ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ 141ನೆಯ ಜಯಂತ್ಯುತ್ಸವ ಕಾರ್ಯಕ್ರಮ ದಿನಾಂಕ 04 ಜೂನ್ 2025 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಇದ್ದ ಸಂಬಂಧ ತಾಯಿ-ಮಗುವಿನಷ್ಟೇ ನಿಕಟವಾದದ್ದು. ಅವರು ಕೇವಲ ಸಂಸ್ಥಾಪಕರು ಮಾತ್ರವಲ್ಲದೆ ಅದರ ಬೆಳವಣಿಗೆಯಲ್ಲಿಯೂ ಕೂಡ ನಿರಂತರವಾಗಿ ಆಸಕ್ತಿ ವಹಿಸುತ್ತಾ ಪೋಷಕರಾಗಿ, ಮಾರ್ಗದರ್ಶಕರಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವುದರ ಜೊತೆಗೆ ಅದು ಸ್ವಾಯತ್ತ ಸಂಸ್ಥೆಯಾಗ ಬೇಕು ಎಂದು ಆರಂಭದಿಂದಲೇ ಪ್ರತಿಪಾದಿಸುತ್ತಾ ಬಂದವರು. 1918ರಲ್ಲಿ ನಾಲ್ಕನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಅಯೋಜಿತವಾದಾಗ ಸಮ್ಮೇಳನಾಧ್ಯಕ್ಷತೆಯ ಕಲ್ಪನೆ ಬಂದಿತು. ಸಮ್ಮೇಳನಾಧ್ಯಕ್ಷತೆಯ ಕುರಿತು ಮಹಾರಾಜರ ಸೂಚನೆಯನ್ನು ಅಪೇಕ್ಷಿಸಿ ಪಂಡಿತರ ನಿಯೋಗವು ಬಂದಾಗ ‘ಕನ್ನಡ ಸಾಹಿತ್ಯ ಪರಿಷತ್ತನ್ನು ನೋಡಿ ಕೊಳ್ಳಲು ಪರಿಣಿತರು ಇದ್ದಾರೆ, ಅವರು ನಿರ್ಣಯಿಸಲಿ, ಅರಮನೆ ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ” ಎಂದು ಬಹಳ ಸ್ಪಷ್ಟವಾಗಿ ಹೇಳಿ ಪರಿಷತ್ತು ಸಾಗಬೇಕಾದ ದಾರಿಯನ್ನು ಅವರು ಖಚಿತ ಪಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವ ಪರಂಪರೆಯನ್ನು ಆರಂಭಿಸಿದವರೇ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರು, ಇದನ್ನು ಮುಂದಿನ ಎಲ್ಲಾ ಕನ್ನಡ ಸರ್ಕಾರಗಳೂ ಮುಂದುವರೆಸಿಕೊಂಡು ಬಂದಿವೆ.” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಚುನಾವಣಾ ಆಯುಕ್ತರಾದ ನ್ಯಾಯಾಧೀಶ ಜಿ. ಎಸ್. ಸಂಗ್ರೇಶಿ ಮಾತನಾಡಿ “ಸಾಮಾಜಿಕ ಕಾಳಜಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಸೂರು ಸಂಸ್ಥಾನಕ್ಕೆ ಪರಿಚಯಿಸಿದ ನಾಲ್ವಡಿಯವರ ಜನ್ಮದಿನವನ್ನು ‘ಸಾಮಾಜಿಕ ಕಾಳಜಿ’ ದಿನವನ್ನಾಗಿ ಆಚರಿಸಬೇಕು ಎಂದು ಅಭಿಪ್ರಾಯ ಪಟ್ಟು, ಅವರ ಸ್ಪಷ್ಟತೆ ಮತ್ತು ಮುನ್ನೋಟಗಳು ನಮಗೆ ಇಂದಿಗೂ ಮಾರ್ಗದರ್ಶಕ” ಎಂದರು.
ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಕುರಿತು ಹಂಪಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಮಾತನಾಡಿ “ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ ಸಾಧನೆಯ ಹಿಂದೆ ಹತ್ತನೆಯ ಚಾಮರಾಜ ಒಡೆಯರ್ ರೂಪಿಸಿದ ಹಿನ್ನೆಲೆ ಇದೆ. ಅಂದಿನ ರಾಜಕೀಯ ಮತ್ತು ಸಾಮಾಜಿಕ ಸಂದರ್ಭವೂ ಅವರಿಗೆ ಪೂರಕವಾಗಿತ್ತು. ಅವರು ವರ್ತಮಾನದ ಸಾಧ್ಯತೆಗಳನ್ನು ನಿಖರವಾಗಿ ಬಳಿಸಿಕೊಂಡು ಮಹತ್ತರವಾದ ಕೊಡುಗೆಗಳನ್ನು ನೀಡಿದರು” ಎಂದು ವಿಶ್ಲೇಷಿಸಿದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ನ್ಯಾಯವಾದಿ ನಾಗಯ್ಯನವರು ನಾಲ್ವಡಿಯವರ ಕಾಲವಾಧಿಯನ್ನು ಸುವರ್ಣ ಸಂದರ್ಭ ಎಂದು ವರ್ಣಿಸಿದರು. ದತ್ತಿದಾನಿಗಳಾದ ಟಿ. ಕೃಷ್ಣರಾಜು ಮತ್ತು ಡಾ. ಎಂ. ಜಿ. ನಾಗರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಮಹಾಲಕ್ಷ್ಮಿ ಟಿ. ಕೃಷ್ಣರಾಜು ಸವಿನೆನಪಿನ ದತ್ತಿ ಪುರಸ್ಕಾರವನ್ನು ಕು. ಚಿನ್ಮಯಿ ಪಿ. ಎಸ್., ಕು. ಗಂಗಶ್ರೀ ಡಿ., ಕು. ಲಿಖಿತಾ, ಕು. ಸುಶೀಲಾ ಎಸ್. ಅವರಿಗೂ ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ಪ್ರಶಸ್ತಿಯನ್ನು ಎಂ. ಟಿ. ತಿಮ್ಮಪ್ಪ ಮತ್ತು ಶ್ರೀಮತಿ. ಎಸ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿಯನ್ನು ಜಿ. ಸೀತಾರಾಮು ಅವರಿಗೆ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ. ಭ. ರಾಮಲಿಂಗ ಶೆಟ್ಟಿ ಸ್ವಾಗತಿಸಿ, ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿ, ಇನ್ನೊಬ್ಬ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು , ಕನ್ನಡ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.