ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ದ ಏಳನೇ ದಿನದ ಕಾರ್ಯಕ್ರಮವು ದಿನಾಂಕ 31 ಮೇ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ವಿ. ರಾಘವೇಂದ್ರ ರಾವ್ ಮಾತನಾಡಿ “ಕಲಾವಿದರು ಬವಣೆ ಪಟ್ಟು, ಪರಿಶ್ರಮದಿಂದ, ತಮ್ಮನ್ನೇ ಕಲೆಗಾಗಿ ಮುಡಿಪಾಗಿರಿಸಿಕೊಳ್ಳುತ್ತಾರೆ. ಆಗ ಅವರನ್ನು ಸಮಾಜ ಗುರುತಿಸಿದರೆ ಇನ್ನೂ ಹುಮ್ಮಸಿನಿಂದ ಕಲೆಯೊಳಗೆ ಒಂದಾಗುತ್ತಾರೆ. ಯಕ್ಷಗಾನವು ಒಂದು ಶಕ್ತಿಯನ್ನು ಬಯಸುವ ಕಲೆಯಾಗಿದೆ. ಪ್ರಾದೇಶಿಕವಾಗಿ ಶ್ರೀಮಂತ ಕಲೆಯೆನಿಸಿದರೂ ಇಂದು ಅದರ ವ್ಯಾಪ್ತಿ ವಿಶ್ವವನ್ನು ತಲುಪಿದೆ. ಎಳೆಯರು, ಮಹಿಳೆಯರಾದಿಯಾಗಿ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ಅವರನ್ನು ಬೆಳೆಸುವ ಹೊಣೆ ನಮಗಿದೆ. ಅದನ್ನು ನಾವು ಸಹಕರಿಸಿ ಬೆಂಬಲಿಸೋಣ. ಕಲೆ ಕಲಾವಿದರನ್ನು ಪ್ರೋತ್ಸಾಹಿಸೋಣ. ಸರಯೂ ಸಂಸ್ಥೆ ಕಲೆಗಾಗಿ ಶ್ರಮಿಸುತ್ತಿರುವ ಸಂಸ್ಥೆ.” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಾಸ್ಯಗಾರ ಮಹೇಶ್ ಮಣಿಯಾಣಿ ದೊಡ್ತೋಟ ಹಾಗೂ ಯಕ್ಷಕಲಾ ಸುರತ್ಕಲ್ ನ ಸಂಚಾಲಕಿ ಕಲಾವತಿ ಟೀಚರ್ ಇವರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ತುಳುಕೂಟದ ಉಪಾದ್ಯಕ್ಷ ರೊ. ಜೆ.ವಿ. ಶೆಟ್ಟಿ, ಸಾಹಿತಿ ಗೀತಾ ಲಕ್ಷ್ಮೀಶ್, ದೀಪಕ್ ಶರ್ಮಾ, ಗುರುಪ್ರಸಾದ್, ಕಡಂಬಾರ್, ಗಿರೀಶ್ ರೈ ಕಕ್ಕೆಪದವು, ಲ. ಸಂಜಯ ಕುಮಾರ್ ಶೆಟ್ಟಿ, ಗೋಣಿಬೀಡು, ಸೀತಾರಾಂ ಕುಮಾರ್, ವರ್ಕಾಡಿ ಮಧುಸೂದನ ಎ. ಉಪಸ್ಥಿತರಿದ್ದರು. ಸನ್ಮಾನ ಪತ್ರಗಳನ್ನು ಪೂರ್ಣಿಮಾ ಪ್ರಭಾಕರ ರಾವ್ ಹಾಗೂ ವರ್ಕಾಡಿ ರವಿ ಅಲೆವೂರಾಯ ವಾಚಿಸಿದರು. ನಿರೂಪಕ ಸುಧಾಕರ ರಾವ್ ನಿರ್ವಹಿಸಿ, ಧನ್ಯವಾದವಿತ್ತರು.

ಕೋಡಿಕಲ್ ಸರಯೂ ಮಹಿಳಾ ವೃಂದದವರಿಂದ ‘ನಾಸಾಚ್ಛೇದನ’, ಕೊಂಚಾಡಿ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಇವರಿಂದ ‘ಗಿರಿಜಾ ಕಲ್ಯಾಣ’, ಸುರತ್ಕಲ್ ಯಕ್ಷಕಲಾ ಇವರಿಂದ ‘ರಾವಣ ವಧೆ’, ಕದ್ರಿ ಯಕ್ಷ ಮಂಜುಳಾ ಮಹಿಳಾ ತಾಳಮದ್ದಲೆ ಬಳಗದವರಿಂದ ‘ಮಂಡೋದರಿ ಪರಿಣಯ’ ಮಹಿಳಾ ತಾಳಮದ್ದಲೆ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀ ಕೃಷ್ಣ ಲೀಲೆ – ಚಂದ್ರಾವಳಿ ವಿಲಾಸ’ ಪ್ರಸಂಗದ ಯಕ್ಷಗಾನ ತಾಳಮದ್ದಲೆ ಪ್ರಸ್ತುತಗೊಂಡಿತು.




