ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಯಕ್ಷಗಾನ ಕೇಂದ್ರದ ಆರು ತಿಂಗಳ ಕಾಲ ನಿರಂತರ ನಡೆಯುವ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆ ತರಗತಿಯನ್ನು ದಿನಾಂಕ 06 ಜೂನ್ 2026ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಆರತಿ ಬೆಳಗಿ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಗಾನ ವಿದ್ವಾಂಸ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ್ “ವೇಷ ಮಾಡುವ ತುರ್ತಿನಿಂದ ಯಕ್ಷಗಾನ ಕಲಿಯುವ ಅನಿವಾರ್ಯತೆ ಆರೋಗ್ಯಕರವಾದ ಬೆಳವಣಿಗೆಯಲ್ಲ. ಸಮರ್ಥ ಗುರುಗಳಿಂದ ಅಭ್ಯಾಸ ಮಾಡದೇ ರಂಗಕ್ಕಿಳಿಯುವುದು ಯಕ್ಷ ಶಿಕ್ಷಣಕ್ಕೆ ಅಪಚಾರ. ಯಕ್ಷಗಾನದಲ್ಲಿ ಅಪಸವ್ಯಗಳು ದೂರವಾಗಬೇಕು. ಕ್ರಮಬದ್ಧವಾದ ಯಕ್ಷ ಶಿಕ್ಷಣವನ್ನು ಕಲಿಯಬೇಕಾದರೆ ಇಂತಹ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಯಶಸ್ವಿ ಯಕ್ಷಗಾನ ಕೇಂದ್ರದಲ್ಲಿ ಅನೇಕ ಒಳ್ಳೆಯ ವಿದ್ಯಾರ್ಥಿಗಳು ತಯಾರಾಗಿದ್ದಾರೆ. ಅರ್ಪಣಾ ಮನೋಭಾವವು ಇಲ್ಲಿನ ಗುರುಗಳಲ್ಲಿದೆ. ಅತ್ಯುತ್ತಮ ಗುರುವಿದ್ದಲ್ಲಿ ಉತ್ತಮ ಶಿಕ್ಷಣ ನಡೆಯುತ್ತದೆ ಎಂಬುವುದಕ್ಕೆ ತೆಕ್ಕಟ್ಟೆ ಯಶಸ್ವಿ ಕಲಾವೃಂದ ಸಾಕ್ಷಿ” ಎಂದು ಹೇಳಿದರು.

ಮುಖ್ಯ ಅಭ್ಯಾಗತರಾದ ಕೆ. ತಾರಾನಾಥ ಹೊಳ್ಳ ಇವರು ಮಾತನಾಡಿ “ಹಲವಾರು ವರ್ಷಗಳಿಂದ ಹಲವು ಚಟುವಟಿಕೆಗಳಿಂದ ಹೆಸರಾದ ಸಂಸ್ಥೆ ಯಶಸ್ವಿ. ಯಶಸ್ಸಿನ ಹಾದಿಯಲ್ಲೇ ಹಲವು ವರ್ಷಗಳಿಂದ ಯಕ್ಷಗಾನ ತರಗತಿಯನ್ನು ಮಾಡುತ್ತಾ ಅನೇಕ ವಿದ್ಯಾರ್ಥಿಗಳನ್ನು ರಂಗಕ್ಕೆ ತಯಾರು ಮಾಡುವುದು ಸುಲಭವಲ್ಲ” ಎಂದು ಶ್ಲಾಘಿಸಿದರು. “ತರಗತಿಯ ಶಿಸ್ತು ಕಲಿಕೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ” ಎಂದು ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಹೇಳಿದರು. “ನಿಯಮಾನುಸಾರ ಸಮವಸ್ತ್ರಕ್ಕೆ ಸಿದ್ಧರಾಗಿ ತರಗತಿಗೆ ಹಾಜರಾದರೆ ಕಲಿಕೆಯು ಶಿಸ್ತಿನಿಂದಲೇ ಕೂಡಿರುತ್ತದೆ” ಎಂದು ಗುರು ಲಂಬೋದರ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿದರು. ಗುರು ರೋಹಿತ್ ತೀರ್ಥಹಳ್ಳಿ ಉಪಸ್ಥಿತರಿದ್ದರು. ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿ, ಪೂಜಾ ಆಚಾರ್ ವಂದಿಸಿದರು.
