ಕಾಸರಗೋಡು : ವಾಚನ ವಾರಾಚರಣೆ ಅಂಗವಾಗಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಗರದ ಬಾಲಭವನ್ ವಿದ್ಯಾ ಕೇಂದ್ರದ ಅಧ್ಯಾಪಕ ವಿದ್ಯಾರ್ಥಿಗಳ ಅರ್ಧ ದಿನ ಗ್ರಂಥಾಲಯ ಸಂದರ್ಶನ ಹಾಗೂ ‘ವಿದ್ಯಾರ್ಥಿಗಳಿಗೆ ಪುಸ್ತಕಗಳೊಂದಿಗೆ ಸಂವಾದ’ ಎಂಬ ಕಾರ್ಯಕ್ರಮವನ್ನು ದಿನಾಂಕ 23 ಜೂನ್ 2026ರಂದು ಆಚರಿಸಿದರು.

ಕಾರ್ಯಕ್ರಮ ಆಯೋಜಕರಾದ ಗ್ರಂಥಾಲಯ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಇವರು “ಪುಸ್ತಕ ಜ್ಞಾನವು ವಿಕಾಸಕ್ಕೆ ಪೂರಕ, ಇದು ಯಶಸ್ವಿ ಜೀವನದ ಹಾದಿ ತೋರಿಸುತ್ತದೆ. ಓದಿನಿಂದ ಮನಸ್ಸಿಗೆ ಸಂತೋಷ, ಸಮಾಧಾನ ಸಿಗುತ್ತದೆ. ವಿಷಯದ ಅರಿವು ಮೂಡುತ್ತದೆ. ಲೋಕಾನುಭವ ಪ್ರಾಪ್ತವಾಗುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಬಾಲ ಭವನ ವಿದ್ಯಾ ಸಂಸ್ಥೆಯ ಎಜುಕೇಷನಲ್ ಅಡ್ವೈಸರ್ ಹಾಗೂ ಕನ್ನಡ ಭವನದ ನಿರ್ದೇಶಕರಾದ ಡಾ. ಕೆ.ಎನ್.ಎನ್. ವೆಂಕಟ್ರಮಣ ಹೊಳ್ಳ ಇವರು ದೀಪ ಬೆಳಗಿಸಿ ಪುಸ್ತಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ “ಕನ್ನಡ ಭವನವು ತನ್ನ ಸಮರ್ಥ ನೇತೃತ್ವದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಉದ್ದೀಪನಕ್ಕಾಗಿ ಶಕ್ತಿ ಮೀರಿ ದುಡಿಯುತ್ತಿದೆ. ಭಾಷೆ ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ನಿಗಾ ವಹಿಸಿ ಕಾರ್ಯ ಮಾಡುತ್ತಿದೆ, ಇದು ಭರವಸೆ ಮೂಡಿಸುತ್ತಿದೆ ಎಂದು ಪ್ರತ್ಯಾಶೆ ಮೂಡಿಸುತ್ತಿದೆ” ಎಂದರು.

ಹಿರಿಯ ಪತ್ರಕರ್ತ ಕನ್ನಡ ಭವನ ಗೌರವ ಅಧ್ಯಕ್ಷರಾದ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಹಿರಿಯ ಭಜನಾ ಗುರು, ಕಲಾವಿದ ಶ್ರೀ ಜಯಾನಂದ ಕುಮಾರ್ ಹೊಸದುರ್ಗ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ತಿಳುವಳಿಕೆ ಮೂಡಿಸಿದರು. ಪತ್ರಕರ್ತ ಜಗನ್ನಾಥ್ ಶೆಟ್ಟಿ ವಿದ್ಯಾರ್ಥಿಗಳಿಗೆ ವರದಿ ತಯಾರಿಕೆ ಬಗ್ಗೆ ತರಗತಿ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಬಾಲ ಭವನ್ ಮುಖ್ಯೋಪಾಧ್ಯಾಯಿನಿ, ಲೀಲಾವತಿ ನಾಯರ್ ಮತ್ತು ಅಧ್ಯಾಪಿಕೆ ದೀಪ್ತಿ ಇವರನ್ನು ಕನ್ನಡ ಭವನದಿಂದ ಶಾಲು ಸ್ಮರಣಿಕೆಯೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಶಾಲಾ ಗ್ರಂಥಾಲಯಕ್ಕೆ ರೂ.1,000/- ಮೊತ್ತದ ಪುಸ್ತಕಗಳನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ಅನಿಸಿಕೆ, ಗಾಯನ ಪಿ.ಎನ್. ಪನಿಕ್ಕರ್ ಬಗ್ಗೆ ಭಾಷಣ, ವಾಚನ ವಾರಾಚಾರಣೆ ಬಗ್ಗೆ ಚರ್ಚೆ, ಸಂವಾದ ನಡೆಸಲಾಯಿತು. ಗ್ರಂಥಾಲಯ ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿ, ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರ್ವಹಿಸಿ, ಗಣೇಶ್ ಕೆ.ಸಿ.ಎನ್. ಧನ್ಯವಾದವಿತ್ತರು.

