ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪುರಸ್ಕಾರ ಪ್ರಕಟವಾಗಿದ್ದು, ಕಾಸರಗೋಡು ಜಿಲ್ಲೆಯ ಲೇಖಕರಿಗೆ ಮೀಸಲಾದ ಡಾ. ರಮಾನಂದ ಬನಾರಿ ಮತ್ತು ಶಾಂತಾಕುಮಾರಿ ದತ್ತಿನಿಧಿಗೆ ಲೇಖಕಿ ಅಕ್ಷತಾ ರಾಜ್ ಪೆರ್ಲರ ‘ಅವಲಕ್ಕಿ ಪವಲಕ್ಕಿ’ ಅಂಕಣ ಬರೆಹಗಳ ಸಂಕಲನ ಆಯ್ಕೆಯಾಗಿದೆ. ಕೃತಿಯ ಹಸ್ತಪ್ರತಿಯು ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ದ ಚಂದ್ರಭಾಗೀ ರೈ ದತ್ತಿನಿಧಿಗೂ ಭಾಜನವಾಗಿತ್ತು.
ಅಕ್ಷತಾ ರಾಜ್ ಪೆರ್ಲರು ಕಾಸರಗೋಡಿನ ಪೆರ್ಲದವರಾಗಿದ್ದು ತುಳು, ಕನ್ನಡ, ಹವ್ಯಕ ಭಾಷೆಯ ಲೇಖಕಿಯಾಗಿದ್ದು ಕತೆ, ಕವಿತೆ, ನಾಟಕ, ಅಂಕಣ ಬರಹ, ಸಂಕಲನ ಸೇರಿದಂತೆ ಒಟ್ಟು 12 ಕೃತಿಗಳು ಪ್ರಕಟವಾಗಿದೆ. ಇವರ ಕೃತಿಗಳಿಗೆ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಪ್ರಶಸ್ತಿ, ಕೊಡಗಿನ ಗೌರಮ್ಮ ದತ್ತಿನಿಧಿ, ಚಂದ್ರಭಾಗೀ ರೈ ದತ್ತಿನಿಧಿ, ನಿರುಪಮಾ ದತ್ತಿನಿಧಿ, ವಾಣಿ ಕತಾ ಪುರಸ್ಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಹೀಗೆ ಹಲವು ಪುರಸ್ಕಾರಗಳು ಸಂದಿವೆ. ಮೈಸೂರು ದಸರಾ ಕವಿಗೋಷ್ಠಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿಗಳಿಗೆ ಆಯ್ಕೆಯಾಗಿರುತ್ತಾರೆ.
‘ಅವಲಕ್ಕಿ ಪವಲಕ್ಕಿ’ ಕಾಸರಗೋಡು ಜಿಲ್ಲೆಯಲ್ಲಿ ಪ್ರಕಟವಾಗುತ್ತಿರುವ ಕಾರವಲ್ ದಿನಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳ ಒಟ್ಟು ಸಂಕಲನವಾಗಿದ್ದು ಮಂಗಳೂರಿನ ಸಾಹಿತ್ಯಾ ಪ್ರಕಾಶನ ಕೃತಿಯನ್ನು ಪ್ರಕಟಿಸಿದೆ. ದತ್ತಿನಿಧಿ ಪ್ರದಾನ ಸಮಾರಂಭದ ದಿನಾಂಕ ಶೀಘ್ರದಲ್ಲಿ ಪ್ರಕಟಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿಯವರು ತಿಳಿಸಿದ್ದಾರೆ.