ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ದ ಐದನೇ ದಿನದ ಕಾರ್ಯಕ್ರಮವು ದಿನಾಂಕ 29 ಮೇ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿದ ವಳಚ್ಚಿಲ್ ಶ್ರೀನಿವಾಸ ಯೂನಿವರ್ಸಿಟಿಯ ಫಾರ್ಮಸಿ ವಿಭಾಗದ ಮುಖ್ಯಸ್ಥರಾದ ಡಾ. ಎ.ಆರ್. ಶಬರಾಯರು “ಕಲೆ – ಕಲಾರಾಧಕರ ಮಧ್ಯೆ ಈಗಿನ ಕಾಲಘಟ್ಟದಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತಿದೆ. ಉತ್ತಮ ಕಲಾವಿದರೆನಿಸಿಕೊಳ್ಳಲು ಕಲೆಯನ್ನು ಆರಾಧನಾ ದೃಷ್ಟಿಯಿಂದ ಸ್ವೀಕರಿಸುವ ವರ್ಗ ಬೇಕು. ಇಂದು ಶಿಕ್ಷಿತ ಪ್ರೇಕ್ಷಕ ವರ್ಗ ಕಲೆಯನ್ನು ಪ್ರೀತಿಸುತ್ತಾ ಬರುತ್ತಿದೆ. ಅದನ್ನೇ ಯಕ್ಷಗಾನದಲ್ಲೂ ನಾವು ಕಾಣಬಹುದು. ಈ ನೆಲದ ಮಣ್ಣಿನ ಕಲೆಯ ಸತ್ತ್ವಬಲವಾಗಿ ಬೇರೂರಿ ಕಲೆಯನ್ನು ಪ್ರೀತಿಸುವ ಮಂದಿ ಹೆಚ್ಚಾಗಿದ್ದಾರೆ. ಒಂದು ಕಾಲಕ್ಕೆ ಯಕ್ಷಗಾನ ಕಲೆ ಬಳಲಿತು ಎಂಬಾಗ ಅದನ್ನು ಯಥಾಸ್ಥಿತಿಗೆ ತರಲು ಈ ಕಲಾ ಶ್ರೇಷ್ಠರೇ ಕಾರಣ. ಹಾಗಾಗಿ, ಈ ಕಲೆಯ ಏಳ್ಗೆಗಾಗಿ ಕಾಣ್ಕೆ ನೀಡುತ್ತಿರುವ ಸರಯೂ ತಂಡ ಇನ್ನೂ ಚೆನ್ನಾಗಿ ಕಲಾವಲಯದಲ್ಲಿ ಬೆಳಗಲಿ” ಎ೦ದು ಹೇಳಿದರು.

ಸುಣ್ಣಂಬಳ ವಿಶ್ವೇಶ್ವರ ಭಟ್ ರವರು ಸಂಸ್ಥೆಗೂ ಸನ್ಮಾನಿತರಿಗೂ ಶುಭ ಕೋರಿದರು. ಯಕ್ಷಕಲಾವಿದ, ಸಂಘಟಕ ಹೊಸಬೆಟ್ಟು ವಿನಯ ಆಚಾರ್ಯರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು. ಜಯಶ್ರೀ ಎಂ. ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು. ಸತ್ಯಶಂಕರ ಭಟ್, ಪ್ರಭಾಕರ ರಾವ್, ಪೇಜಾವರ ಸನ್ಮಾನಿತರಿಗೆ ಶುಭ ಸಂದೇಶಗಳನ್ನು ನೀಡಿದರು. ಸುಧಾಕರ ರಾಯರು ನಿರ್ವಹಿಸಿದರು. ಗೌತಂ ಭಂಡಾರಿ ಧನ್ಯವಾದವಿತ್ತರು. ಎ. ಮಧುಸೂದನರವರು ವಂದಿಸಿದರು. ಸಭಾ ಕಾರ್ಯಕ್ರಮದ ‘ಬಭ್ರುವಾಹನ’ ಯಕ್ಷಗಾನ ಬಯಲಾಟ ಜರಗಿತು.




