ಡಾ. ಎಸ್. ಪಿ. ಪಾಟೀಲರು ಜೈನ ಸಾಹಿತ್ಯದ ಸಿದ್ಧಾಂತ ಚರಿತ್ರೆಗಳ ಖ್ಯಾತ ವಿದ್ವಾಂಸರು. 31 ಮೇ 1939ರಲ್ಲಿ ಮಹಾರಾಷ್ಟ್ರದ ಅಂಕಲಿ ಜಿಲ್ಲೆಯ ಸಾಂಗಲಿಯಲ್ಲಿ ಜನಿಸಿದ ಇವರು ಪೀರಗೌಡ ಧರ್ಮಗೌಡ ಪಾಟೀಲ ಮತ್ತು ಪದ್ಮಾವತಿ ದಂಪತಿಯ ಸುಪುತ್ರ. ಮಹಾರಾಷ್ಟ್ರದ ಅಂಕಲಿ ಜಿಲ್ಲೆಯ ಸಾಂಗಲಿಯ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಬಿ. ಎ. ಪದವಿ ಪಡೆದ ನಂತರ ಶ್ರೀಯುತ ರಂ.ಶ್ರೀ ಮುಗಳಿಯವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ ಪಡೆದರು. ಇವರು ಮಂಡಿಸಿದ ‘ಚಾವುಂಡರಾಯ ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಪದವಿ ದೊರೆಯಿತು.
ಎಸ್. ಪಿ. ಪಾಟೀಲರು ಉದ್ಯೋಗಕ್ಕೆ ಪಾದಾರ್ಪಣೆ ಮಾಡಿದ್ದು ಅಧ್ಯಾಪಕರಾಗಿ ಶೇಡಬಾಳದ ಸನ್ಮತಿ ವಿದ್ಯಾಲಯದಲ್ಲಿ. ತದನಂತರ ಕಾಮರ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದರು. ಹೀಗೆ ಮುಂದುವರೆದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ರೀಡರ್ ಆಗಿ, ಜೈನ ಶಾಸ್ತ್ರ ಪ್ರಾಧ್ಯಾಪಕರಾಗಿ, ಆ. ನೇ. ಉಪಾಧ್ಯೆ ಪ್ರಾಕೃತ ಮತ್ತು ಜೈನ ಶಾಸ್ತ್ರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ‘ಪ್ರಗತಿ ಮತ್ತು ಜನ ವಿಜಯ’ ಎಂಬ ಜೈನ ಮಾಸಪತ್ರಿಕೆಯ ಸಂಪಾದಕರಾಗಿಯೂ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ ಕೀರ್ತಿ ಇವರದು. ಸುಮಾರು ಏಳು ಮಂದಿ ವಿದ್ಯಾರ್ಥಿಗಳಿಗೆ ಪಿ. ಎಚ್. ಡಿ. ಮತ್ತು ಸುಮಾರು ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ಎಂ. ಫಿಲ್ ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದ ಖ್ಯಾತಿ ಇವರದ್ದು. ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ವಿಚಾರ ಸಂಕಿರಣ, ಕಾರ್ಯಗಾರಗಳು ಮತ್ತು ಉಪನ್ಯಾಸಗಳಲ್ಲಿ ಭಾಗಿಯಾಗಿದ್ದಾರೆ .
ಅನೇಕ ಸಂಘ ಸಂಸ್ಥೆಗಳೊಡನೆ ಒಡನಾಟ ಇರುವ ಎಸ್. ಪಿ. ಪಾಟೀಲರು ನ್ಯಾಷನಲ್ ಬುಕ್ ಟ್ರಸ್ಟ್, ವಿಶ್ವವಿದ್ಯಾಲಯಗಳ ಜೈನ ಶಾಸ್ತ್ರ ಅಧ್ಯಯನ ಕೇಂದ್ರ, ಕರ್ನಾಟಕ ಸರಕಾರದ ಪಠ್ಯಪುಸ್ತಕ ಸಮಿತಿ, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಅಖಿಲ ಭಾರತ ವರ್ಷೀಯ ದಿಗಂಬರ ಶಾಸ್ತ್ರೀ ಪರಿಷತ್ತು ಇತ್ಯಾದಿಗಳ ಸಂಪರ್ಕದಲ್ಲಿದ್ದು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಇವರದು.
ಡಾ. ಎಸ್. ಪಿ. ಪಾಟೀಲರು ಜೈನ ಸಂಸ್ಕೃತಿಗೆ ಸಂಬಂಧಪಟ್ಟ ಹಾಗೆ ಅನೇಕ ಸಾಹಿತ್ಯ ರಚನೆಗಳನ್ನು ಮಾಡಿದ್ದಾರೆ. ‘ಜೈನ ಸಂಸ್ಕೃತಿಯ ಹಬ್ಬಗಳು’, ‘ಆದಿನಾಥ’, ‘ಜೈನ ಸಾಹಿತ್ಯ ಸಂಸ್ಕೃತಿ’, ‘ಜೈನ ದರ್ಶನ’, ‘ಜಿನವಾಣಿ ಚಿಂತನ’, ‘ಪೂರ್ವ ಪುರಾಣ’, ‘ಅಜಿತನಾಥ ಪುರಾಣ ಸಾರ’, ‘ಜಿನ ಮಾಣಿಕ್ಯ’, ‘ಆಧುನಿಕ ಕನ್ನಡ ಜೈನ ಲೇಖಕರು’, ‘ಬಾಂಧವ್ಯ’, ‘ಸಿದ್ಧಶೇಷೆ’, ‘ದಾನಚಿಂತಾಮಣಿ ಅತ್ತಿಮಬ್ಬೆ’, ಹೀಗೆ ಹಲವಾರು ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ‘ಮಹಾವೀರ ಭಕ್ತಿಗಂಗಾ’, ‘ಕರ್ನಾಟಕದ ಸಾಂಸ್ಕೃತಿಕ ಪರಂಪರೆ’, ‘ಹೆಣ್ಣು’, ‘ಅತಿಥಿ’, ‘ಬಾಡದ ಹೂ’ ಮತ್ತು ‘ಮಹಿಳೆಯರ ಮರಾಠಿ ಕಥೆಗಳು’ ಇತ್ಯಾದಿ ಅವರ ಸಂಪಾದಿತ ಕೃತಿಗಳಲ್ಲಿ ಮುಖ್ಯವಾದವು. ಅನೇಕ ಅನುವಾದಿತ ಕೃತಿಗಳನ್ನು ಒಳಗೊಂಡಂತೆ ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ‘ಸಿದ್ಧಶೇಷೆ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ’, ಜೈನ ಧರ್ಮ ಕೃತಿಗೆ ‘ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಪ್ರಶಸ್ತಿ’, ಕನ್ನಡ ಮರಾಠಿ ಬಾಂಧವ್ಯಕ್ಕೆ ‘ಶ್ರೀ ವರದರಾಜ ಆದ್ಯ ಪ್ರಶಸ್ತಿ’, ಜೈನ ಸಾಹಿತ್ಯ- ಸಂಸ್ಕೃತಿ ಸೇವೆಗೆ ‘ಶ್ರೀ ಗೋಮಟೇಶ್ವರ ಪ್ರಶಸ್ತಿ’, ‘ಆಚಾರ್ಯ ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ’, ‘ವರ್ಷದ ವ್ಯಕ್ತಿ ಪ್ರಶಸ್ತಿ’, ‘ಡಾ. ಆ. ನೇ. ಉಪಾಧ್ಯೆ ಸಂಶೋಧನಾ ಪ್ರಶಸ್ತಿ’, ಇತ್ಯಾದಿಗಳು ಇವರ ಸಾಹಿತ್ಯ ಸೇವೆಗೆ ಸಂದ ಗೌರವ.
1993ರಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ಸ್ಮರಣಾರ್ಥ ಜೈನ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದವರಿಗೆ ನೀಡಲು ‘ಚಾವುಂಡರಾಯ ಪ್ರಶಸ್ತಿ’ಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರವಣಬೆಳಗೊಳದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸ್ಥಾಪಿಸಿದ್ದರು. 2001ನೇ ಇಸವಿಯ ‘ಚಾವುಂಡರಾಯ ಪ್ರಶಸ್ತಿ’ಯ ಗೌರವವನ್ನು ಡಾ. ಎಸ್. ಪಿ. ಪಾಟೀಲರು ಪಡೆದಿದ್ದಾರೆ.
–ಅಕ್ಷರೀ