ಮಂಗಳೂರು : ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಇದರ ವತಿಯಿಂದ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ದಿನಾಂಕ 17 ಮತ್ತು 18 ಮೇ 2026ರ ಭಾನುವಾರ ಮತ್ತು ಸೋಮವಾರ ಎರಡೂ ದಿನಗಳಲ್ಲಿ ‘ವಿಶ್ವ ಕೊಂಕಣಿ ಸಮಾರೋಹ’ ಸಮಾರಂಭ ಜರುಗಲಿರುವುದು.
ದಿನಾಂಕ 17 ಮೇ 2026ರಂದು ಪೂ. 9-00 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಇದರ ನೇತೃತ್ವದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಗೋವಾದ ಕಲೆ ಮತ್ತು ಸಂಸ್ಕೃತಿಯ ಪೋಷಕರು ಹಾಗೂ ಶಿಕ್ಷಣ ತಜ್ಞರಾದ ಸುಲಕ್ಷಣಾ ಸಾವಂತ ಉದ್ಘಾಟಿಸಲಿರುವರು. ಈ ಸಂಧರ್ಭದಲ್ಲಿ ಕುಡುಬಿ ಜಾನಪದ ನೃತ್ಯ ಹಾಗೂ ವಾದ್ಯ ಸಂಗೀತದೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಗುವುದು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ ಸ್ವಾಗತ ಭಾಷಣ ಮಾಡಲಿರುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಮಂಡಳಿ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್ ಅಧ್ಯಕ್ಷತೆ ವಹಿಸಲಿರುವರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಮಂಡಳಿ ಸದಸ್ಯರಾದ ಹೆಚ್.ಎಮ್ ಪೆರ್ನಾಳ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ವಿಶ್ವ ಕೊಂಕಣಿ ಕೇಂದ್ರದ ಉಪಾದ್ಯಕ್ಷರಾದ ಡಾ. ಕಿರಣ್ ಬುಡಕುಳೆ ದಿಕ್ಸೂಚಿ ಭಾಷಣ ಮಾಡಲಿರುವರು.
ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಅಂಗವಾಗಿ ಈ ಎರಡೂ ದಿನಗಳಲ್ಲಿ ವಿವಿಧ ವಿಚಾರ ಗೋಷ್ಠಿಗಳು ಜರಗಲಿವೆ. ಭಾನುವಾರ ಪೂ.ಗಂಟೆ 10-30ಕ್ಕೆ ನಡೆಯಲಿರುವ “ಕೊಂಕಣಿ ಸಾಹಿತ್ಯ ಪ್ರಕಾರಗಳ ನಡುವೆ ಸಮತೋಲಿತ ಬೆಳವಣಿಗೆ ಒಂದು ಉನ್ನತ-ವಿಶ್ಲೇಷಣೆ” ಈ ಗೋಷ್ಟಿಯ ಅಧ್ಯಕ್ಷತೆಯನ್ನು ಹೆಸರಾಂತ ಕೊಂಕಣಿ ಸಾಹಿತಿ ಗೋಕುಲದಾಸ ಪ್ರಭು ವಹಿಸಲಿರುವರು. “ಕಾವ್ಯ ಮತ್ತು ಕಾದಂಬರಿಯ ಬೆಳವಣಿಗೆ” ಬಗ್ಗೆ ಖಂಡೋಲಾ ಸರ್ಕಾರಿ ಕಾಲೇಜು ಕೊಂಕಣಿ ವಿಭಾಗದ – ಪ್ರೊಫೆಸರ್ (ಡಾ.) ಪ್ರಕಾಶ್ ವಜ್ರೇಕರ್ ಹಾಗೂ ಕೇಂದ್ರದ ಸಿಎಒ ಡಾ. ಬಿ ದೇವದಾಸ ಪೈ ಇವರು “ವಿಶೇಷ ಗಮನದ ಅಗತ್ಯವಿರುವ ಸಾಹಿತ್ಯ ಪ್ರಕಾರಗಳು’ ಈ ಬಗ್ಗೆ ವಿಷಯ ಮಂಡಣೆ ಮಾಡಲಿದ್ದಾರೆ.
ಗಂಟೆ 12-00ಕ್ಕೆ ಜರುಗಲಿರುವ ‘ಸಾಹಿತ್ಯ ವಿಶ್ಲೇಷಣೆಯ ಪ್ರಮುಖ ಅಂಶಗಳು’ ಎಂಬ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತ್ಯ ಅಕಾಡೆಮಿ ಪುರಸ್ಕೃತ, ಹೆಸರಾಂತ ಬರಹಗಾರ ಶ್ರೀ ಎಚ್.ಎಮ್. ಪೆರ್ನಾಳ ವಹಿಸಲಿರುವರು. ಗೋವಾ ವಿಶ್ವವಿದ್ಯಾಲಯ ಉಪ ಡೀನ್ (ಶೈಕ್ಷಣಿಕ), ಡಾ. ಹನುಮಂತ್ ಸಿ ಚೋಪ್ಡೇಕರ್, ಇವರು ಸನ್ನಿವೇಶ, ವ್ಯಾಖ್ಯಾನ ಮತ್ತು ಮೌಲ್ಯಮಾಪನವನ್ನು ಅರ್ಥಮಾಡಿಕೊಳ್ಳುವುದು ಈ ಬಗ್ಗೆ ವಿಷಯ ಮಂಡಣೆ ಮಾಡುವರು. ಸೇಂಟ್ ಕ್ಸೇವಿಯರ್ಸ್ ಕಾಲೇಜು ಮಾಪ್ಸಾದ ಹಿಂದಿ ವಿಭಾಗದ ಪ್ರೊಫೆಸರ್ (ಡಾ.) ರಮಿತಾ ಪಿ. ಗುರವ್ ಅವರಿಂದ “ವಿಮರ್ಶಾತ್ಮಕ ಪ್ರಶಂಸೆ ಮತ್ತು ಓದುಗರ ಪ್ರತಿಕ್ರಿಯೆ” ಬಗ್ಗೆ ವಿಚಾರ ಮಂಡಣೆ ಜರುಗಲಿದೆ.
ಮಧ್ಯಾಹ್ನ ಗಂಟೆ 2-30ಕ್ಕೆ ಕವಿತಾ ಟ್ರಸ್ಟ್ ವತಿಯಿಂದ ಕೊಂಕಣಿ ಕವಿ ಪಿ.ಜಿ. ಕಾಮತ್ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ – ಅವರ “ಕಾವ್ಯಾತ್ಮಕ ಜೀವನದ ಒಂದು ಕವಿ ಪರಿಚಯ” ಕಾರ್ಯಕ್ರಮವು ಜರುಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿತಾ ಟ್ರಸ್ಟನ ಕಾರ್ಯದರ್ಶಿ ಆಂಡ್ರ್ಯೂ ಎಲ್. ಡಿಕುನ್ಹಾ ವಹಿಸಲಿರುವರು. ಕವಿತಾ ಟ್ರಸ್ಟ್ ಅಧ್ಯಕ್ಷ ಮೆಲ್ವಿನ್ ರೊಡ್ರಿಗಸ್ ಮುಂದಾಳುತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಮುಖ್ಯ ಅತಿಥಿಗಳಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈಯವರು ಭಾಗವಹಿಸುವರು. ಕೊಚ್ಚಿ ಪಿ.ಜಿ. ಕಾಮತ್ ಫೌಂಡೇಶನ ಟ್ರಸ್ಟಿ ಆನಂದ ಕಾಮತ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು, ಎಚ್.ಎಮ್. ಪೆರ್ನಾಳ ಬೀಜ ಭಾಷಣ ನೀಡಲಿರುವರು. ಸ್ಮಿತಾ ಶೆಣೈ, ಎಮ್.ಆರ್. ಕಾಮತ್, ಡಾ. ವೆಂಕಟೇಶ್ ನಾಯಕ್ , ಕುಮಾರಿ ನಿನಿಶಾ ಮೊಂತೆರೊ ಮೊದಲಾದವರು ಪಿ.ಜಿ. ಕಾಮತ್ ಅವರ ಕವಿತಾ ವಾಚನ ಮಾಡಲಿರುವರು.
ಸಂಜೆ ಗಂಟೆ 4-30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುವುದು. ಕುಮಟಾದ ಲಕ್ಷ್ಮೀನರಸಿಂಹ ಕಲಾಮಂಡಳಿಯವರು ‘ನರಸಿಂಹ ಅವತಾರ’ ನೃತ್ಯ ರೂಪಕ ಪ್ರದರ್ಶಿಸಲಿರುವರು. ಮಂಗಳೂರು ಸಾಧನಾ ಬಳಗ ವತಿಯಿಂದ ಹಾಸ್ಯ ರಸಾಯನ ಕಾರ್ಯಕ್ರಮ ಜರುಗಲಿದೆ. ಮಂಗಳೂರಿನ ಅಂಕಿತಾ ಕಾಮತ ಪಂಗಡದವರಿಂದ ಬಾಲಕಲಾವಿದರನ್ನೊಳಗೊಂಡ ‘ವೀರನಾರಿ ಅಹಲ್ಯಾಬಾಯಿ ಹೋಳ್ಕರ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ದ್ವಿತೀಯ ದಿನದ ಸಮಾರಂಭದಲ್ಲಿ ದಿನಾಂಕ 18ರಂದು ಸೋಮವಾರ ಪೂ. 9-00 ಗಂಟೆಗೆ ಜಾನಪದ ಗೋಷ್ಠಿಗಳು ಜರುಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್.ಡಿ.ವಿ.ಕೆ. “ವಿಜನ್ ಕೊಂಕಣಿ”ಯ ಪ್ರವರ್ತಕರಾದ ಶ್ರೀ ಮೈಕಲ್ ಡಿಸೋಜಾ ವಹಿಸಲಿರುವರು. ಪ್ರಸಿದ್ಧ ಕೊಂಕಣಿ ಲೇಖಕ, ಗೋವಾ ವಿಶ್ವವಿದ್ಯಾಲಯದ ಉಪ ಡೀನ್ (ಸಂಶೋಧನೆ), ಡಾ. ಪ್ರಕಾಶ್ ಎಸ್. ಪಾರಿಯೆಂಕರ್ ಪೂರ್ವಾಹ್ನದ ಮೂರು ಜಾನಪದ ಗೋಷ್ಠಿಗಳನ್ನು ಉದ್ಘಾಟಿಸಲಿರುವರು. ವರ್ಧನಿ ಸಂಸ್ಥೆಯ ಪ್ರವರ್ತಕಿ ಶ್ರೀಮತಿ ಉಷಾ ನಂದಗೋಪಾಲ ಶೆಣೈ ಗೌರವ ಅಥಿತಿಗಳಾಗಿ ಭಾಗವಹಿಸುವರು.
ಪೂ. ಗಂಟೆ 9-15ಕ್ಕೆ ನ್ಯಾನೊ ಕಥೆಗಳ ಪ್ರಸ್ತುತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಿದ್ಧ ಕಥಾ ಲೇಖಕ ಶ್ರೀ ವಿವೇಕಾನಂದ ಕಾಮತ್ ವಹಿಸುವರು. ಜಯಶ್ರೀ ಶೆಣೈ, ವಂದನಾ ನಾಯಕ, ಕಸ್ತೂರಿ ಪೈ, ಶಕುಂತಲಾ ಆರ್ ಕಿಣಿ, ಬಸ್ತಿ ಶೋಭಾ ಶೆಣೈ ಕಥಾ ಪ್ರಸ್ತುತಿ ಮಾಡಲಿರುವರು.
ಪೂ. ಗಂಟೆ 10-00ಕ್ಕೆ ಗಂಟೆಗೆ ನಡೆಯಯುವ ‘ಯಕ್ಷಗಾನ ಕಲೆ ಮತ್ತು ಕೊಂಕಣಿ ಜನರು’ ಚರ್ಚಾ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಸಿದ್ಧ ಯಕ್ಷಗಾನ ವಿಮರ್ಶಕ ಹಿರಿಯ ಕಲಾವಿದ ಶ್ರೀ ಪ್ರಭಾಕರ ಜೋಶಿ ವಹಿಸುವರು. ಚರ್ಚಾ ಗೋಷ್ಠಿಯಲ್ಲಿ ಶ್ರೀ ಅರ್ಗೋಡು ಮೋಹನದಾಸ್ ಶೆಣೈಯವರು “ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಂಕಣಿ ಕಲಾವಿದರು” ಈ ಬಗ್ಗೆ ವಿಚಾರ ಮಂಡನೆ ಮಾಡುವರು. ಯಕ್ಷಗಾನ ಕಲಾವಿದ ಶ್ರೀ ಎಂ.ಆರ್. ಕಾಮತ್ ರವರು “ಯಕ್ಷಗಾನ ಕ್ಷೇತ್ರಕ್ಕೆ ಕೊಂಕಣಿ ಜನರ ಕೊಡುಗೆ” ಬಗ್ಗೆ ವಿಚಾರ ಮಂಡನೆ ಮಾಡುವರು. ಶ್ರೀ ಶಾಂತಾರಾಮ ಕುಡ್ವ ಅವರು “ಕೊಂಕಣಿ ಭಾಷೆಯಲ್ಲಿ ಪ್ರದರ್ಶನ ಕಂಡ ಯಶಸ್ವಿ ಯಕ್ಷಗಾನ ಪ್ರದರ್ಶನಗಳು” ಬಗ್ಗೆ ವಿಚಾರ ಮಂಡನೆ ಮಾಡುವರು.
ಪೂ. ಗಂಟೆ 11-30ಕ್ಕೆ ಲೋಕ ಗೀತ ಗಾಯನ ಜಾನಪದ ಗೀತೆಗಳ ವಾಚನ ಕಾರ್ಯಕ್ರದ ಅಧ್ಯಕ್ಷತೆಯನ್ನು ಖ್ಯಾತ ಆಕಾಶವಾಣಿ ಕಲಾವಿದೆ ಶ್ರೀಮತಿ ಶಕುಂತಲಾ ಆರ್. ಕಿಣಿ ವಹಿಸುವರು. ಜಿ.ಎಸ್.ಬಿ. ಸಮುದಾಯದ ಜಾನಪದ ಗೀತೆಗಳ ಪಠಣವನ್ನು ಶ್ರೀಮತಿ ಮರೋಳಿ ಸಬಿತಾ ಕಾಮತ್, ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಜಾನಪದ ಗೀತೆಗಳ ಪಠಣವನ್ನು ಶ್ರೀಮತಿ ಜೂಲಿಯೆಟ್ ಫೆರ್ನಾಂಡಿಸ್, ಕುಡಾಲ್ ದೇಶಸ್ಥ ಆದ್ಯಗೌಡ ಬ್ರಾಹ್ಮಣ ಸಮುದಾಯದ ಜಾನಪದ ಗೀತೆಗಳ ಪಠಣವನ್ನು ಡಾ. ವಿಜಯಲಕ್ಷ್ಮಿ ನಾಯಕ್, ಕುಡುಬಿ ಸಮುದಾಯದ ಜಾನಪದ ಗೀತೆಗಳ ಪಠಣವನ್ನು ಶ್ರೀ ನಾರಾಯಣ ನಾಯಕ್ ಗೋಳಿಯಂಗಡಿ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಮಾಡುವರು.
ಮಧ್ಯಾಹ್ನ ಗಂಟೆ 2-30ಕ್ಕೆ ಸಾಹಿತ್ಯ ಅಕಾಡೆಮಿ, ನವದೆಹಲಿ ಸಹಯೋಗದಲ್ಲಿ, ವಿಶ್ವ ಕೊಂಕಣಿ ಕೇಂದ್ರ ಮತ್ತು ಕವಿತಾ ಟ್ರಸ್ಟ್ ಆಯೋಜಿಸುವ ಯುವ ಕೊಂಕಣಿ ಬರಹಗಾರರ ಚರ್ಚಾ ಗೋಷ್ಟಿ ಜರುಗಲಿದೆ. ಶ್ರೀ ಸ್ಟ್ಯಾನಿ ಡಿ’ಸೋಜಾ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಶ್ರೀಮತಿ ವಿಲ್ಮಾ ಡಿ’ಸೋಜಾ, ಶ್ರೀಮತಿ ಲವಿತಾ ಡಿ’ಸೋಜಾ, ಡಾ. ವೆಂಕಟೇಶ್ ನಾಯಕ್, ಶ್ರೀಮತಿ ಗ್ಲಾನಿಶ್ ಮಾರ್ಟಿಸ್, ಶ್ರೀಮತಿ ಶ್ವೇತಾ ಪೈ ಎಂ. ಮೊದಲಾದ ಯುವ ಕೊಂಕಣಿ ಬರಹಗಾರರು ಭಾಗವಹಿಸುವರು.
ಸಂಜೆ ಗಂಟೆ 3-30ಕ್ಕೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಶ್ರೀ ಕೆ. ಅರವಿಂದ್ ಕಾಮತ್ ಭಾಗವಹಿಸುವರು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷರು ಸಿಎ ನಂದಗೋಪಾಲ್ ಶೆಣೈ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ಜರುಗಲಿದೆ. ಹಿರಿಯ ವಕೀಲ ಕೆ. ಜಗದೀಶ್ ಕಾಮತ್ ಇವರು “ಭಾರತದ ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಅವಕಾಶಗಳು” ಎಂಬ ವಿಷಯ ಬಗ್ಗೆ ಮಾತನಾಡುವರು. ಎರಡೂ ದಿವಸಗಳ ವಿಶ್ವ ಕೊಂಕಣಿ ಕೇಂದ್ರದ ಸಾಹಿತ್ಯ ಸಮಾರೋಹಕ್ಕೆ ಮಹಾರಾಷ್ಟ್ರ, ಗೋವಾ ಹಾಗೂ ಕೇರಳ ರಾಜ್ಯಗಳಿಂದಲೂ ಮಾತೃಭಾಷಾಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸಲಿರುವರು.
ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದದ ಎರಡೂ ದಿವಸಗಳ ಕಾರ್ಯಕ್ರಮಗಳು ವಿಶ್ವ ಕೊಂಕಣಿ ಕೇಂದ್ರದ ಚೆಯರಮೆನ್ ಡಾ. ಪಿ. ದಯಾನಂದ ಪೈ, ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಹಾಗೂ ಉಪಾಧ್ಯಕ್ಷರುಗಳಾದ ವಿಲಿಯಮ್ ಡಿಸೋಜಾ, ಡಿ. ರಮೇಶ ನಾಯಕ್, ಡಾ. ಕಿರಣ್ ಬುಡ್ಕುಳೆ, ಕೋಶಾಧಿಕಾರಿ ಬಿ.ಆರ್. ಭಟ್ ಹಾಗೂ ಇತರ ಟೃಸ್ಟಿಗಳ ಸಹಕಾರದೊಂದಿಗೆ ಜರುಗಲಿವೆ. ಆಹ್ವಾನಿತರಿಗೆ ವಸತಿ, ಊಟೋಪಚಾರ ಇತ್ಯಾದಿ ಸುವ್ಯವಸ್ಥೆ ಏರ್ಪಡಿಸಲಾಗಿದೆ.
ಸಿ ಎ ನಂದಗೋಪಾಲ ಶೆಣೈ, ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು.


