ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 18 ಮೇ 2025 ರಂದು ಜರಗಿತು.
ಈ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ “ಕೇವಲ ಪಠ್ಯಕ್ಕೆ ಸೀಮಿತವಾಗದೇ ಮಕ್ಕಳು ಪಠ್ಯೇತರ ಚಟವಟಿಕೆಗಳಲ್ಲಿ ತೊಡಗಿಕೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ವೈವಿಧ್ಯಮಯ ಚಟವಟಿಕೆಗಳನ್ನೊಳಗೊಂಡ ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಿವೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು 2020ರಿಂದಲೂ ಪ್ರತಿವರ್ಷ ಮಕ್ಕಳಿಗಾಗಿ ಪಠ್ಯೇತರ ಚಟವಟಿಕೆಗಳಾದ ಕ್ರೀಡೆ, ಯೋಗ, ಸಂಗೀತ, ಸಾಹಿತ್ಯ, ನೃತ್ಯ, ರಂಗಭೂಮಿ, ಹೊರಾಂಗಣ ಆಟಗಳು, ಒಳಾಂಗಣ ಆಟಗಳು, ಗ್ರಾಮೀಣ ಕ್ರೀಡೆಗಳು ಹೀಗೆ ವಿಭಿನ್ನವಾದ ಹಮ್ಮಿಕೊಳ್ಳುತ್ತಾ ಬಂದಿದೆ. ಮಕ್ಕಳ ಅಭ್ಯುದಯಕ್ಕಾಗಿ ಹಾಗೂ ಎಲೆಮರೆ ಕಾಯಿಯಂತಹ ಸಾಧಕರನ್ನು ಮುನ್ನೆಲೆಗೆ ತರುವ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನಮ್ಮ ವೇದಿಕೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಉನ್ನತಿಗಾಗಿ ಶ್ರಮಿಸುತ್ತಿದೆ” ಎಂದು ಅಭಿಪ್ರಾಯಪಟ್ಟರು.
ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಮಾತನಾಡಿ “ನಮ್ಮ ವೇದಿಕೆ ಯುವ ಪ್ರತಿಭೆಗಳನ್ನು ಅರಳಿಸುವ ಮತ್ತು ಅವರಿಗೆ ಪ್ರೋತ್ಸಾಹ ನೀಡುತ್ತಾ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಾ ಬಂದಿದೆ. ರಾಜ್ಯ ಹಾಗೂ ಹೊರ ರಾಜ್ಯದ ಘಟಕಗಳೂ ಸಹ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇದೇ ರೀತಿಯ ಮೌಲಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಿವೆ” ಎಂದರು.
ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಧರ್ಮಾತೀತವಾಗಿ, ಜಾತ್ಯಾತೀತವಾಗಿ, ಲಿಂಗಾತೀತವಾಗಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮೌಲ್ಯಗಳನ್ನು ಬಿತ್ತುವುದರ ಮುಖೇನ ಸಮಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕಾರ್ಯೋನ್ಮುಖವಾಗಿದೆ. ಮಕ್ಕಳಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಅವುಗಳನ್ನು ವೃದ್ದಿಸಿ ವ್ಯಕ್ತಿ ಗೌರವ, ದೇಶ ಗೌರವ, ಕೌಟುಂಬಿಕ ಗೌರವ, ಸಂಬಂಧಗಳ ಮೌಲ್ಯಗಳ ಬಗ್ಗೆ ಅರಿವು ಮಾಡಿಸಬೇಕಿದೆ” ಎಂದರು.
ಇಂದಿನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿಸ್ತಾರ ಅಕಾಡೆಮಿಯ ವೇದಶ್ರೀ ನಿಶಿತ್ ರವರು ‘ಮೋಜಿನ ಗಣಿತ’ ಹಾಗೂ ಚಿತ್ರ ಕಲಾವಿದೆ ಬಿಂದು ಎಚ್.ಎಸ್.ರವರು ‘ಮಂಡಲ ಕಲೆ’ ಮತ್ತು ಕವಯಿತ್ರಿ ಲತಾಮಣಿ ಎಂ.ಕೆ. ತುರುವೇಕೆರೆ ‘ಶಿಶು ಕಾವ್ಯ’ದ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ತಾಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ, ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಜಿಲ್ಲಾ ಖಜಾಂಚಿ ಆರ್.ಎಸ್. ರಮೇಶ್, ರೋವರ್ ಲೀಡರ್ ಆರ್.ಈ. ಗಿರೀಶ್, ಜನನಿ ಫೌಂಡೇಷನ್ ಅಧ್ಯಕ್ಷೆ ಎಚ್.ಎಸ್. ಭಾನುಮತಿ, ಹಾಸನಾಂಬ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾವತಿ ವೆಂಕಟೇಶ್, ಪೋಷಕರಾದ ಚಂದನ ಚನ್ನರಾಯಪಟ್ಟಣ, ಕಾವ್ಯ, ಮಮತ, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.