಧ್ಯಮಗಳಲ್ಲೂ ಸಹ ಉದ್ದುದ್ದ ಲೇಖನಗಳನ್ನು ಯುವ ಜನತೆ ಓದುವುದಿಲ್ಲ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ. ಆದರೆ ಈ ಅರ್ಧಸತ್ಯಗಳಿಂದಾಚೆ, ಯುವ ಸಮಾಜದ ಒಳಹೊಕ್ಕು ನೋಡಿದಾಗ ಅಚ್ಚರಿಗೊಳಿಸುವ ವಾಸ್ತವಗಳು ಕಾಣುತ್ತವೆ.
ಹೊರ ಸಮಾಜಕ್ಕೆ ಅಸಾಧ್ಯ ಎನಿಸುವುದನ್ನು ಸಾಕ್ಷೀಕರಿಸುವ ಒಂದು ಸೇತುವೆ ಯಾವುದಾದರೂ ಇದ್ದರೆ ಅದು ರಂಗಕಲೆ ಮತ್ತು ಅದರ ಭದ್ರಕೋಟೆಯಾದ ರಂಗಭೂಮಿ. ಬಾಹ್ಯ ಜಗತ್ತಿನ ಅನಿಷ್ಠ, ಅಪಸವ್ಯಗಳ ಸೋಂಕಿಲ್ಲದೆ ತನ್ನ ಸ್ವಾಯತ್ತತೆ ಮತ್ತು ಸೃಜನಶೀಲತೆಯನ್ನು ಉಳಿಸಿಕೊಂಡು ಬಂದಿರುವ ಕನ್ನಡ ರಂಗಭೂಮಿಗೆ ಭವಿಷ್ಯದ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಇತರ ಸಾಂಸ್ಕೃತಿಕ ವಲಯಗಳಲ್ಲಿರುವ ಕೆಲವು ಅಪಭ್ರಂಶಗಳು ರಂಗಭೂಮಿಯೊಳಗೂ ನುಸುಳಿದ್ದರೂ, ಅದರ ಮೂಲ ತತ್ವ ಮತ್ತು ಸತ್ವವನ್ನು ಉಳಿಸಿಕೊಂಡು ಬಂದಿದೆ. ಬಹುಶಃ ಆಧುನಿಕ ಹವ್ಯಾಸಿ ರಂಗಭೂಮಿಯನ್ನು ಪ್ರತಿನಿಧಿಸಿದ ಕಲಾವಿದರು ಮತ್ತು ಕಲಾತಂಡಗಳು ಸಮ ಸಮಾಜ ಮತ್ತು ಪುರೋಗಾಮಿ ಚಿಂತನೆಗಳಿಗೆ ತೆರೆದುಕೊಂಡಿದ್ದು ಸಹ ಇದಕ್ಕೆ ಕಾರಣ ಇರಬಹುದು.
ಚಿಕಿತ್ಸಕ ಸಾಧನದ ಅವಶ್ಯಕತೆ : ಆದಾಗ್ಯೂ ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು ಗಮನಿಸಿದಾಗ, ಹಿಂಸೆ, ದೌರ್ಜನ್ಯ ಮತ್ತು ದ್ವೇಷ ಈ ಮೂರೂ ಅವಗುಣಗಳು ಸಮಾಜದ ನರನಾಡಿಗಳಲ್ಲೂ ಪ್ರವಹಿಸುತ್ತದೆ ಎಂದು ಭಾಸವಾಗುತ್ತದೆ. ಇದಕ್ಕೆ ಬಲಿಯಾಗುತ್ತಿರುವವರು ಮಹಿಳೆಯರು, ಆರ್ಥಿಕವಾಗಿ ಕೆಳಸ್ತರದಲ್ಲಿರುವ ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳ ಜನರು. ರಾಜಕೀಯವಾಗಿ ಬಿತ್ತಿದ ದ್ವೇಷದ ಬೀಜಗಳು ಇಂದು ಸಾಂಸ್ಕೃತಿಕ ಹೆಮ್ಮರಗಳಾಗಿ, ಸಮಾಜದ ಮೂಲ ಬೇರುಗಳನ್ನೂ ಕಲುಷಿತಗೊಳಿಸುತ್ತಿರುವುದು ಕಣ್ಣಿಗೆ ರಾಚುವ ವಾಸ್ತವ. ಹಾಗಾಗಿಯೇ ಮತದ್ವೇಷ, ಕೋಮುದ್ವೇಷ, ಹಿಂಸೆ, ಅತ್ಯಾಚಾರ, ದೌರ್ಜನ್ಯ ಮತ್ತು ಮನುಜ ಸಂಬಂಧಗಳ ಅಪಮೌಲ್ಯೀಕರಣ, ಸಾಮಾಜಿಕ ವ್ಯಾಧಿಯಾಗಿ (Social Malaise), ಸಾಂಸ್ಕೃತಿಕ ವ್ಯಸನವಾಗಿ ನಮ್ಮನ್ನು ಕಾಡುತ್ತಿದೆ.
ಈ ಸಾಮಾಜಿಕ ವ್ಯಾಧಿಯನ್ನು ಗುಣಪಡಿಸುವ, ಯುವ ಸಮೂಹವನ್ನು ಆವರಿಸಿರುವ ಮಾದಕ ವಸ್ತುಗಳಂತಹ ದ್ರವ್ಯರೂಪದ ವ್ಯಸನ, ಜಾತಿ ಉಪಜಾತಿ ಧರ್ಮ ಮುಂತಾದ ಸಾಂಸ್ಕೃತಿಕ ವ್ಯಸನವನ್ನು ಹೋಗಲಾಡಿಸುವ ಚಿಕಿತ್ಸಕ ಗುಣ ರಂಗಭೂಮಿಯಲ್ಲಿದೆ. ಈ ದೃಷ್ಟಿಯಿಂದ ವರ್ತಮಾನದ ರಂಗಭೂಮಿ ಯುವ ಸಮಾಜವನ್ನು ತನ್ನೊಳಗೆ ಸೆಳೆದುಕೊಳ್ಳಬೇಕಿದೆ. ಯುವ ಸಮಾಜವನ್ನು ಒಳಗೊಳ್ಳುವಂತಹ ಒಂದು ವಾತಾವರಣವನ್ನು ಸೃಷ್ಟಿಸಬೇಕಿದೆ. ಕನ್ನಡದ ಹವ್ಯಾಸಿ ರಂಗಭೂಮಿ ಈ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಚಾರ. ಮೈಸೂರಿನ ಹಲವು ರಂಗ ಸಂಸ್ಥೆಗಳು ಈ ದಾರಿಯಲ್ಲಿ ಮುನ್ನಡೆದಿರುವುದು ಸಮಾಧಾನಕರ ಅಂಶ. ಆದರೂ ಶಾಲಾ ಮಕ್ಕಳಿಂದ ಪದವಿ ಕಾಲೇಜಿನ ಶಿಕ್ಷಣಾರ್ಥಿಗಳವರೆಗೆ ಯುವ ಸಮಾಜವನ್ನು ತನ್ನೊಳಗೆ ಸೆಳೆಯುವ ಗುರುತರ ಜವಾಬ್ದಾರಿ ರಂಗಭೂಮಿಯ ಮೇಲಿದೆ.
ರಂಗದ ಮೇಲೆ ವಾಸ್ತವ ಜಗತ್ತು : ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿರುವ ಕೆಲವು ನಿದರ್ಶನಗಳು ನಮ್ಮ ಮುಂದಿರುವುದು ಭವಿಷ್ಯದ ದೃಷ್ಟಿಯಿಂದ ಸ್ವಾಗತಾರ್ಹ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ಎಸ್.ಬಿ.ಆರ್.ಅರ್. ಮಹಾಜನ ಕಾಲೇಜು ಮೈಸೂರು ಈ ಸಂಸ್ಥೆಯ ಸಹಯೋಗದೊಂದಿಗೆ ರಂಗನಿರ್ದೇಶಕಿ ಕೆ.ಆರ್. ಸುಮತಿ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕಳೆದ ವಾರ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಂಡ ʼಊರ ಸುಟ್ಟರೂ ಹನುಮಪ್ಪ ಹೊರಗʼ ಎಂಬ ನಾಟಕ, ಯುವ ಸಮೂಹ ರಂಗಭೂಮಿಗೆ ವಿಮುಖರಾಗಿಲ್ಲ ಎಂದು ನಿರೂಪಿಸುವ ಒಂದು ಪ್ರಯೋಗ. ಮಹಾಜನ ಕಾಲೇಜಿನ ಸಾಂಸ್ಕೃತಿಕ ರಂಗತಂಡ (ಸಾರಂತ)ದ ಯುವ ಕಲಾವಿದರು ಅಭಿನಯಿಸಿದ ಈ ನಾಟಕ ಎರಡು ಕಾರಣಗಳಿಗಾಗಿ ಮಹತ್ವ ಪಡೆಯುತ್ತದೆ.
ಈ ನಾಟಕದ ಮೂಲ ಕಥಾವಸ್ತು ಪ್ರಚಲಿತ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ. ಹನುಮಂತ ಹಾಲಗೇರಿ ಅವರು ರಚಿಸಿರುವ ʼಊರ ಸುಟ್ಟರೂ ಹನುಮಪ್ಪ ಹೊರಗʼ ನಮ್ಮ ಸಮಾಜವನ್ನು ನಿರಂತರವಾಗಿ ಒಡೆಯುತ್ತಲೇ ಇರುವ, ವಿಭಜಿಸುತ್ತಲೇ ಇರುವ ಧಾರ್ಮಿಕ ನಂಬಿಕೆ ಮತ್ತು ಮೌಢ್ಯಗಳು, ರಾಜಕೀಯದ ದಾಳವಾಗಿರುವ ದೈವತ್ವದ ಕಲ್ಪನೆ ಮತ್ತು ನಿರ್ದಿಷ್ಟ ದೇವರು ಮತ್ತು ದೇವಸ್ಥಾನಗಳನ್ನೇ ಸಮಾಜವಿಭಜಕ ಸೇತುವೆಗಳಾಗಿ ಬಳಸಿಕೊಳ್ಳುವ ಹೊಲಸು ರಾಜಕಾರಣ ಇವೆಲ್ಲವನ್ನೂ ಈ ಹಾಸ್ಯಮಿಶ್ರಿತ ನಾಟಕದ ಮೂಲಕ ಹೊರಗೆಡಹಲಾಗಿದೆ. ದೈವ ಮತ್ತು ದೈವತ್ವವನ್ನು ಜಂಗಮ ರೂಪದಲ್ಲಿ ಹಂಚಿಕೊಂಡ ಭಾರತೀಯ ಸಮಾಜ ಸ್ಥಾವರ ರೂಪದಲ್ಲಿ ಪ್ರತಿಯೊಂದು ಗುಡಿಯನ್ನೂ ರಾಜಕೀಯ ಚಿಮ್ಮುಹಲಗೆಯನ್ನಾಗಿ (Political Launchpad) ಬಳಸಿಕೊಳ್ಳುತ್ತಿರುವುದನ್ನು, ಈ ನಾಟಕ ಸಮರ್ಥವಾಗಿ ತೆರೆದಿಡುತ್ತದೆ.

ಸ್ವತಂತ್ರ ಭಾರತದಲ್ಲಿ ದೈವ ನಂಬಿಕೆ ಮತ್ತು ಅದರಿಂದಲೇ ಉತ್ಪಾದಿಸಲಾಗುವ ಮೌಢ್ಯಾಚರಣೆಗಳು ಸಮಾಜದಲ್ಲಿ ಕಲಿತವರನ್ನೂ, ಕಲಿಯದವರನ್ನೂ ಸಮನಾಗಿ ದಾರಿ ತಪ್ಪಿಸುತ್ತವೆ. ಧಾರ್ಮಿಕ ಶ್ರದ್ದಾಭಕ್ತಿಗಳು ಸಾಮುದಾಯಿಕ ಭಾವನೆಗಳ ಚೌಕಟ್ಟಿನಲ್ಲಿ ವ್ಯಕ್ತವಾಗುವಾಗ ಸೃಷ್ಟಿಯಾಗುವ ಉನ್ಮಾದ ಮತ್ತು ಭಾವಾವೇಶಗಳು ಸಮಾಜಗಳನ್ನು ಒಡೆಯುತ್ತಾ ಹೋಗುತ್ತವೆ. ಈ ವಿಘಟನೆಗೆ ಕಾರಣ ಸುತ್ತಲಿನ ಜನರ ದುಷ್ಟಬುದ್ಧಿಯೇ ಆದರೂ, ಯಾವುದೋ ಒಂದು ದೇವರ ಮೇಲೆ, ಗುಡಿ ಅಥವಾ ಪ್ರತಿಮೆಗಳ ಮೂಲಕ, ಜವಾಬ್ದಾರಿ ಹೊರಿಸಲಾಗುತ್ತದೆ. ʼಊರ ಸುಟ್ಟರೂ ಹನುಮಪ್ಪ ಹೊರಗʼ ನಾಟಕದಲ್ಲಿ ಹನುಮ ಈ ಪ್ರಾಯೋಗಿಕ ಶಿಶುವಾಗಿ ಕಾಣುತ್ತಾನೆ.
ದೈವ ಭಕ್ತಿ ಮತ್ತು ಆರಾಧನೆಯ ಹೆಸರಿನಲ್ಲಿ ಇಬ್ಭಾಗವಾಗುವ ಒಂದು ಗ್ರಾಮ, ಎರಡು ಗುಂಪುಗಳ ನಡುವೆ ಬೆಳೆಯುವ ವೈಷಮ್ಯ ಮತ್ತು ಆ ಮೂರ್ತಿಯನ್ನು ಉಳಿಸಿಕೊಳ್ಳಲು ಎರಡೂ ಗ್ರಾಮಸ್ಥರು ತಮ್ಮ ಬದುಕಿನ ಅಡಿಪಾಯವನ್ನೇ ಕಳೆದುಕೊಳ್ಳುವ ದಾರುಣ ಪರಿಸ್ಥಿತಿ ಹೇಗೆ ದುಡಿದು ತಿನ್ನುವ ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ ಎನ್ನುವುದನ್ನು ʼಊರ ಸುಟ್ಟರೂ ,,,,ʼ ಪ್ರೇಕ್ಷಕರ ಮುಂದಿಡುತ್ತದೆ. ಹಾಗೆಯೇ ವೈಚಾರಿಕ ಪ್ರಜ್ಞೆ ಮತ್ತು ಸಮಾಜಮುಖಿ ಆಲೋಚನೆ ಹೇಗೆ, ತಳಮಟ್ಟದ ಸಮಾಜದಲ್ಲಿ ಜನರನ್ನು ಒಂದಾಗಿಸಿ, ಸಹಬಾಳ್ವೆಯ ಕಡೆಗೆ ಸಾಗಿಸುತ್ತದೆ ಎನ್ನುವುದನ್ನೂ ತೆರೆದಿಡುತ್ತದೆ.
ʼಊರ ಸುಟ್ಟರೂ,,,,,ʼ ನಾಟಕದ ಹಿರಿಮೆ ಇರುವುದು ಮಹಾಜನ ಕಾಲೇಜಿನ ಶಿಕ್ಷಣಾರ್ಥಿಗಳ ಅದ್ಭುತ ಅಭಿನಯದಲ್ಲಿ ಮತ್ತು ಕೆ.ಆರ್. ಸುಮತಿ ಅವರ ದಕ್ಷ ನಿರ್ದೇಶನದಲ್ಲಿ. ಇಡೀ ನಾಟಕದಲ್ಲಿ ನಿರ್ದೇಶಕಿಯ ಅಪಾರ ಪರಿಶ್ರಮ ಎದ್ದುಕಾಣುವಂತೆಯೇ, ವಿಭಿನ್ನ ಪಾತ್ರಗಳ ನಿರ್ವಹಣೆಯಲ್ಲಿ ಈ ಯುವ ಸಮೂಹ ತೋರಿರುವ ತನ್ಮಯತೆ, ಅಭಿವ್ಯಕ್ತಿಯ ಸಂಯಮ ಹಾಗೂ ಅಭಿನಯ ಕಲೆಯೂ ಸಹ ಪ್ರೇಕ್ಷಕರ ಮನಸ್ಸಿಗೆ ನಾಟುವಂತಿದೆ. ವರ್ತಮಾನದ ಸಮಾಜಕ್ಕೆ ಅಗತ್ಯವಾದ ಸಮನ್ವಯ-ಸೌಹಾರ್ದತೆಯ ಸಂದೇಶ ಸಾರುವ ಕಥಾವಸ್ತುವನ್ನು ರಂಗದ ಮೇಲೆ ಇನ್ನೂ ಪರಿಣಾಮಕಾರಿಯಾಗಿ ಬಿಂಬಿಸಿರುವ ಸಾರಂತ ತಂಡಕ್ಕೆ ಮತ್ತು ನಿರ್ದೇಶಕಿ ಕೆ.ಅರ್. ಸುಮತಿ ಅವರಿಗೆ, ಹಿನ್ನೆಲೆ ಗಾಯನ-ಸಂಗೀತ ಉಣಬಡಿಸಿದ ಚಿಂತನ್ ವಿಕಾಸ್-ಜನ್ನಿ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು.

ಮಕ್ಕಳ ರಂಗಕಲೆಗೊಂದು ಬಾಗಿಲು : ಮೈಸೂರಿನಲ್ಲೇ ಕುಡಿಯೊಡೆದಿರುವ ಮತ್ತೊಂದು ರಂಗ ತಂಡ, ಕೆ.ಎಂ. ಕೀರ್ತಿರಾಜ್ ಅವರ ರಂಗಾಂತರಂಗ. ಕಳೆದ ಐದು ವರ್ಷಗಳಿಂದ ಮಕ್ಕಳಲ್ಲಿ ರಂಗಕಲೆಯನ್ನು ಬೆಳೆಸಲು ಅಭಿನಯ ತರಬೇತಿ, ರಂಗಕಲೆಯ ತರಬೇತಿ, ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವ ʼರಂಗಾಂತರಂಗʼ ತನ್ನ ಐದನೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎರಡು ದಿನಗಳ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಿತ್ತು. ಖ್ಯಾತ ರಂಗಕರ್ಮಿ, ಮೈಮ್ ರಮೇಶ್ ಅವರಿಂದ ಉದ್ಧಾಟನೆಯಾದ ಈ ನಾಟಕೋತ್ಸವಕ್ಕೆ ಮೆರುಗು ನೀಡಿದ್ದು ಮಕ್ಕಳಿಂದಲೇ ಅಭಿನಯಿಸಲಾದ ಮೂರು ನಾಟಕಗಳು. ಮಕ್ಕಳಲ್ಲಿ ನಾಟಕದ ಅಭಿರುಚಿ ಮತ್ತು ರಂಗಭೂಮಿಯ ಆಸಕ್ತಿಯನ್ನು ಬೆಳೆಸುವ ಜವಾಬ್ದಾರಿಯನ್ನರಿತು ರಂಗಾಂತರಂಗ ತನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ನಾಟಕ ಅಥವಾ ರಂಗ ಕಲೆ ಎಂದರೆ ಕೇವಲ ಆಂಗಿಕ ಭಾವಾಭಿನಯ ಅಥವಾ ಸಂವಹನ ಮಾತ್ರವೇ ಅಲ್ಲ. ವರ್ತಮಾನದ ಸಮಾಜದಲ್ಲಿ ಶಿಥಿಲವಾಗುತ್ತಿರುವ ಮನುಜ ಸಂಬಂಧಗಳು ಮತ್ತು ಕ್ಷೀಣಿಸುತ್ತಿರುವ ಮಾನವೀಯ ಸೂಕ್ಷ್ಮತೆಗಳನ್ನು ಮರುಕಟ್ಟಲು ಇರುವ ಒಂದು ವೇದಿಕೆ ಎಂದರೆ ಅದು ರಂಗಭೂಮಿ. ಮಿಲೆನಿಯಂ ಮಕ್ಕಳು ಎಂದು ಗುರುತಿಸಲಾಗುವ ಇಂದಿನ ಸಮಾಜದ ವಿದ್ಯಾರ್ಥಿ ಯುವ ಸಮೂಹದಲ್ಲಿ ಈ ಪ್ರಜ್ಞೆಯನ್ನು ಮೂಡಿಸುವುದು ಸಾಮಾಜಿಕ ಜವಾಬ್ದಾರಿ, ಸಾಂಸ್ಕೃತಿಕ ಹೊಣೆಗಾರಿಕೆ. ಇದನ್ನು ಹೇಗೆ ಮಾಡಬಹುದು ಎಂಬ ಪ್ರಶ್ನೆಗೆ ರಂಗಾಂತರಂಗದ ಕೀರ್ತಿರಾಜ್ ಉತ್ತರ ಕಂಡುಕೊಂಡಿದ್ದಾರೆ. ಶಾಲೆಗಳಿಗೆ ಹೋಗಿ, ಪ್ರಾಂಶುಪಾಲರೊಂದಿಗೆ ಮಾತನಾಡಿ, ಆ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ರಂಗ ತರಬೇತಿಯನ್ನು ನೀಡುವ ಶಿಬಿರಗಳನ್ನು ಆಯೋಜಿಸುವ ಮಹತ್ತರ ಯೋಜನೆಯನ್ನು ರಂಗಾಂತರಂಗ ಹಮ್ಮಿಕೊಂಡಿದೆ.
ಈ ಪ್ರಯತ್ನದ ಪ್ರತಿಫಲವನ್ನು ಫೆಬ್ರವರಿ 7 ಮತ್ತು 8ರಂದು ಕಿರುರಂಗಮಂದಿರದಲ್ಲಿ ರಂಗಾಂತರಂಗ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಮಕ್ಕಳ ನಾಟಕೋತ್ಸವದಲ್ಲಿ ಕಾಣಬಹುದಿತ್ತು. ವಿಕಾಸದ ಹಂತದಲ್ಲಿರುವ ಎಳೆಯ ಮಕ್ಕಳಲ್ಲಿ ರಂಗಾಸಕ್ತಿಯನ್ನು ಬಿತ್ತುವ ಈ ಕ್ರಿಯೆ ಭವಿಷ್ಯದ ಸಮಾಜಕ್ಕೆ ಉತ್ತಮ ಕಲಾವಿದರನ್ನು ನೀಡುವುದಷ್ಟೇ ಅಲ್ಲದೆ, ಒಂದು ಸಮಾಜಮುಖಿ ಪೀಳಿಗೆಯನ್ನೂ ನೀಡುತ್ತದೆ. ಮೈಸೂರಿನಿಂದ ಹೊರಗಿರುವ ಹಳ್ಳಿಗಳ ಶಾಲೆಗಳಿಗೆ ಹೋಗಿ ಅಲ್ಲಿನ ಶಾಲಾ ಮಕ್ಕಳಿಗೆ ರಂಗ ತರಬೇತಿ ನೀಡುವ ಪರಿಶ್ರಮ ಶ್ಲಾಘನೀಯ. ಕೀರ್ತಿರಾಜ್ ಈ ಪ್ರಯತ್ನವನ್ನು ದೊಡ್ಡಹುಂಡಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಾಕಾರಗೊಳಿಸಿದ್ದಾರೆ. ಇದೇ ಸಂಸ್ಥೆಯಿಂದ ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲೂ, ಕಾವೇರಿ ವಿದ್ಯಾ ಸಂಸ್ಥೆಯಲ್ಲೂ ಸಹ ರಂಗತರಬೇತಿ ನಡೆಸಲಾಗುತ್ತಿದೆ. ಈ ಪ್ರಯತ್ನಗಳು ಇನ್ನೂ ಹೆಚ್ಚಾಗಬೇಕಿದೆ. ಹೆಚ್ಚಿನ ಸಂಖ್ಯೆಯ ಶಾಲಾ-ಕಾಲೇಜು ಮಕ್ಕಳಿಗೆ ರಂಗಕಲೆಯನ್ನು ಪರಿಚಯಿಸಬೇಕಿದೆ.
ದೊಡ್ಡಹುಂಡಿ ಶಾಲೆಯ ಮಕ್ಕಳು ಪ್ರಪ್ರಥಮ ಬಾರಿ ಮೈಸೂರಿನ ಪ್ರೇಕ್ಷಕರ ಮುಂದೆ ನಾಟಕವನ್ನು ಅಭಿನಯಿಸಿದ್ದು ನಿಜಕ್ಕೂ ಹೆಮ್ಮೆ ತರುವ ವಿಚಾರ. ನಾಟಕೋತ್ಸವದ ಎರಡನೆ ದಿನ ಸಂತೋಷ್ ಗುಡ್ಡಿಯಂಗಡಿ ವಿರಚಿತ ʼತಿಕ್ಕಲು ರಾಜ ತಿರುಬೋಕಿ ರಾಜ್ಯʼ ಎಂಬ ಹಾಸ್ಯ ನಾಟಕವನ್ನು ಈ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ಹೈಸ್ಕೂಲು ಮಕ್ಕಳು ಮನಮುಟ್ಟುವಂತೆ ಪ್ರದರ್ಶಿಸಿದರು. ಈ ಮಕ್ಕಳಲ್ಲಿ ಕಂಡು ಬಂದ ತಲ್ಲೀನತೆ, ತನ್ಮಯತೆ, ಶ್ರದ್ಧೆ ಮತ್ತು ರಂಗಕಲೆಯಲ್ಲಿ ಅತ್ಯವಶ್ಯವಾದ ಕಲಾಬದ್ಧತೆ ಇವೆಲ್ಲವೂ ಭರವಸೆ ಮೂಡಿಸುವ ಸಂಗತಿಗಳು. ಮೊದಲನೆ ದಿನ ರಂಗಾಂತರಂಗ ಸಂಸ್ಥೆಯಲ್ಲೇ ವಾರಾಂತ್ಯ ತರಬೇತಿ ಪಡೆದ ಮಕ್ಕಳು ಅಭಿನಯಿಸಿದ ಮೂರ್ತಿ ದೇರಾಜೆ ಅವರ ಮಕ್ಕಳ ನಾಟಕ ʼಹುಲಿ ಬೇಟೆಯ ಹಿಂದೆ ,,,ಮುಂದೆʼ ಮತ್ತು ಎರಡನೆ ದಿನ ಇದೇ ತಂಡ ಅಭಿನಯಿಸಿದ ಪಿ. ಲಂಕೇಶ್ ಅವರ ಕಥೆಯಾಧಾರಿತ ʼಮುಟ್ಟಿಸಿಕೊಂಡವನುʼ, ಈ ಯುವ ಪೀಳಿಗೆಯಲ್ಲಿ ಅಂತರ್ಗತವಾಗಿರುವ ಕಲಾಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು.

ಭವಿಷ್ಯದ ಭರವಸೆಗಳು : ಈ ನಾಟಕೋತ್ಸವ ಮತ್ತು ಕೆ.ಆರ್. ಸುಮತಿ ನಿರ್ದೇಶನದ ʼಊರ ಸುಟ್ಟರೂ ಹನುಮಪ್ಪ ಹೊರಗʼ ನಾಟಕಗಳು, ರಂಗಭೂಮಿಗೆ ಖಂಡಿತವಾಗಿಯೂ ಭವಿಷ್ಯ ಇದೆ ಎನ್ನುವುದನ್ನು ಸಾಕ್ಷೀಕರಿಸಿವೆ. ರಂಗಕಲೆ ಅಥವಾ ರಂಗಭೂಮಿ ಎಂದರೆ ಕೇವಲ ಮನರಂಜನೆಯ ಪ್ರದರ್ಶನಕಲೆ ಅಲ್ಲ, ಅದು ಸಮಾಜಕ್ಕೆ ದಿಕ್ಸೂಚಿಯಾಗುವ ಮಾನವೀಯ ಸಂದೇಶವನ್ನು ನೀಡುವ ಒಂದು ಸೇತುವೆ ಎನ್ನುವುದನ್ನು ಇಂತಹ ಪ್ರಯತ್ನಗಳು ಮತ್ತೆ ಮತ್ತೆ ನಿರೂಪಿಸುತ್ತಲೇ ಇವೆ. ಮಿಲೆನಿಯಂ ಮಕ್ಕಳಲ್ಲಿ ಅನಾಸಕ್ತಿಯನ್ನು ಗುರುತಿಸುವುದರ ಬದಲು, ಅವರಲ್ಲಿ ಸುಪ್ತವಾಗಿರುವ ಕಲಾಸಕ್ತಿ ಮತ್ತು ಗುಪ್ತಗಾಮಿನಿಯಾಗಿ ಹರಿಯುತ್ತಿರಬಹುದಾದ ಕಲಾಪ್ರತಿಭೆಯನ್ನು ಗುರುತಿಸಿ ಹೊರಗೆಳೆಯುವುದು ಹಿರಿಯ ತಲೆಮಾರಿನ ಜವಾಬ್ದಾರಿಯಾಗಿರುತ್ತದೆ. ಮೈಸೂರಿನ ಹಲವು ತಂಡಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯೋನ್ಮುಖವಾಗಿವೆ.
ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಇಂತಹ ಪ್ರಯತ್ನಗಳನ್ನು ಉತ್ತೇಜಿಸಬೇಕಿದೆ. ಪ್ರಸ್ತುತ ಸಾಮಾಜಿಕ ಸಂದಿಗ್ಧತೆ ಮತ್ತು ಸಾಂಸ್ಕೃತಿಕ ಜಡತ್ವದ ಹಿನ್ನೆಲೆಯಲ್ಲಿ, ಸಮಾಜಕ್ಕೆ ಉದಾತ್ತ ಮಾರ್ಗವನ್ನು ತೋರುವ ಕ್ಷಮತೆಯುಳ್ಳ ರಂಗಭೂಮಿ ಮತ್ತು ರಂಗಕಲೆಯನ್ನು ಪಠ್ಯಕ್ರಮವನ್ನಾಗಿಸಿ, ಶಾಲಾ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕಿದೆ. ಇದು ಸರ್ಕಾರ ಗಂಭೀರವಾಗಿ ಯೋಚಿಸಬೇಕಾದ ವಿಚಾರ. ವಿದ್ಯುನ್ಮಾನ ಮಾಧ್ಯಮಗಳ ಮನರಂಜನಾ ಕಾರ್ಯಕ್ರಮಗಳಿಂದ ಭ್ರಮಾಧೀನವಾಗುತ್ತಿರುವ ಎಳೆಯ ಮಕ್ಕಳು ಮತ್ತು ಯುವ ಸಮಾಜವನ್ನು ವಾಸ್ತವ ಪ್ರಪಂಚಕ್ಕೆ ಕರೆತರುವ ಮೂಲಕ ಭವಿಷ್ಯದ ದಾರಿಗಳನ್ನು ಹಸನಾಗಿಸಬೇಕಿದೆ. ಈ ದಾರಿಯನ್ನು ಹೆದ್ದಾರಿಯಂತೆ ಕಟ್ಟಲು, ಮನುಷ್ಯ ಸಮಾಜವನ್ನು ಬಂಧಿಸುವ ಸೇತುವೆಗಳಂತೆ ನಿರ್ಮಿಸಲು ರಂಗಭೂಮಿ ಸಮರ್ಥ ವೇದಿಕೆಯೂ ಆಗಿದೆ.
ನಾ ದಿವಾಕರ
