ಮೂಡುಬಿದಿರೆ: ಮೂಡುಬಿದಿರೆಯ ಕನ್ನಡ ಭವನದ ತುಳುಕೂಟದ ಕಛೇರಿಯಲ್ಲಿ ತಿಂಗಳ ಸಭೆ ಹಾಗೂ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ದಿನಾಂಕ 07-10-2023ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಸಂಘಟಕರೂ ಆಗಿರುವ ಎಂ. ದೇವಾನಂದ ಭಟ್ “ ತುಳುನಾಡಿನ ಯಕ್ಷಗಾನ” ಕುರಿತು ಮಾತನಾಡುತ್ತಾ ರಂಗ ಪ್ರವೇಶಕ್ಕೆ ಮುನ್ನ ಯಕ್ಷಗಾನ ಕಲೆಯಲ್ಲಿರುವ ವಿವಿಧ ಹಂತಗಳನ್ನು ಅವರು ಸಮಗ್ರವಾಗಿ ವಿವರಿಸಿದರು. ಕಲಾವಿದನಿಗೆ ನಾಟ್ಯ, ಮಾತುಗಾರಿಕೆ ಮತ್ತು ಪುರಾಣ ಜ್ಞಾನದ ಜೊತೆ ಬಣ್ಣಗಾರಿಕೆಯ ಬಗ್ಗೆಯೂ ಸಂಪೂರ್ಣ ತಿಳುವಳಿಕೆ ಇರಬೇಕಾಗುತ್ತದೆ. “ಯಕ್ಷಗಾನವು ಸಮೃದ್ಧ ಹಾಗೂ ಪರಿಪೂರ್ಣವಾದ ಕಲೆಯಾಗಿದ್ದು ತುಳು ಭಾಷೆಗೂ ಯಕ್ಷಗಾನದ ಕೊಡುಗೆ ಗಣನೀಯವಾಗಿದೆ.”ಎನ್ನುತ್ತಾ ಬೇರೆ ಬೇರೆ ಪಾತ್ರಗಳಿಗೆ ಬಳಸುವ ಬಣ್ಣಗಾರಿಕೆ ಮತ್ತು ವಸ್ತ್ರ ವಿನ್ಯಾಸದ ಬಗ್ಗೆ ವಿವರಣೆ ನೀಡಿದರು. ವಿಶೇಷವಾಗಿ ಬಣ್ಣಗಾರಿಕೆ ಮತ್ತು ವೇಷ ಭೂಷಣಗಳ ಬಗ್ಗೆ ವಿವರಿಸಿದರು.
ಕೆಲವು ಪ್ರಸಂಗಗಳ ಆಯ್ದ ತುಳು, ಕನ್ನಡ ಪದ್ಯಗಳನ್ನು ಭಾಗವತರಾದ ಶಿವಪ್ರಸಾದ್ ಭಟ್ ಅವರು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ದೇವಾನಂದ ಭಟ್ ಸಹಕರಿಸಿದರು. ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರಾದ ಗುರು ಎಂ.ಪಿ.ಯವರು ಯಕ್ಷಗಾನ ಧಾಟಿಯ ಆಶು ಕವಿತೆಯನ್ನು ಪ್ರಸ್ತುತ ಪಡಿಸಿದರು.
ತುಳುಕೂಟದ ಅಧ್ಯಕ್ಷರಾದ ಧನಕೀರ್ತಿ ಬಲಿಪ, ಕಾರ್ಯಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ ಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ ಮುಂತಾದವರು ಉಪಸ್ಥಿತರಿದ್ದರು. ಹೆರಾಲ್ಡ್ ತಾವ್ರೋ ಪ್ರಾರ್ಥಿಸಿ, ಸದಾನಂದ ನಾರಾವಿ ಸ್ವಾಗತಿಸಿ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು.

