ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಸಂಘಟಿಸಿದ ‘ಸಂಭ್ರಮ – 2025’ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕ್ರತಿಕ ಸ್ವರ್ಧೆಯು ದಿನಾಂಕ 11 ಜೂನ್ 2025ರಂದು ಮಂಗಳೂರಿನ ಕೋಣಾಜೆಯಲ್ಲಿರುವ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಇವರು ಮಾತನಾಡಿ “ವಿದ್ಯಾರ್ಥಿಗಳಿಗೆ ಓದಿನ ಜೊತೆ ಜೊತೆಗೆ ವಿವಿಧ ಕಲೆಗಳ ಅಭಿವ್ಯಕ್ತಿಗೆ ಅವಕಾಶ ನೀಡುವ ವಿಶ್ವವಿದ್ಯಾನಿಲಯದ ಕ್ರಮ ಶ್ಲಾಘನೀಯವಾದದ್ದು. ಕಲೆ ಮತ್ತು ಕಲಾಭಿರುಚಿ ಉತ್ತಮ ನಾಗರೀಕರನ್ನು ಬೆಳೆಸುತ್ತದೆ, ಕಲೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಮುಂದೆ ತಾವು ಮಾಡಬೇಕಾಗಿರುವ ಉದ್ಯೋಗ – ವ್ಯಾಪಾರಗಳಲ್ಲಿ ಉನ್ನತಿಯಲ್ಲಿ ಸಾಧಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. “ವಿದ್ಯಾರ್ಥಿಗಳಿಗೆ ಭೋಧಿಸುವ ಉಪನ್ಯಾಸಕರು ಒಂದು ರೀತಿಯಿಂದ ಜಾದೂಗಾರರಿದ್ದಂತೆ. ತಮ್ಮ ಜ್ಞಾನದಿಂದ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳೆಸುವ ಜಾದೂ ಮಾಡುತ್ತಾರೆ. ಜ್ಞಾನದ ಕೇಂದ್ರವಾದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಖುಶಿ ಖುಶಿಯಾಗಿ ಸಂಭ್ರಮದಂತಹ ಸಾಂಸ್ಕ್ರತಿಕ ಸ್ವರ್ಧೆಗಳಿಂದ ಮತ್ತಷ್ಟು ಪ್ರತಿಭಾವಂತರಾಗಿರಿ” ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಗೌರವಾನ್ವಿತ ಕುಲ ಸಚಿವರಾದ ಶ್ರೀ ಕೆ. ರಾಜು ಮೊಗವೀರ ಕೆ.ಎ.ಎಸ್. ಮಾತನಾಡಿ “ತಮ್ಮ ಬದ್ದತೆ ಮತ್ತು ವೃತ್ತಿಪರತೆಯಿಂದ ಜಾದೂ ಕಲೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಿರುವ ಕುದ್ರೋಳಿ ಗಣೇಶ್ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರು. ತಾವು ಮಾಡುವ ಕೆಲಸವನ್ನು ಅತ್ಯುತ್ತಮವಾಗಿ ಮಾಡುತ್ತೇವೆ ಅನ್ನುವ ಸಂಕಲ್ಪ ವಿದ್ಯಾರ್ಥಿಗಳದ್ದಾಗಿರಲಿ” ಎಂದು ಹೇಳಿದರು.
ಕುದ್ರೋಳಿ ಗಣೇಶ್ ಹಾಗೂ ಅವರ ಪತ್ನಿ ಶ್ರೀಮತಿ ರಂಜಿತಾರವರಿಗೆ ಸನ್ಮಾನ ನೀಡಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲದ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯ್ಕ ಸ್ವಾಗತಿಸಿ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾದ ಶ್ರೀ ಮದನ್ ಕುಮಾರ್ ಹಾಗೂ ಪದಾಧಿಕಾರಿಗಳಾದ ಶ್ರೀ ಕಾರ್ತಿಕ್ ವಿ., ಶ್ರೀ ರಾಮಪ್ರಸಾದ್ ಪಿ.ಟಿ., ಕುಮಾರಿ ಜಿ.ಎನ್. ಪಾವನ, ಶ್ರೀ ಮಹೇಶ್ ಕೂಡಗಿ, ಶ್ರೀ ಮೀರಜ್ ಬಿ. ಉಪಸ್ಥಿತರಿದ್ದರು.