ತೆಕ್ಕಟ್ಟೆ: ಕೊಮೆ-ಕೊರವಡಿ ಶ್ರೀ ಬೊಬ್ಬರ್ಯ ಶ್ರೀ ಹಳೆಯಮ್ಮ ದೇವಸ್ಥಾನ ವಠಾರ ಕೊಮೆಯಲ್ಲಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರ, ಶ್ರೀ ಮಲಸಾವರಿ ಶ್ರೀ ಮಹಾಕಾಳಿ ದೇವಸ್ಥಾನ, ಶ್ರೀ ಶನೇಶ್ವರ ದೇವಸ್ಥಾನ, ಕೊಮೆ ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘ, ಅಭಿಮಾನ್ ಯುವಕ ಮಂಡಲ, ಶ್ರೀ ಮಹಾಕಾಳಿ ಫ್ರೆಂಡ್ಸ್, ಯಶಸ್ವೀ ಕಲಾವೃಂದ ಕೊಮೆ ಸಂಯುಕ್ತ ಆಶ್ರಯದಲ್ಲಿ ದಿ. ಎಸ್. ವಿಠ್ಠಲ ಪೈ ಸಾಲಿಗ್ರಾಮ ಇವರಿಗೆ ಭಕ್ತಿ ನಮನ, ನುಡಿ ನಮನ ಮತ್ತು ಗಾನ ನಮನ ಕಾರ್ಯಕ್ರಮ ದಿನಾಂಕ 26 ಜೂನ್ 2025 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ತೆಕ್ಕಟ್ಟೆ ಕೃಷ್ಣರಾಯ ಶಾನುಭಾಗ್ “ವಿಠ್ಠಲ ಪೈ ಸಾಲಿಗ್ರಾಮ ಕೇವಲ ದಾನಿಗಳಲ್ಲ. ಕೆಲಸಗಾರರೊಂದಿಗೆ ಕೆಲಸ ಮಾಡುವ ಕೆಲಸಗಾರ. ಹುಟ್ಟಿದವನು ಪ್ರತಿಯೊಬ್ಬನೂ ಸಾಯಲೇಬೇಕು. ಆದರೆ ಹುಟ್ಟು ಸಾವಿನ ನುಡವೆ ನಾವು ಮಾಡಬೇಕಾದದ್ದೇನು? ಅವೆಲ್ಲವನ್ನು ಕಿರು ಅವಧಿಯಲ್ಲಿಯೇ ಮುಗಿಸಿ ವಿಠ್ಠಲ್ ಪೈ ಮುಕ್ತಿ ಕಂಡುಕೊಂಡವರು. ದೇಗುಲವನ್ನು ನಿರ್ಮಾಣ ಮಾಡುವುದು ಸಣ್ಣ ವಿಷಯವಲ್ಲ. ಆ ಕಾರ್ಯದಲ್ಲಿಯೂ ತನ್ನ ಅತೀ ಶ್ರಮದಿಂದ ಸಾಧಿಸಿ, ಸಾರ್ಥಕ್ಯ ಕಂಡುಕೊಂಡ ಮಹಾನುಭಾವ ನಮ್ಮೊಂದಿಗಿಲ್ಲದಿರುವುದು ವಿಷಾಧನೀಯ” ಎಂದರು.
ಚೇಂಪಿ ಪ್ರಕಾಶ್ ಭಟ್ ಮಾತನಾಡಿ “ಶ್ರೀಯುತರು ಛಲಗಾರ. ಸಂಕಲ್ಪ ಮಾಡಿಕೊಂಡ ಕೆಲಸವನ್ನು ಎಷ್ಟೇ ಕಷ್ಟವಾದರೂ ಮಾಡಿಯೇ ಮಾಡುತ್ತಾರೆ. ಭಕ್ತಿ ಮಾರ್ಗವನ್ನು ಅತೀವವಾಗಿ ಇಷ್ಟ ಪಡುವ ವಿಠ್ಠಲ್ ಪೈ ತನ್ನ ಕೊಡುಗೆಯನ್ನು ಎಲ್ಲಿಯೂ ಹೇಳಿಕೊಂಡವರಲ್ಲ. ಭಗವಂತನ ಸಂಕಲ್ಪವನ್ನು ಮೀರಿ ಬದುಕಲು ಯಾರಿಂದಲೂ ಸಾಧ್ಯವಿಲ್ಲ” ಎಂದು ನುಡಿನಮನಗೈದರು.
ಉದ್ಯಮಿ ಆನಂದ್ ಸಿ. ಕುಂದರ್ ಮಾತನಾಡಿ “ಸಮಾಜದಲ್ಲಿ ಹುಟ್ಟುವುದು ಮುಖ್ಯವಲ್ಲ, ಹುಟ್ಟಿದ ದಿನಗಳಲ್ಲಿ ಸಮಾಜಕ್ಕಾಗಿ ಏನು ಮಾಡಿದ್ದಾರೆ ಎನ್ನುವುದು ಮುಖ್ಯ. ಅಗಲಿದ ಆತ್ಮಕ್ಕೆ ಸದ್ಗತಿ ದೊರೆಯಲಿ” ಎಂದರು. ಮಲ್ಯಾಡಿ ಶಿವರಾಮ ಶೆಟ್ಟಿ, ವೆಂಕಟೇಶ್ ಭಟ್, ಗೋವಿಂದ, ಶೇಖರ್ ಕಾಂಚನ್, ಸೋಮ ಕಾಂಚನ್, ಮಂಜುನಾಥ ಪ್ರಭು, ಪಾಂಡುರಂಗ ಕೊಮೆ, ಹರೀಶ್ ಪುಷ್ಪನಮನ ಸಲ್ಲಿಸಿದರು.
ಕೊಮೆ ಗೋಪಾಲ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಶಸ್ವೀ ಕಲಾವೃಂದ ಕೊಮೆ ಇಲ್ಲಿನ ವಿದ್ಯಾರ್ಥಿಗಳಿಂದ ಯಕ್ಷ-ಗಾನ-ನಮನ ರಂಗ ಪ್ರಸ್ತುತಿಗೊಂಡಿತು.