ಮಂಗಳೂರು : ತುಳು ಕೂಟ ಕುಡ್ಲ ಇದರ ‘ಬಂಗಾರ್ ಪರ್ಬ’ ಮಹೋತ್ಸವಾಚರಣೆ ಸಮಿತಿಯ ನೇತೃತ್ವದಲ್ಲಿ ‘ಬಂಗಾರ್ ಪರ್ಬಾಚರಣೆ’ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2025 ರಂದು ಮಂಗಳೂರಿನ ಪುರಭವನದ ಕೀರ್ತಿಶೇಷ ಮರೋಳಿ ಬಿ.ದಾಮೋದರ ನಿಸರ್ಗ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಶಾಲೆಯಲ್ಲಿ ತುಳುವನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಕಡ್ಡಾಯಗೊಳಿಸಬೇಕು. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು. ದಕ್ಷಿಣ, ಕನ್ನಡ, ಉಡುಪಿ, ಕಾಸರಗೋಡು ಮಾತ್ರವಲ್ಲದೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕೂಡ ತುಳು ಮಾತನಾಡುವವರು ಇದ್ದಾರೆ. ತುಳುವರು ಹೋರಾಟ ನಡೆಸಿದರೆ ತುಳು ರಾಜ್ಯ ರೂಪುಗೊಳ್ಳುವುದು ನಿಶ್ಚಿತ. ತುಳು ರಾಜ್ಯ ಆಗಲೇಬೇಕು. ಗೋವಾ ಪ್ರತ್ಯೇಕ ರಾಜ್ಯವಾಗಲು ಸಾಧ್ಯವಿದ್ದರೆ,ತುಳು ರಾಜ್ಯ ಯಾಕೆ ಸಾಧ್ಯವಿಲ್ಲ?. 1956ರಲ್ಲಿ ಭಾಷಾವಾರು ವಿಂಗಡಣೆ ಸಂದರ್ಭ ತುಳುವರು ಹೋರಾಟ ಮಾಡಲಿಲ್ಲ. ಪರಿಣಾಮ ತುಳುವನ್ನು ಕನ್ನಡದ ಜತೆಗೆ ಸೇರಿಸಲಾಯಿತು. ಶಿಕ್ಷಣ ಪಡೆದ ಪೋಷಕರು ಇಂದು ಮನೆಗಳಲ್ಲಿ ಕೂಡ ತಮ್ಮ ಮಕ್ಕಳ ಜತೆ ಇಂಗ್ಲಿಷ್ನಲ್ಲಿ ಮಾತನಾಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಪೋಷಕರು ಮನೆಗಳಲ್ಲಿ ಮಕ್ಕಳಲ್ಲಿ ತುಳುವಿನಲ್ಲೇ ಮಾತನಾಡಬೇಕು” ಎಂದರು.
ತುಳು ಕೂಟ ಕುಡ್ಲ ಇದರ ಅಧ್ಯಕ್ಷೆಯಾದ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಮರೋಳಿ, ಸೂರ್ಯನಾರಾಯಣ ದೇವಸ್ಥಾನದ ಗಣೇಶ್ ಶೆಟ್ಟಿ, ಜಿಲ್ಲಾ ಮೂರ್ತೆದಾರರ ಮಹಾಮಂಡಲ (ಬಿ. ಸಿ. ರೋಡ್)ಇದರ ನಿರ್ದೇಶಕ ವಿಜಯ ಕುಮಾರ್ ಸೊರಕೆ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ಮಹಾಬಲ ಶೆಟ್ಟಿ ಕೂಡ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಜೆ. ವಿ. ಶೆಟ್ಟಿ ಸ್ವಾಗತಿಸಿ, ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಬಿ. ಪದ್ಮನಾಭ ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ತುಳು ವಿಚಾರಗೋಷ್ಠಿ, ಯಕ್ಷಮಣಿ-ಮಹಿಳಾ ತಾಳಮದ್ದಳೆ, ತುಳು ಸಾಂಸ್ಕೃತಿಕ ರಂಗು, ಸಾಧಕ ಸನ್ಮಾನ, ‘ಬಂಗಾರ ಪಿಂಗಾರ’ ಸ್ಮರಣ ಸಂಚಿಕೆ ಬಿಡುಗಡೆ, ‘ರೆಂಜೆ ಬನೊತ ಲೆಕ್ಕೆಸಿರಿ’ ತುಳು ಯಕ್ಷಗಾನ, ‘ದೈವದ ಬೂಳ್ಯ’ ಎನ್ನುವ ವಿಶಿಷ್ಟ ಸಂಯೋಜನೆಯ ತುಳು ನಾಟಕ ಪ್ರಸ್ತುತಗೊಂಡಿತು.