ಚೆನ್ನೈ : ತಮಿಳುನಾಡಿನ ಕವಿ ಹಾಗೂ ಗೀತರಚನೆಕಾರ ವೈರಮುತ್ತು ಇವರು ದೇಶದ ಅತ್ಯುನ್ನತ ಪ್ರತಿಷ್ಠಿತ 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1975ರಲ್ಲಿ ಅಖಿಲನ್ ಮತ್ತು 2002ರಲ್ಲಿ ಜಯಕಾಂತನ್ ನಂತರ, ಜ್ಞಾನಪೀಠ ಪ್ರಶಸ್ತಿ ಪಡೆದ ತಮಿಳುನಾಡಿನ ಮೂರನೇ ಸಾಹಿತಿ ಇವರು. ತಮ್ಮ ಸಾಹಿತ್ಯಕ್ಕಾಗಿ ಏಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದು. ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವಗಳಿಗೂ ಭಾಜನರಾಗಿದ್ದಾರೆ. 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, 7,500ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ತಮಿಳು ಸಾಹಿತ್ಯ ಮತ್ತು ಚಲನಚಿತ್ರ ಗೀತೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಕವಿ ವೈರಮುತ್ತು ಸಮಕಾಲೀನ ತಮಿಳು ಕಾವ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಗೌರವದ ಪ್ರಶಸ್ತಿಗಳಲ್ಲಿ ಒಂದಾದ ಜ್ಞಾನಪೀಠ ಪ್ರಶಸ್ತಿ ಕುರಿತು ಮಾತನಾಡುವಾಗ, ಅವರ ಹೆಸರು ಕೂಡ ಹಲವು ಬಾರಿ ಉಲ್ಲೇಖವಾಗುತ್ತಿತ್ತು. ಜ್ಞಾನಪೀಠ ಪ್ರಶಸ್ತಿ ಭಾರತದಲ್ಲಿನ ವಿವಿಧ ಭಾಷೆಗಳಲ್ಲಿ ಸೃಷ್ಟಿಯಾಗುವ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ನೀಡಲಾಗುವ ಅತ್ಯುನ್ನತ ಗೌರವವಾಗಿದೆ. ಈ ಪ್ರಶಸ್ತಿ ಕೇವಲ ಒಂದು ಕೃತಿಗೆ ಮಾತ್ರವಲ್ಲ, ಬರಹಗಾರನ ದೀರ್ಘಕಾಲದ ಸಾಹಿತ್ಯ ಸೇವೆ ಮತ್ತು ಭಾಷೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗೌರವಿಸುತ್ತದೆ. 24 ವರ್ಷಗಳ ನಂತರ ತಮಿಳಿಗೆ ಈ ಪ್ರಶಸ್ತಿ ದೊರಕುತ್ತಿದೆ ಎಂಬುದೇ ತಮಿಳರಿಗೆ ಹೆಮ್ಮೆಯ ಸಂಗತಿ.
ವೈರಮುತ್ತು ಇವರು 13 ಜುಲೈ 1953ರಂದು ತಮಿಳುನಾಡಿನ ತೇಣಿ ಜಿಲ್ಲೆಯ ಬಳಿ ಪಡುಗಪಟ್ಟಿ ಎಂಬ ಗ್ರಾಮದಲ್ಲಿ ಅಂಗಮ್ಮಾಳ್, ರಾಮಸಾಮಿ ದಂಪತಿಗೆ ಜನಿಸಿದವರು. ಚೆನ್ನೈ ಪಟ್ಟೆಯಪ್ಪ ಕಾಲೇಜಿನಲ್ಲಿ ತಮಿಳು ಸಾಹಿತ್ಯ ಕಲಿತವರು. 5800 ಹೆಚ್ಚು ಸಿನಿಮಾ ಹಾಡುಗಳನ್ನು ಬರೆದಿದ್ದಾರೆ. ವೈರಮುತ್ತು ತಮ್ಮ ಕವನಗಳು, ಕಾದಂಬರಿಗಳು, ಪ್ರಬಂಧಗಳು ಮತ್ತು ಚಲನಚಿತ್ರ ಗೀತೆಗಳ ಮೂಲಕ ತಮಿಳು ಭಾಷೆಯ ಸೌಂದರ್ಯವನ್ನು ಹೊಸ ಪೀಳಿಗೆಗೆ ಪರಿಚಯಿಸಿದವರು. ಅವರ ‘ಕರುವಾಚಿ ಕಾವ್ಯಂ’ ಮತ್ತು ‘ಕಳ್ಳಿಕ್ಕಾಟ್ಟು ಇತಿಹಾಸಂ’ ಎಂಬ ಕೃತಿಗಳು ಗ್ರಾಮೀಣ ಜೀವನ, ಮಾನವೀಯ ಭಾವನೆಗಳು ಮತ್ತು ಸಾಮಾಜಿಕ ಬದಲಾವಣೆಗಳನ್ನು ಆಳವಾಗಿ ಚಿತ್ರಿಸುತ್ತವೆ. ವಿಶೇಷವಾಗಿ ‘ಕಳ್ಳಿಕ್ಕಾಟ್ಟು ಇತಿಹಾಸಂ’ ಕಾದಂಬರಿ ತಮಿಳುನಾಡಿನ ಗ್ರಾಮೀಣ ಜನರ ಬದುಕನ್ನು ಜೀವಂತವಾಗಿ ದಾಖಲಿಸಿದ ಮಹತ್ವದ ಸಾಹಿತ್ಯ ಕೃತಿ ಎಂದು ಪರಿಗಣಿಸಲಾಗುತ್ತದೆ.
ಚಿತ್ರಗೀತೆಗಳ ಕ್ಷೇತ್ರದಲ್ಲಿಯೂ ವೈರಮುತ್ತು ಹೊಸ ಕಾವ್ಯಭಾಷೆಯನ್ನು ನಿರ್ಮಿಸಿದ್ದಾರೆ. ಪ್ರಕೃತಿ, ಪ್ರೀತಿ, ಮಾನವ ಮನಸ್ಸು ಮತ್ತು ಸಾಮಾಜಿಕ ಅರಿವುಗಳು ಇವರ ಗೀತೆಗಳಲ್ಲಿ ಕಾವ್ಯಮಯವಾಗಿ ವ್ಯಕ್ತವಾಗುತ್ತವೆ. ಇದರ ಮೂಲಕ ತಮಿಳು ಕಾವ್ಯವು ಸಾಮಾನ್ಯ ಜನರ ಜೀವನದೊಂದಿಗೆ ಇನ್ನಷ್ಟು ಹತ್ತಿರವಾಗಿದೆ. ಇಂದು ವೈರಮುತ್ತು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದು, ಅವರ ಸಾಹಿತ್ಯ ಕೊಡುಗೆ ಆ ಮಟ್ಟಿಗೆ ಮಹತ್ವದ್ದೆಂದು ಅನೇಕರು ಅಭಿಪ್ರಾಯಪಡುತ್ತಾರೆ. ತಮಿಳು ಪರಂಪರೆಯನ್ನೂ ಸಮಕಾಲೀನ ಭಾವನೆಗಳನ್ನೂ ಒಟ್ಟುಗೂಡಿಸಿ ತೋರಿಸಿದ ಅವರ ಕೃತಿಗಳು ಭಾರತೀಯ ಸಾಹಿತ್ಯ ಲೋಕದಲ್ಲಿ ಅವರಿಗೆ ವಿಶೇಷ ಸ್ಥಾನವನ್ನು ನೀಡಿವೆ.
‘ಸಾಹಿತ್ಯದಲ್ಲಿ ಶ್ರೇಷ್ಠವಾದುದಕ್ಕಿಂತ ಜ್ಞಾನಪೀಠ ಶ್ರೇಷ್ಠ. ತಮಿಳಿಗೆ ಅದು ತೀರಾ ವಿರಳವಾದುದು. ಭಾರತೀಯ ಸಾಹಿತ್ಯದ ನೊಬೆಲ್ ಎಂದು ಅಕ್ಷರ ಜಗತ್ತು ಪರಿಗಣಿಸುವ ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ನನಗೆ ತುಂಬಾ ಸಂತೋಷ ವಾಗುತ್ತದೆ’ ಎಂದು ವೈರಮುತ್ತು ಸಂತಸ ವ್ಯಕ್ತಪಡಿಸಿದ್ದಾರೆ.
