ಉರ್ವಸ್ಟೋರ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್ ಇದರ ಆಶ್ರಯದಲ್ಲಿ ದಿನಾಂಕ 20 ಮಾರ್ಚ್ 2026ರ ಶುಕ್ರವಾರ ಮಂಗಳೂರಿನ ಉರ್ವಸ್ಟೋರ್ನ ತುಳು ಭವನದಲ್ಲಿ ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಇವರು ಮಾತನಾಡಿ “ಸಾವಿರಾರು ವರ್ಷಗಳಿಂದ ಲಿಪಿ, ಅಕ್ಷರವಿಲ್ಲದ ಸಂದರ್ಭದಲ್ಲಿ ತುಳು ಭಾಷೆಯನ್ನು ಉಳಿಸಿರುವುದು ದೈವಗಳು. ತುಳು ಭಾಷೆ ಕರಾವಳಿ ಪ್ರದೇಶದ ಸಂಸ್ಕೃತಿ, ಆಚಾರಗಳ ಕೈಗನ್ನಡಿ. ಭಾಷೆಯನ್ನು ಮರೆತರೆ ನಮ್ಮ ಸಂಸ್ಕೃತಿ ವಿನಾಶದ ಅಂಚಿಗೆ ತಲುಪುತ್ತದೆ” ಎಂದು ಹೇಳಿದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪ್ರೀತಂ ನಾಯಕ್ ಉದ್ಘಾಟಿಸಿ ಮಾತನಾಡಿ, “ಇತರ ಭಾಷೆಗಳಿಗೆ ಗೌರವ ನೀಡುತ್ತಾ ನಮ್ಮ ತುಳು ಭಾಷೆ ಸಂಸ್ಕೃತಿಯನ್ನು ಪ್ರೀತಿಸಬೇಕು” ಎಂದರು. ಬ್ರಹ್ಮಾವರ ಎಸ್.ಎಂ.ಸಿ. ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞಾ ಹೆಗ್ಡೆ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಆಧುನಿಕತೆಯ ಭರಾಟೆಯಲ್ಲಿ ತುಳು ಭಾಷೆ ಮರೆಗೆ ಸರಿಯುವ ಭೀತಿ ಎದುರಾಗಿದೆ. ವಿದ್ಯಾರ್ಥಿಗಳ ಮೂಲಕ ತುಳು ತೇರು ಎಳೆಯುವ ಕೆಲಸವನ್ನು ಅಕಾಡೆಮಿ ಮತ್ತು ಪರಿಷತ್ ಮಾಡುತ್ತಿದೆ. ಟಿ.ವಿ. ಮೊಬೈಲ್ನ ದಾಸರಾಗಿರುವ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು” ಎಂದರು.

ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ತುಕಾರಾಮ ಪೂಜಾರಿ ಮಾತನಾಡಿ, “ನಾಟಿ, ವಿಷ ವೈದ್ಯ, ಮಂತ್ರ ವೈದ್ಯ ಸೇರಿದಂತೆ ಅಪಾರ ಜ್ಞಾನ ಸಂಪತ್ತು ತುಳುನಾಡು ಹೊಂದಿತ್ತು. ಆದರೆ, ಇಂದು ಅದು ಸಂಪೂರ್ಣ ನಾಶವಾಗಿದೆ. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ತುಳು ಉಳಿಸಲು ಮುಂದಾಗಬೇಕು” ಎಂದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, “ಭಾಷೆಯನ್ನು ವಿದ್ಯಾರ್ಥಿಗಳು ಬಳಸಿದರೆ ಬೆಳೆಯಲು ಸಾಧ್ಯ. ತುಳು ಶ್ರೀಮಂತ ಭಾಷೆಯಾಗಿದ್ದು, 8ನೇ ಪರಿಚ್ಛೇದಕ್ಕೆ ಸೇರಬೇಕಾದ ನೈಜ ಅರ್ಹತೆ ಇರುವ ಭಾಷೆ 2011ರಲ್ಲಿ 8ನೇ ಪರಿಚ್ಛೇದಕ್ಕೆ ಸೇರಲು 92 ಭಾಷೆಗಳಿದ್ದವು. ಈಗ ಆ ಸಂಖ್ಯೆ 145ಕ್ಕೆ ಏರಿಕೆಯಾಗಿದೆ. ಅನೇಕ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯ ಭಾಷೆಗಳಿವೆ. ಮುಂದಿನ ದಿನಗಳಲ್ಲಿ ಸರಕಾರ ತುಳುವನ್ನು 2ನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ತಯಾರಿಯಲ್ಲಿದೆ” ಎಂದರು.

ಶ್ರೀ ಜಗದ್ಗುರು ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠ ನಿಡೊಸೋಸಿಯ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಶುಭ ಹಾರೈಸಿದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಪ್ರಸ್ತಾವಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್, ಕಲಾಸಿರಿಯ ಸಂಚಾಲಕಿ ಚಂದ್ರಕಲಾ ರಾವ್, ತುಳು ಪರಿಷತ್ತಿನ ಗೌರವಾಧ್ಯಕ್ಷ ಡಾ. ಪ್ರಭಾಕರ್ ನೀರುಮಾರ್ಗ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮಣ್ಣ, ಕೋಶಾಧಿಕಾರಿ ಸುಮತಿ ಹೆಗ್ಡೆ ಡಾ. ಮೀನಾಕ್ಷಿ ರಾಮಚಂದ್ರ, ಅಮಿತ ಅಶ್ವಿನ್ ಮತ್ತಿತರರು ಇದ್ದರು. ವಿದ್ಯಾರ್ಥಿನಿ ಸನ್ನಿಧಿ ಸ್ವಾಗತಿಸಿ, ಶ್ರಾವ್ಯ ವಂದಿಸಿದರು. ಮೇಘಾಶ್ರೀ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
