ಬೆಂಗಳೂರು : ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 01 ಮಾರ್ಚ್ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ಸೂರ್ಯ ಸಾಥಿ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.
ಪ್ರವರ ಥಿಯೇಟರ್ ಪ್ರಸ್ತುತಿ ‘ಅಣ್ಣನ ನೆನವು’ ಸಾಕ್ಷ್ಯ ನಾಟಕ ಈಗಾಗಲೇ ರಾಜ್ಯದ ಹಲವೆಡೆ ಪ್ರದರ್ಶನಗಳನ್ನು ಕಂಡಿದ್ದು ಅಪಾರ ಜನಮೆಚ್ಚುಗೆ ಪಡೆಯುವ ಜೊತೆಗೆ ಸಾಹಿತ್ಯಾಸಕ್ತರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು” ಕೃತಿ, ಮಹಾಕವಿ ಕುವೆಂಪುರವರ ಜೀವನದ ಹಲವು ಮಹತ್ವದ ಅಧ್ಯಾಯಗಳು ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ವಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ ತಂದೆ ರಾಷ್ಟ್ರಕವಿ ಕುವೆಂಪು ಅವರನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ನೆನಪುಗಳು ‘ಅಣ್ಣನ ನೆನಪು’ (1996) ಕೃತಿಯಲ್ಲಿ ಸಂಗ್ರಹಗೊಂಡಿವೆ. ಕುವೆಂಪುರವರನ್ನು ಒಬ್ಬ ತಂದೆಯಾಗಿ, ಒಬ್ಬ ಮನುಷ್ಯನಾಗಿ ಚಿತ್ರಿಸಿ ಒಂದು ಅಪರೂಪದ ಕೃತಿಯನ್ನು ಪೂರ್ಣಚಂದ್ರ ತೇಜಸ್ವಿಯವರು ಬರೆದಿದ್ದಾರೆ.
ಈ ಕೃತಿ ತೇಜಸ್ವಿಯವರ ಅನುಭವ ಕಥನಗಳ ಸಂಕಲನ. ಇದರಲ್ಲಿರುವ ಪ್ರತಿಯೊಂದು ಅಧ್ಯಾಯವು ಹಾಸ್ಯಬುಗ್ಗೆಯನ್ನು ತರಿಸುವುದರೊಂದಿಗೆ ಕುವೆಂಪುರವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ತೇಜಸ್ವಿ ರಾಷ್ಟ್ರಕವಿ ಕುವೆಂಪು ಅವರಂತಹ ಅದ್ಭುತ ಸಾಹಿತಿಯ ಮಗನಾಗಿಯೂ ತಂದೆಯ ಸಾಹಿತ್ಯದ ನೆರಳಿಂದ ದೂರ ಸಾಗಿ ತಮ್ಮದೇ ಆದ ಪ್ರತ್ಯೇಕ ಶೈಲಿಯಿಂದ, ವೈವಿಧ್ಯಮಯ ಬರಹಗಳಿಂದ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾದವರು. ‘ಅಣ್ಣನ ನೆನಪು’ ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಯೋಚನೆ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು, ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ. ಎಲ್ಲೂ ತಂದೆಯ ಗುಣಗಾನ ಮಾಡದೆ, ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ಕಟ್ಟಿಕೊಡುತ್ತಾರೆ ತೇಜಸ್ವಿ.
ಕುವೆಂಪು ಅವರ ವ್ಯಕ್ತಿತ್ವದಲ್ಲಿದ್ದ ಮಾನವೀಯತೆ, ಮುಗ್ಧತೆ, ವೈಜ್ಞಾನಿಕ ಮನೋಭಾವ, ನಿಷ್ಠುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ. ತಮ್ಮ ಬಾಲ್ಯ, ಯೌವ್ವನಕಾಲದ ಘಟನೆಗಳನ್ನು ತುಂಬ ಹಾಸ್ಯಮಯ ಶೈಲಿಯಲ್ಲಿ ನಿರೂಪಿಸುವ ತೇಜಸ್ವಿ, ನಂತರ ಕಾಲದ ಸಾಹಿತ್ಯಿಕ ವಿಪ್ಲವಗಳನ್ನು ವಿವರಿಸುವಾಗ ಗಂಭೀರವಾದ ಭಾಷಾ ಪ್ರಯೋಗಕ್ಕಿಳಿಯುತ್ತಾರೆ. ಅಂದಿನ ಕಾಲಘಟ್ಟದಲ್ಲಿ ನಡೆದ ನವ್ಯ-ನವೋದಯಗಳ ನಡುವಿನ ತಿಕ್ಕಾಟದ ಪರಿಚಯವನ್ನೂ ಮಾಡಿಕೊಡುತ್ತಾರೆ ತೇಜಸ್ವಿ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ.