ಸಾಹಿತಿ ಹಾಗೂ ಸಂಶೋಧಕರಾಗಿ ಹೆಸರು ಮಾಡಿದವರು ಡಾ. ವೀರಣ್ಣ ರಾಜೂರ 04 ಜೂನ್ 1947ರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಬಸಪ್ಪ ಮತ್ತು ಫಕೀರಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು.
ಬೆನಕನಾಳ ಮತ್ತು ಹನುಮಸಾಗರದಲ್ಲಿ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಗದಗ ಜೆ. ಟಿ. ಕಾಲೇಜ್ ನಲ್ಲಿ ಬಿ. ಎ. ಪದವಿಯ ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದರು. ‘ಕನ್ನಡ ಸಾಂಗತ್ಯ ಸಾಹಿತ್ಯ’ ಎಂಬ ಮಹಾ ಪ್ರಬಂಧ ಮಂಡಿಸಿ ಪಿ. ಎಚ್. ಡಿ. ಪದವಿಯನ್ನು ಗಳಿಸಿದರು. ಎಪಿಗ್ರಫಿಯಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದರು. ಸರಳ ಸೌಜನ್ಯತೆಯನ್ನು ಮೈಗೂಡಿಸಿಕೊಂಡ ವೀರಣ್ಣ ರಾಜೂರ ಖ್ಯಾತ ಸಂಶೋಧಕ ಎಂ. ಎಂ. ಕಲಬುರ್ಗಿಯವರ ಅತ್ಯಂತ ಪ್ರಿಯ ಶಿಷ್ಯರಾಗಿದ್ದರು.
ಇವರು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇರಿ, ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ, ಪ್ರಸಾರಂಗದ ನಿರ್ದೇಶಕರಾಗಿ ಹೀಗೆ ವಿವಿಧ ಆಯಾಮಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ ಫೆಲೋಶಿಪ್ ಪಡೆದ ಇವರು, ಹಲವಾರು ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಾಗಾರಗಳಲ್ಲಿಯೂ ಮತ್ತು ವಿಚಾರ ಸಂಕೀರ್ಣಗಳಲ್ಲಿಯೂ ವಿಶೇಷ ಉಪನ್ಯಾಸಗಳನ್ನು ನೀಡಿದ ಅನುಭವಿಯಾಗಿದ್ದಾರೆ. ವಚನ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಿದ್ದು ಮಾತ್ರವಲ್ಲದೆ ಬಸವೋತ್ತರ ಯುಗದ ವಚನಕಾರರ ಬಗ್ಗೆ ಆಳವಾದ ಅಧ್ಯಯನ ಮಾಡಿ ಸಂಶೋಧನೆ ನಡೆಸಿದವರಲ್ಲಿ ರಾಜೂರ ಪ್ರಮುಖರು.
‘ಕನ್ನಡ ಸಾಂಗತ್ಯ’, ‘ಸಾಹಿತ್ಯ ವಚನ ಅಧ್ಯಯನ’, ‘ಸ್ವರ ವಚನಗಳು’, ‘ಬಸವೋತ್ತರ ಯುಗದ ವಚನಕಾರರು’ ಮತ್ತು ‘ಏಕಾಂಕ ನಾಟಕಗಳ ಸಂಗ್ರಹ’ ಇವೆಲ್ಲ ಅವರ ಸ್ವತಂತ್ರ ಕೃತಿಗಳು. ಹಲವಾರು ಜವಾಬ್ದಾರಿಯತ ಸ್ಥಾನಗಳನ್ನು ನಿರ್ವಹಿಸಿದ ಹೆಗ್ಗಳಿಕೆ ರಾಜೂರ ಅವರದ್ದು. ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿಯನ್ನು ಮಾಡಿದ ಹೆಗ್ಗಳಿಕೆ ಇವರದು. ಅಂತರಾಷ್ಟ್ರೀಯ ಕಿಟ್ಟೆಲ್ ಸಮ್ಮೇಳನದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 20ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಪಿ. ಎಚ್. ಡಿ. ಹಾಗೂ ಎಂ.ಫಿಲ್ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ನಾಟಕ ರಚನೆ ಮಾತ್ರವಲ್ಲದೆ ರಂಗಭೂಮಿಯಲ್ಲಿಯೂ ನಿರಂತರವಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದು. ‘ಅವಳೇ ಗಂಡ ನಾನೇ ಹೆಂಡ್ತಿ’, ‘ಲವ್ ಅಂದ್ರೆ ಪ್ರೇಮ’ ಮುಂತಾದ ಅನೇಕ ನಾಟಕಗಳನ್ನು ರಚಿಸಿದ್ದಾರೆ. ‘ಹಾಲಬಾವಿ ವೀರಭದ್ರಪ್ಪನವರು’ ಮತ್ತು ‘ಪಿ. ಬಿ. ಧುತ್ತರಗಿ’ ಇವು ಅವರ ರಚನೆಯ ಜೀವನ ಚರಿತ್ರೆಗಳು. ‘ಸಿದ್ದಲಿಂಗ ಶತಕ’, ‘ವಚನಾಮೃತಸಾರ’, ‘ವಚನ ಶಾಸ್ತ್ರ ಸಾರ’, ‘ಶಿವ ಯೋಗ ಪ್ರದೀಪಿಕೆ’, ‘ಭಕ್ತ್ಯಾನಂದ ಸುಧಾರ್ಣವ’ ಇವುಗಳೆಲ್ಲ ಇವರು ಸಂಪಾದಿಸಿದ ಗ್ರಂಥಗಳು. ‘ಸಮತಾ’ ಮತ್ತು ‘ಕಥಾ ಶಾಲ್ಮಲಾ’ ಇವರ ಕಥಾಸಂಕಲನಗಳು. ‘ಜನಪದ ಸಾಹಿತ್ಯ ದರ್ಶನ’,‘ಜಾನಪದ ಕಥೆಗಳು’ ಮತ್ತು ‘ಜಾನಪದ ಜಾಣ್ಮೆ’ ಮುಂತಾದ ಕೃತಿಗಳು ಸೇರಿ ಸುಮಾರು ನೂರಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಣೆ ಮಾಡಿದ್ದಾರೆ.
ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಸಂದಿವೆ ‘ಹುಬ್ಬಳ್ಳಿ ಮೂರು ಸಾವಿರ ಮಠ ಗ್ರಂಥ ಪ್ರಶಸ್ತಿ’, ‘ಜ.ಚ.ನಿ. ಪ್ರಶಸ್ತಿ’, ‘ಫಗು ಹಳಕಟ್ಟಿ ಪ್ರಶಸ್ತಿ’, ‘ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ’, ಮಾತ್ರವಲ್ಲದೆ ಕುಷ್ಟಗಿ ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಗೌರವವೂ ಇವರಿಗೆ ದೊರೆತಿದೆ. ಅಭಿಮಾನಿಗಳೆಲ್ಲ ಸೇರಿ ಇವರಿಗೆ ಅರ್ಪಿಸಿದ ಅಭಿನಂದನ ಗ್ರಂಥ ‘ರಾಜ ಮಾರ್ಗ’.
ಡಾಕ್ಟರ್ ವೀರಣ್ಣ ರಾಜೂರ ಅವರ ಲೇಖನಿಯಿಂದ ಇನ್ನಷ್ಟು ಉತ್ತಮ ಕೃತಿಗಳು ಹೊರಬರಲಿ.
…… ಅಕ್ಷರೀ