ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಪ್ರಸಿದ್ಧ ಲೇಖಕಿ, ವಿಮರ್ಶಕಿ ಡಾ. ಗೀತಾ ವಸಂತ ಇವರ ‘ತೆರೆದಷ್ಟೂ ಅರಿವು’ ವಿಮರ್ಶಾ ಕೃತಿಯು 2025ರ ಸಾಲಿಗೆ ಆಯ್ಕೆಯಾಗಿದೆಯೆಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಪ್ರಶಸ್ತಿಯನ್ನು ದಿನಾಂಕ 15 ಏಪ್ರಿಲ್ 2026ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಗೀತಾ ವಸಂತ ಅವರು ಮೂಲತ: ಉತ್ತರಕನ್ನಡದ ಕಾಡನಡುವಿನ ಕಾಟೀಮನೆಯವರು. ಶಿರಸಿಯಲ್ಲಿ ಪದವಿ ಹಾಗೂ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ‘ಸ್ವಾತಂತ್ರ್ಯೋತ್ತರ ಕನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಸ್ತ್ರೀ ವಾದಿ ಚಿಂತನೆಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಹಾಗೂ ‘ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ’ ಪ್ರಬಂಧಕ್ಕೆ ಡಿ.ಲಿಟ್ ಪದವಿ ಪಡೆದಿದ್ದಾರೆ.
ಕಾವ್ಯ, ಸಣ್ಣಕಥೆ, ವಿಮರ್ಶೆ, ಮಹಿಳಾ ಅಧ್ಯಯನ, ಸಂಸ್ಕೃತಿ ಅಧ್ಯಯನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ‘ಹೊಸಿಲಾಚೆ ಹೊಸಹೆಜ್ಜೆ’ ಮೊದಲ ಕವನ ಸಂಕಲನ. ‘ಚೌಕಟ್ಟಿನಾಚೆಯವರು’ ಕಥಾಸಂಕಲನ, ‘ಬೆಳಕಿನ ಬೀಜ’, ‘ಹೊಸ ದಿಗಂತ ಹೊಸದಾರಿ’, ‘ಬೀಜದೊಳಗಣ ವೃಕ್ಷ’, ‘ಅಕ್ಷರದಾಹ’, ‘ತೆರೆದಷ್ಟೂ ಅರಿವು’ ಮುಂತಾದವು ಇವರ ವಿಮರ್ಶಾ ಕೃತಿಗಳು. ಬೇಂದ್ರೆ ಕಾವ್ಯದ ಅವಧೂತ ಪ್ರಜ್ಞೆ, ತುಮಕೂರು ಜಿಲ್ಲೆಯ ಮಹಿಳಾ ಲೇಖಲೋಕ, ಕರ್ನಾಟಕದ ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲೆ ಅವಧೂತ ಪರಂಪರೆಗಳ ಪ್ರಭಾವ ಇವು ಇವರ ಸಂಶೋಧನೆಗಳು.‘ಅವಳ ಅರಿವು’, ‘ಕನ್ನಡಕ್ಕೊಬ್ಬರೇ ಗೋಕಾಕರು’, ‘ಕಂಡವರಿಗಷ್ಟೆ’, ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ’ ಇವು ಸಂಪಾದಿತ ಕೃತಿಗಳು.
ಸೃಜನಶೀಲ ಬರವಣಿಗೆಯ ಜತೆ ವಿಮರ್ಶೆ, ಸ್ತ್ರೀ ಸಂವೇದನೆ, ಸಂಸ್ಕೃತಿ ಚಿಂತನೆಗಳೂ ಇವರ ಆಸಕ್ತಿಯ ಕ್ಷೇತ್ರಗಳು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ ವಿಚಾರ ಸಂಕಿರಣ, ಸಮ್ಮೇಳನ ಹಾಗೂ ಕಮ್ಮಟಗಳನ್ನು ಆಯೋಜಿಸಿದ್ದಾರೆ. ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಡಾ. ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪುರಸ್ಕಾರ, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
