ಮೈಸೂರು : ಕರ್ನಾಟಕದ ಪ್ರಮುಖ ರಂಗಸಂಸ್ಥೆಗಳಲ್ಲಿ ಒಂದಾದ ರಂಗಾಯಣ ಮೈಸೂರಿನ ಸಹಯೋಗದಲ್ಲಿ, ಶಿವಮೊಗ್ಗ ರಂಗಾಯಣವು ದಿನಾಂಕ 20 ಮತ್ತು 21 ಜೂನ್ 2026ರಂದು ಸಂಜೆ 6-30 ಗಂಟೆಗೆ ಮೈಸೂರಿನ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶಿಸುತ್ತಿರುವ ‘ಸ್ವಾತಂತ್ರ್ಯದ ಓಟ’ ನಾಟಕವು ಕನ್ನಡ ರಂಗಭೂಮಿಯ ಗಮನಾರ್ಹ ಪ್ರದರ್ಶನಗಳಲ್ಲಿ ಒಂದಾಗಿದೆ. ಬೋಳ್ವಾರ್ ಮಹಮ್ಮದ್ ಕುಂಞಿ ಇವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕಾದಂಬರಿಯನ್ನು ಆಧರಿಸಿ ರೂಪುಗೊಂಡಿರುವ ಈ ನಾಟಕವು ಭಾರತದ ಸ್ವಾತಂತ್ರ್ಯ, ದೇಶ ವಿಭಜನೆ ಮತ್ತು ಮಾನವೀಯ ಮೌಲ್ಯಗಳ ಸುತ್ತ ಹೆಣೆಯಲ್ಪಟ್ಟಿರುವ ಅಪೂರ್ವ ರಂಗಕೃತಿಯಾಗಿದೆ.
ರಂಗಾಯಣ ಮೈಸೂರು ಆಯೋಜಿಸಿರುವ ಈ ನಾಟಕವನ್ನು ಖ್ಯಾತ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಇವರು ನಿರ್ದೇಶಿಸಿದ್ದಾರೆ. ನಾಟಕ ರೂಪಾಂತರವನ್ನು ಮಂಜುನಾಥ್ ಗೋಣಿಮರದಹಳ್ಳಿ ಮಾಡಿದ್ದಾರೆ. ರಂಗ ಸಜ್ಜಿಕೆಯನ್ನು ಮಧುಸೂದನ್, ರಮೇಶ್ ಎಸ್. ಹಾಗೂ ಶಂಕರ್ ಕೆ. ಬೆಟ್ಟಲಕೆರೆ ಇವರು ನಿರ್ವಹಿಸಿದ್ದು, ಸಂಗೀತ ನಿರ್ದೇಶನವನ್ನು ರಾಘವ ಕಮ್ಮಾರ್ ನೀಡಿದ್ದಾರೆ. ವಸ್ತ್ರ ವಿನ್ಯಾಸ ಸಹನಾ ಪಿಂಜಾರ್ ಅವರದು.

ನಾಟಕವು ಚರಕವನ್ನು ಎಳೆಯುವ ಬಾಲಕನ ದೃಶ್ಯದೊಂದಿಗೆ ಆರಂಭವಾಗುತ್ತದೆ. ಇದು ಮಹಾತ್ಮ ಗಾಂಧೀಜಿಯವರ ಸ್ವದೇಶಿ ಚಳವಳಿ ಮತ್ತು ಸ್ವಾತಂತ್ರ್ಯದ ಕನಸಿನ ಸಾಂಕೇತಿಕ ಅಭಿವ್ಯಕ್ತಿಯಾಗಿದೆ. ಅಲ್ಲಿಂದ ಕಥೆ ನಿಧಾನವಾಗಿ ದೇಶ ವಿಭಜನೆಯ ಕರಾಳ ದಿನಗಳತ್ತ ಸಾಗುತ್ತದೆ. ವಿಭಜನೆಯಿಂದ ಜನರ ಬದುಕಿನಲ್ಲಿ ಉಂಟಾದ ಸಂಕಷ್ಟಗಳು, ವಲಸೆ, ನೋವು, ಅನಿಶ್ಚಿತತೆ ಹಾಗೂ ಮಾನವ ಸಂಬಂಧಗಳ ಸೂಕ್ಷ್ಮತೆಗಳನ್ನು ನಾಟಕ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ಚಾಂದ್ ಅಲಿ ಎಂಬ ಪಾತ್ರದ ಜೀವನ ಪಯಣದ ಮೂಲಕ ಧರ್ಮಕ್ಕಿಂತ ಮನುಷ್ಯತ್ವ ದೊಡ್ಡದು ಎಂಬ ಸಂದೇಶವನ್ನು ನಾಟಕ ಸಾರುತ್ತದೆ. ಮಾನವೀಯತೆ, ನಂಬಿಕೆ, ಕರ್ತವ್ಯಪ್ರಜ್ಞೆ ಮತ್ತು ಸಹಬಾಳ್ವೆಯ ಮೌಲ್ಯಗಳು ಕಥೆಯ ಕೇಂದ್ರಬಿಂದುವಾಗಿವೆ. ವಿಶೇಷವಾಗಿ ಗಾಂಧೀಜಿಯವರ ಹತ್ಯೆಯ ಘಟನೆಯನ್ನು ನೇರವಾಗಿ ತೋರಿಸದೇ, ಪಾತ್ರಗಳ ಭಾವನೆಗಳ ಮೂಲಕ ಕಟ್ಟಿಕೊಟ್ಟಿರುವುದು ನಿರ್ದೇಶಕರ ಕಲಾತ್ಮಕ ಪ್ರೌಢಿಮೆಗೆ ಸಾಕ್ಷಿಯಾಗಿದೆ.
ರಾಘವ ಕಮ್ಮಾರ್ ಇವರ ಸಂಗೀತ ಮತ್ತು ಗಾಯನ ತಂಡದ ಜೀವಂತ ನಿರೂಪಣೆ, ಬೆಳಕು ವಿನ್ಯಾಸ, ವಸ್ತ್ರ ವಿನ್ಯಾಸ ಹಾಗೂ ಕಲಾವಿದರ ಸಮರ್ಥ ಅಭಿನಯ ನಾಟಕಕ್ಕೆ ವಿಶೇಷ ಮೆರುಗು ತಂದಿವೆ. ಪ್ರತಿಯೊಂದು ದೃಶ್ಯವೂ ಪ್ರೇಕ್ಷಕರನ್ನು ಆ ಕಾಲಘಟ್ಟದೊಳಗೆ ಕರೆದೊಯ್ಯುವಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ ‘ಸ್ವಾತಂತ್ರ್ಯದ ಓಟ’ ಕೇವಲ ಒಂದು ನಾಟಕವಲ್ಲ; ಅದು ಇತಿಹಾಸದ ನೆನಪುಗಳನ್ನು ಮರುಕಳಿಸುವ, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಚಿಂತಿಸುವಂತೆ ಮಾಡುವ ಮತ್ತು ಮಾನವೀಯ ಮೌಲ್ಯಗಳನ್ನು ಪುನರ್ಪರಿಶೀಲಿಸಲು ಪ್ರೇರೇಪಿಸುವ ಒಂದು ಅಪೂರ್ವ ರಂಗಾನುಭವವಾಗಿದೆ. ಮಳವಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಈ ನಾಟಕಕ್ಕೆ ದೊರೆತಿರುವ ಪ್ರೇಕ್ಷಕರ ಅಪಾರ ಸ್ಪಂದನೆ ಅದರ ಕಲಾತ್ಮಕ ಯಶಸ್ಸಿಗೆ ಸಾಕ್ಷಿಯಾಗಿದೆ. ಕನ್ನಡ ರಂಗಭೂಮಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ತಪ್ಪದೇ ವೀಕ್ಷಿಸಬೇಕಾದ ನಾಟಕ ಇದಾಗಿದೆ. ಕುಟುಂಬ ಸಮೇತರಾಗಿ ಬಂದು ಈ ಅದ್ಭುತ ರಂಗಯಾನವನ್ನು ಅನುಭವಿಸಿ.
– ಶ್ರೀನಿವಾಸ್ ಪಾಲಹಳ್ಳಿ
