ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸವು ದಿನಾಂಕ 12 ಮೇ 2025ರಂದು ಮಂಗಳೂರಿನ ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ‘ವಿವೇಕಾನಂದರ ಕನಸಿನ ಭಾರತ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕರಾದ ಶ್ರೀ ಪ್ರಶಾಂತ್ ನೀಲಾವರ “ಸ್ವಾಮಿ ವಿವೇಕಾನಂದರು ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಹಲವು ಕನಸುಗಳನ್ನು ಕಂಡಿದ್ದರು. ಅವರು ಮೌಲ್ಯಾಧಾರಿತ, ನೈತಿಕತೆ ಹಾಗೂ ಸಾಂಸ್ಕೃತಿಕ ಪರಂಪರೆಗಳಲ್ಲಿ ಬೆಳೆದು ಬಂದ ದೇಶವನ್ನೇ ತಮ್ಮ ಕನಸಿನ ಭಾರತವೆಂದು ಪರಿಗಣಿಸಿದ್ದರು. ಅವರ ದೃಷ್ಟಿಯಲ್ಲಿ ಭಾರತವೆಂದರೆ ಧರ್ಮ, ಆತ್ಮಜ್ಞಾನ, ತಪಸ್ಸು ಮತ್ತು ಮಾನವಸೇವೆಗೂ ಆದ್ಯತೆ ನೀಡುವ ದೇಶ. ಅವರು ಬಡವರು, ಶೋಷಿತರು ಮತ್ತು ದುರ್ಬಲರನ್ನು ಸಹಾನುಭೂತಿಯೊಂದಿಗೆ ನೋಡಬೇಕು ಮತ್ತು ಅವರ ಸೇವೆಯನ್ನು ದೇವರ ಸೇವೆಯೆಂದು ಪರಿಗಣಿಸಬೇಕು ಎಂದು ಸಾರಿದರು. ವಿವೇಕಾನಂದರು ಯುವಕರನ್ನು ರಾಷ್ಟ್ರ ನಿರ್ಮಾಣದ ಶಕ್ತಿ ಎಂದು ಭಾವಿಸಿದ್ದರು. ಯುವಜನತೆಗೆ ಶಕ್ತಿಯುತ, ಆತ್ಮವಿಶ್ವಾಸದಿಂದ ಕೂಡಿದ, ಜವಾಬ್ದಾರಿಯುತ ಜೀವಿಗಳಾಗಬೇಕು ಎಂದು ಉಪದೇಶಿಸಿದರು. ಅವರು ಶಿಕ್ಷಣವನ್ನು ದೇಶದ ಪ್ರಗತಿಯ ಮೂಲ ಅಸ್ತ್ರವೆಂದು ಭಾವಿಸಿದರು. ಅಕ್ಷರಜ್ಞಾನಕ್ಕಿಂತ ಬದುಕಿಗೆ ಬೇಕಾದ ಮೌಲ್ಯಗಳ ಶಿಕ್ಷಣ ಮುಖ್ಯವೆಂದು ಒತ್ತಾಯಿಸಿದರು. ಧರ್ಮ, ಜಾತಿ, ಭಾಷೆ, ಲಿಂಗದ ಹೆಸರಿನಲ್ಲಿ ಬಿಟ್ಟು ಎಲ್ಲರೂ ಸಮಾನರಾಗಿ ಬೆಳೆವ ಭಾರತ ಅವರ ಕನಸು. ಇಂದಿನ ಯುವಕರು ವಿವೇಕಾನಂದರ ಈ ತತ್ವಗಳನ್ನು ಅಳವಡಿಸಿಕೊಂಡರೆ, ಅವರ ಕನಸಿನ ಭಾರತವನ್ನು ನಿಜವಾಗಿ ರೂಪಿಸಬಹುದಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ., ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್ ಹಾಗೂ ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಲೋಕೇಶನಾಥ್ ಬಿ. ವಂದಿಸಿ, ವಿದ್ಯಾರ್ಥಿನಿಯಾದ ನವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.