ಕುಂದಾಪುರ : ಜನಪ್ರತಿನಿಧಿ ವಾರಪತ್ರಿಕೆಯ ಆಶ್ರಯದಲ್ಲಿ ಅಸ್ತಿತ್ವಕ್ಕೆ ಬಂದ ‘ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ಯ ಉದ್ಘಾಟನಾ ಸಮಾರಂಭ ಮತ್ತು ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳು ದಿನಾಂಕ 12 ಮಾರ್ಚ್ 2026ರಂದು ಶಾಸ್ತ್ರಿ ಸರ್ಕಲ್ ಸಮೀಪದ ಕಾಲೇಜು ರಸ್ತೆಯಲ್ಲಿರುವ ಜನಪ್ರತಿನಿಧಿ ವಾರಪತ್ರಿಕೆಯ ಕಛೇರಿಯ ಸಭಾಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಖ್ಯಾತ ಲೇಖಕಿ ಪಾರ್ವತಿ ಜಿ. ಐತಾಳ್ “ಮಹಿಳೆಯರನ್ನು ಮಹಿಳಾ ದಿನಾಚರಣೆಯಂದು ಹಾಡಿಹೊಗಳುವುದಕ್ಕಿಂತಲೂ ಅವರು ಅಂತರಂಗದಲ್ಲಿ ಅನುಭವಿಸುವ ನೋವುಗಳೇನು ಮತ್ತು ಆ ನೋವಿಗೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಅವರ ಕಷ್ಟಗಳನ್ನು ಸಮಾನವಾಗಿ ಹಂಚಿಕೊಳ್ಳುವ ಕೆಲಸ ಆಗಬೇಕಾಗಿದೆ. ಇತಿಹಾಸ-ಪರಂಪರೆ-ಪದ್ಧತಿಗಳನ್ನು ಅನುಸರಿಸುವ ನೆಪದಲ್ಲಿ ಹೆಣ್ಣಿನ ಮೇಲೆ ಮನೆಯೊಳಗಿನ ಎಲ್ಲರ ಚಾಕರಿ ಮಾಡಿಸುವುದನ್ನು ಇಂದಿನ ಬದಲಾದ ಯುಗದಲ್ಲಿ ಬದಲಾದ ಜೀವನ ಶೈಲಿಯಲ್ಲಿ ನಿಲ್ಲಿಸ ಬೇಕಾಗಿದೆ. ಮಾನವೀಯ ನೆಲೆಯಿಂದ ಅವಳ ವ್ಯಕ್ತಿತ್ವವನ್ನು ಗುರುತಿಸಿ, ಅವಳ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಬೇಕಾಗಿದೆ. ಭಾರತೀಯ ಭವ್ಯ ಸಂಸ್ಕೃತಿಯು ಅರ್ಧನಾರೀಶ್ವರ ತತ್ವದ ಮೇಲೆ ನಿಂತಿದೆ. ಅಂದ ಮೇಲೆ ಹೆಣ್ಣು-ಗಂಡು ಎಲ್ಲಾ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದೇ ನ್ಯಾಯ” ಎಂದು ಹೇಳಿದರು.

ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ರಂಗಭೂಮಿ ಕಲಾವಿದೆ- ಚಿತ್ರನಟಿ- ಲೇಖಕಿ ಪೂರ್ಣಿಮಾ ಸುರೇಶ್ “ಹೆಣ್ಣು ಸಮಾಜದ ತಾರತಮ್ಯ ಧೋರಣೆಯಿಂದ ಅನುಭವಿಸುವ ಕಷ್ಟಗಳ ಕುರಿತು ಮಾತನಾಡುತ್ತಾ ಕಲಾಕ್ಷೇತ್ರದಲ್ಲೂ ಸಾಹಿತ್ಯ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ತಮಗೆ ಸಹಜವಾಗಿ ಅನ್ನಿಸಿದ್ದನ್ನು ಹೇಳಲು ಭಯಪಡುವಂಥ ಪರಿಸ್ಥಿತಿಯಿದೆ. ಆದರೆ ಕೊಲ್ಲಿರಾಷ್ಟ್ರಗಳನ್ನು ಹೆಣ್ಣನ್ನು ಒಂದು ವಸ್ತುವಿನಂತೆಯೋ ಪ್ರಾಣಿಯಂತೆಯೋ ಕಾಣುವ ತಾತ್ಸಾರಭಾವದಿಂದ ನಾವು ಭಾರತೀಯರು ಸಂಪೂರ್ಣ ಮುಕ್ತರಾಗಿದ್ದೇವೆ. ಆ ಮಟ್ಟಿಗೆ ನಾವು ಅದೃಷ್ಟವಂತರು” ಅಂದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ ಲೇಖಕಿ- ಕಲಾವಿದೆ ಸುಪ್ರಸನ್ನ ನಕ್ಕತ್ತಾಯರು ವೇದಿಕೆಗೆ ಶುಭಕೋರಿ ಮಹಿಳೆಯ ಕುರಿತು ತಾವು ಬರೆದ ಕವಿತೆಯನ್ನು ವಾಚಿಸಿದರು. ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರು ಮತ್ತು ಜನಪ್ರತಿನಿಧಿ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆಯವರು ಸಂದರ್ಭೋಚಿತ ಮಾತುಗಳನ್ನಾಡಿದರು. ಚಿತ್ರಕಲಾವಿದೆ ಶ್ರೀಮತಿ ನೇಹಾ ಗಂಗೊಳ್ಳಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯ ಕಾರ್ಯದರ್ಶಿ ಲೇಖಕಿ ಪೂರ್ಣಿಮಾ ಕಮಲಶಿಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ರಾಧಾಕಾರಂತ ಮತ್ತು ಜಯಲಕ್ಷ್ಮಿ ಕಾರಂತರು ಆರಂಭಗೀತೆಯನ್ನು ಹಾಡಿದರು. ರೇಡಿಯೋ ಕುಂದಾಪುದ ಜ್ಯೋತಿ ಸಾಲಿಗ್ರಾಮ ಸನ್ಮಾನ ಪತ್ರವನ್ನು ವಾಚಿಸಿದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯ ಜತೆಕಾರ್ಯದರ್ಶಿ ಜೆಸ್ಸಿ ಎಲಿಜಬೆತ್ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ರೋಹಿಣಿ ಹತ್ವಾರ್, ನಳಿನಿ ರಾವ್, ಶ್ರೀದೇವಿ ಹಂದೆ, ಡಾ. ಸಂಧ್ಯಾ ಅಡಿಗ ಮೊದಲಾದವರಿಂದ ಭಾವಗಾಯನ ನಡೆಯಿತು.
