ಧಾರವಾಡ : ನಾಟಕ ಸಂಸ್ಥೆ ಅಭಿನಯ ಭಾರತಿ ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಗೃಹದಲ್ಲಿ ದಿನಾಂಕ 27 ಮಾರ್ಚ್ 2026ರಂದು ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ವರ್ಷದ ‘ಅಭಿನಯ ಭಾರತಿ ರಂಗಪ್ರಶಸ್ತಿ’ ಸ್ವೀಕರಿಸಿದ ಖ್ಯಾತ ನಟ, ನಿರ್ದೇಶಕ, ರಂಗಕರ್ಮಿ, ಪತ್ರಕರ್ತ ಡಾ. ಬಂಡು ಕುಲಕರ್ಣಿ ಮಾತನಾಡುತ್ತಾ “ಹೇಗೆ ದಿನಪತ್ರಿಕೆಗಳು ಹಳೆಯ ಓದುಗರನ್ನು ಉಳಿಸಿಕೊಂಡು ಹೊಸ ಹೊಸ ಓದುಗರನ್ನು ಆಕರ್ಷಿಸಲು ಪ್ರಯತ್ನಿಸುವವೋ ಅದೇ ರೀತಿಯಲ್ಲಿ ರಂಗಭೂಮಿ ಸಹ ತನ್ನ ಹಳೆಯ ಪ್ರೇಕ್ಷಕರನ್ನು, ನೋಡುಗರನ್ನು ಉಳಿಸಿಕೊಂಡು, ಹೊಸ ಹೊಸ ಪ್ರೇಕ್ಷಕರನ್ನು, ನೋಡುಗರನ್ನು ರಂಗಭೂಮಿಯತ್ತ ಸೆಳೆಯುವ, ಆಕರ್ಷಿಸುವ ನಿರಂತರ ಪ್ರಯತ್ನ ಮಾಡಬೇಕಾಗಿದೆ.” ಎಂದು ಹೇಳಿದರು.
ಮುಖ್ಯ ಅತಿಥಿ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ ರಿಜಿಸ್ಟರ್ ಡಾ. ಬಸವರಾಜ ಅನಾಮಿ ಮಾತನಾಡುತ್ತಾ “ರಂಗಭೂಮಿಯ ಹಳೆಯ ದಿನಗಳನ್ನು ನಾವು ನೋಡಿದ್ದೇವೆ. ಈಗಿನ ಡಿಜಿಟಲ್ ಯುಗದಲ್ಲಿ ಯಾವ್ಯಾವ ರೀತಿಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ನಮ್ಮ ರಂಗಭೂಮಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತಗೊಳಿಸುವ ಬಗೆಯನ್ನು ಅಭ್ಯಸಿಸಬೇಕಾಗಿದೆ. ಯುವ ಜನಾಂಗ ರಂಗಭೂಮಿಯತ್ತ ಬರಲು ಈ ಹೊಸ ಮಾಧ್ಯಮಗಳು ಪರಿಣಾಮಕಾರಿ ಯಶಸ್ಸು ನೀಡಬಹುದು” ಎಂದು ಹೇಳಿದರು.
ಪ್ರಶಸ್ತಿ ವಿಜೇತ ಡಾ. ಬಂಡು ಕುಲಕರ್ಣಿ ಅವರು ತಮಗೆ ನೀಡಿದ ಪ್ರಶಸ್ತಿಯ ಹಣವನ್ನು ಅಭಿನಯ ಭಾರತಿಗೆ ಮರಳಿ ನೀಡಿ “ನನಗೆ ನನ್ನ ಪ್ರಾರಂಭದ ದಿನಗಳಲ್ಲಿ ನಿರ್ದೇಶನ, ನಟನೆಗೆ ಅವಕಾಶ ನೀಡಿ, ಅನ್ನ ಮತ್ತು ಅನುಭವ ನೀಡಿದ ಸಂಸ್ಥೆಗೆ ಸದಾ ಆಭಾರಿ” ಎಂದು ಹೇಳಿದರು. ಡಾ. ಬಸವರಾಜ ಅನಾಮಿಯವರು ಸಹ ತಮಗೆ ನೀಡಿದ ಗೌರವ ಧನವನ್ನು ಮರಳಿ ಅಭಿನಯ ಭಾರತಿಗೆ ನೀಡಿದರು.
ಅರವಿಂದ ಕುಲಕರ್ಣಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ವಿನಾಯಕ ನಾಯಕರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವೇದಿಕೆಯಲ್ಲಿ ವಿಶ್ವನಾಥ ಕೋಳಿವಾಡ ಅವರು ಉಪಸ್ಥಿತರಿದ್ದರು. ವೀರೇಶ ಹೊಸಮನಿ ಪ್ರಾರ್ಥನೆ ಮಾಡಿದರು. ಸುನಿತಾ ಅರಬಳ್ಳಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಹರ್ಷ ಡಂಬಳ, ನಿವೃತ್ತ ಮುಖ್ಯ ಇಂಜಿನಿಯರ್ ನಾರಾಯಣ, ಡಾ. ವೀರಣ್ಣ, ಡಾ. ಮೃತ್ಯುಂಜಯ ಕಪಾಲಿ, ಡಾ. ವಾಸುದೇವ ಪರ್ವತಿ, ಡಾ. ಹ.ವೆಂ. ಕಾಖಂಡಿಕಿ, ಉಮೇಶ್ ನಾಯಕ, ಡಾ. ಎಮ್.ಆರ್. ಪಾಟೀಲ, ಸುನಿಲ ಬಾಗೇವಾಡಿ, ಸಮೀರ ಜೋಶಿ, ಆರಾಧ್ಯ, ಪ್ರಮೋದ್ ವೈದ್ಯ, ಮಾಲತೇಶ ಕತ್ತಿ ಮೊದಲಾದವರು ಉಪಸ್ಥಿತರಿದ್ದರು.
