ಕಾಸರಗೋಡು : ಸಂಧ್ಯಾರಾಣಿ ಟೀಚರ್ ಮುಖ್ಯಸ್ಥೆಯಾಗಿರುವ ಕನ್ನಡ ಭವನ ಪ್ರಕಾಶನಕ್ಕೆ ಮೂರನೇ ವಾರ್ಷಿಕೋತ್ಸವದ ಸಂಭ್ರಮವನ್ನು ದಿನಾಂಕ 22 ಏಪ್ರಿಲ್ 2026ರ ಬುಧವಾರ ಸಂಜೆ 5-00 ಗಂಟೆಗೆ ಕಾಸರಗೋಡು ಕನ್ನಡ ಭವನ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪತ್ರಕರ್ತ, ಕನ್ನಡ ಭವನ ಗೌರವ ಅಧ್ಯಕ್ಷ ಹಾಗೂ ರಾಮರಾಜ ಕ್ಷತ್ರಿಯ ಸೇವಾಸಂಘ ಜಿಲ್ಲಾಧ್ಯಕ್ಷ ಶ್ರೀ ಪ್ರದೀಪ್ ಬೇಕಲ್ ಇವರ ಅದ್ಯಕ್ಷತೆಯಲ್ಲಿ, ಕನ್ನಡ ಭವನ ನಿರ್ದೇಶಕ, ಧಾರ್ಮಿಕ ಮುಂದಾಳು ಡಾ. ಕೆ.ಏನ್. ವೆಂಕಟ್ರಮಣ ಹೊಳ್ಳ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಲ್ ಇಂಡಿಯಾ ಲೆವೆಲ್ ನಲ್ಲಿ ರಾಂಕ್ ಗಳಿಸಿ ಎಮ್.ಬಿ.ಬಿ.ಎಸ್., ಡಿ.ಏನ್.ಬಿ (ಜೆನರಲ್ ಸರ್ಜರಿ) ನಂತರ ಎಮ್.ಸಿ.ಎಚ್, ನ್ಯೂರೋ ಸರ್ಜರಿಗೆ ಆಯ್ಕೆಯಾದ ಡಾ. ಸಚಿನ್ ಬೇಕಲ್, ಅನಂಗೂರ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಜೆ.ಎ.ಐ.ಐ.ಬಿ, ಮತ್ತು ಸಿ.ಎ.ಐ.ಐ.ಬಿ. ಪರೀಕ್ಷೆಗಳಲ್ಲಿ ಅಲ್ ಇಂಡಿಯಾ ಲೆವೆಲ್ ನಲ್ಲಿ ರಾಂಕ್ ಗಳಿಸಿ ಫಾಸ್ಟ್ ಟ್ರ್ಯಾಕ್ ನಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆ ಪ್ರತಿಭೆಯ ಮಾನದಂಡದಲ್ಲಿ ಕರಗತ ಮಾಡಿಕೊಂಡ ಶ್ರೀಮತಿ ದಯಾವತಿ ಇವರುಗಳಿಗೆ, ಕನ್ನಡ ಭವನದ ಪ್ರತಿಭಾ ಪುರಸ್ಕಾರವಾದ ‘ಭರವಸೆಯ ಭಾರತ ರತ್ನ’ ಅಭಿನಂದನಾ ಪ್ರಶಸ್ತಿ ನೀಡಿ ಗೌರವಿಸಲಿದೆ.
ಈ ವೇಳೆ ಲಕ್ಷ್ಮಿ ಎಸ್. ಇವರ ಕವನಸಂಕಲನ ‘ಅಂತರ್ದ್ವನಿ’ ಕನ್ನಡ ಭವನ ಪ್ರಕಾಶನದ ಹದಿನಾಲ್ಕನೇ ಕೃತಿಯನ್ನು ಲೇಖಕಿ, ಕವಯತ್ರಿ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್ ಬಿಡುಗಡೆಗೊಳಿಸಲಿದ್ದು, ‘ಕವಿತಾ ಗಾಯನ – ಗೀತಾ ಗಾಯನ’ ನಡೆಯಲಿದೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.


