ಮಂಗಳೂರು : ದೇರೆಬೈಲು ಕೊಂಚಾಡಿಯ ಶ್ರೀ ರಾಮ ಭಜನಾ ಮಂದಿರ (ರಿ) ಇದರ ವಿಜಯಲಕ್ಮೀ ಎಲ್.ಎನ್. ಮತ್ತು ಬಳಗದವರಿಂದ ‘ಸೂರ್ಯ ರತ್ನ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 16 ಫೆಬ್ರವರಿ 2025ರಂದು ದೇರೆಬೈಲು ಕೊಂಚಾಡಿಯಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಾಯತ್ರಿ ಎ. ರಾವ್ “ಯಕ್ಷಗಾನವು ಇಂದು ಸಂಕ್ರಮಣ ಪಥದಲ್ಲಿದೆ. ಅಬಾಲವೃದ್ಧರಾದಿಯಾಗಿ ಈ ಕಲೆಯ ಬಗ್ಗೆ ಆಸಕ್ತಿ ಹೊಂದಿ ಒಂದೊಂದು ರೀತಿಯಲ್ಲಿ ಕಲಾಮಾತೆಯ ಸೇವೆ ಮಾಡುತ್ತಿದ್ದಾರೆ. ಸಾಧನೆಯಿಂದ ಸ್ತ್ರೀ-ಪುರುಷ ಬೇಧವಿಲ್ಲದೆ ಇಲ್ಲಿ ಎಲ್ಲರೂ ಕಲಾವಿದರಾಗುತ್ತಿದ್ದಾರೆ. ಯಕ್ಷಕಲಾ ಮಾತೆಯ ಮಡಿಲಲ್ಲಿ ಕುಣಿದು ನರ್ತಿಸಿ ಹರ್ಷಿಸುತ್ತಿದ್ದಾರೆ. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ವಿಜಯಲಕ್ಮೀ ಮತ್ತು ತಂಡದಿಂದ ಜರಗುವ ಯಕ್ಷಗಾನವೂ ಇದಕ್ಕೆ ಸಾಕ್ಷಿ. ಈ ಪರಂಪರೆ ಬೆಳೆಯಲಿ” ಎ೦ದು ಶುಭ ಹಾರೈಸಿದರು.
ಶ್ರೀ ರಾಮ ಭಜನಾ ಮಂದಿರದ ಶ್ರೀ ವಿಜಯಕುಮಾರ್ “ಇಂತಹ ಸತ್ಕಾರ್ಯಗಳಿಗೆ ನಮ್ಮ ಮಂದಿರ ಮುಕ್ತವಾಗಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸರಿದಾರಿಗೆ ಒಯ್ದು, ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸುತ್ತದೆ. ಒಟ್ಟಾಗಿ ಸಾಗುವ ಕಲೆಯನ್ನು ಕಲಿಸುತ್ತದೆ. ಕಾರ್ಯಕ್ರಮ ಯಶಸ್ಸಾಗಲಿ” ಎಂದು ಶುಭ ಹಾರೈಸಿದರು.
ಎಂ.ಸಿ.ಎಫ್.ನ ನಿವೃತ್ತ ಉದ್ಯೋಗಿ ವಿಜಯಕುಮಾರ್ ಎನ್., ಇಂಜಿನಿಯರ್ ಗಿರೀಶ್, ವರ್ಕಾಡಿ ಮಧುಸೂದನ ಅಲೆವೂರಾಯ, ಉದ್ಯಮಿ ಶ್ರೀ ಶಿವಪ್ರಸಾದ ಪ್ರಭು ಉಪಸ್ಥಿತರಿದ್ದರು. ಶ್ರೀ ಅಶೋಕ್ ಬಿ. ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಗೈದರು. ಶ್ರೀಮತಿ ರಮ್ಯಾ ರಾಜ್ ಸ್ವಾಗತಿಸಿ, ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿ, ಶ್ರೀಮತಿ ಕೃಪಾ ಖಾರ್ವಿ ಧನ್ಯವಾದವಿತ್ತರು. ಬಳಿಕ ವಿಜಯಲಕ್ಮೀ ಎಲ್.ಎನ್. ತಂಡದಿಂದ ‘ಸೂರ್ಯ ರತ್ನ’ ಎಂಬ ಆಖ್ಯಾನದ ಪ್ರದರ್ಶನ ನಡೆಯಿತು.