ಪೂಂಜಾಲಕಟ್ಟೆ : ತೆಂಕುತಿಟ್ಟಿನ ಹಿರಿಯ ಹಾಸ್ಯ ಕಲಾವಿದ ಸಿದ್ಧಕಟ್ಟೆ ಪದ್ಮನಾಭ ಶೆಟ್ಟಿಗಾರ್ ದಿನಾಂಕ 08 ಜೂನ್ 2025ರಂದು ನಿಧನ ಹೊಂದಿದ್ದಾರೆ. ಇವರಿಗೆ 70 ವರ್ಷ ವಯಸ್ಸಾಗಿತ್ತು. ಶೆಟ್ಟಿಗಾರ್ ಅವರು ಕಟೀಲು 2ನೇ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಬಳಿಕ ನಿವೃತ್ತಿ ಹೊಂದಿದ್ದರು. ಅವರು ತೆಂಕುತಿಟ್ಟು ಯಕ್ಷಗಾನದಲ್ಲಿ ಆಗ್ರಗಣ್ಯ ಪಾರಂಪರಿಕ ಹಾಸ್ಯಗಾರರಾಗಿ ಪ್ರಸಿದ್ಧರಾಗಿದ್ದರು.
ಸಂಗಬೆಟ್ಟುವಿನಲ್ಲಿ ದಿ. ರಾಮಣ್ಣ ಶೆಟ್ಟಿಗಾರ್ ಹಾಗೂ ಗಿರಿಜಾ ದಂಪತಿಯ ಪುತ್ರರಾಗಿ 1956ರ ಮಾರ್ಚ್ 01ರಂದು ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಪಡೆದು ಯಕ್ಷಗಾನದ ಬಗ್ಗೆ ಆಕರ್ಷಿತರಾದರು. ಕೊರಗದಾಸ ಸಿದ್ದಕಟ್ಟೆ ಅವರಲ್ಲಿ ನಾಟ್ಯಾಭ್ಯಾಸ ಮಾಡಿ ತಮ್ಮ 22ನೇ ವರ್ಷದಲ್ಲಿ ರಂಗ ಪ್ರವೇಶಿಸಿ ವೇಣೂರು ಸುಂದರ ಆಚಾರ್ಯರ ಗರಡಿಯಲ್ಲಿ ಪಳಗಿದ ಅವರು ಒಬ್ಬ ಉತ್ತಮ ಹಾಸ್ಯ ಕಲಾವಿದರಾಗಿ ಮೂಡಿಬಂದರು. ತುಳು, ಕನ್ನಡ ಪೌರಾಣಿಕ ಪ್ರಸಂಗಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿದ ಅವರು ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಪಾತ್ರ ನಿರ್ವಹಣೆ ಬಲ್ಲವರಾಗಿದ್ದರು. ತೆಂಕುತಿಟ್ಟಿನ ಕುಂಡಾವು, ಸುಬ್ರಹ್ಮಣ್ಯ, ಕೊಲ್ಲೂರು, ಸುಂಕದಕಟ್ಟೆ, ಸುರತ್ಕಲ್, ಕಟೀಲು ಮೇಳ ಹೀಗೆ ಸುಮಾರು ಐದು ದಶಕ ಯಕ್ಷಗಾನ ತಿರುಗಾಟ ಮಾಡಿದ ಕೀರ್ತಿ ಇವರಿಗೆ.
ಕಟೀಲು ಮೇಳದಲ್ಲಿ ಸುದೀರ್ಘಕಾಲ ಪ್ರಧಾನ ಹಾಸ್ಯ ಕಲಾವಿದರಾಗಿದ್ದರು. ಮೂಕಾಸುರ, ವಿಜಯ, ದಾರುಕ, ಬಾಹುಕ, ವಾಪಣ್ಣ, ಶ್ರೀ ದೇವೀ ಮಹಾತ್ಮಯ ಪುರೋಹಿತ ಮುಂತಾದ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಯಕ್ಷಗಾನ ಮತ್ತು ತಾಳಮದ್ದಳೆಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದು, ನಿವೃತ್ತಿಯ ಬಳಿಕ ವ್ಯಾಪಾರ ನಡೆಸುತ್ತಿದ್ದರು. ಮೂಕಾಸುರ, ವಿಜಯ, ದಾರುಕ, ಪಾಪಣ್ಣ, ಬಾಹುಕ ಹೀಗೆ ಹಲವು ಪಾತ್ರಗಳ ಮೂಲಕ ಕಲಾಭಿಮಾನಿಗಳನ್ನು ಇವರು ರಂಜಿಸಿದ್ದಾರೆ. ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಅವರು ಪಡೆದಿದ್ದರು. ಯಕ್ಷಗಾನ ಕಲಾರಂಗ ಪ್ರಶಸ್ತಿ ಜೊತೆಗೆ ಒಂದು ವಾರದ ಹಿಂದೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ʼಸುವರ್ಣ ಪುರಸ್ಕಾರʼ ಇವರಿಗೆ ಲಭಿಸಿದೆ. ಪತ್ನಿ ಮತ್ತು ಇಬ್ಬರು ಪುತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.