ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯೋಜನೆಗಳಲ್ಲಿ ಒಂದಾದ ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯಡಿ ಸೇವಾನಿರತರಾಗಿರುವ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆಯು ದಿನಾಂಕ 14 ಜೂನ್ 2025ರ ಶನಿವಾರದಂದು ಮಂಗಳೂರಿನ ಪತ್ತುಮುಡಿ ಸಭಾಂಗಣದಲ್ಲಿ ನಡೆಯಿತು.
ಪಟ್ಲ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷರೂ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕರಾಗಿರುವ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಸಕ್ತ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ರೂಪುರೇಷೆಯ ಬಗ್ಗೆ ಯಕ್ಷಗಾನ ಶಿಕ್ಷಕರಿಗೆ ತಿಳಿದರು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಲಹಾ ಸಮಿತಿಯ ಗೌರವ ಸಲಹೆಗಾರರಾದ ಪ್ರೊ. ಎಂ.ಎಲ್. ಸಾಮಗ ಪ್ರಸಕ್ತ ಕಾಲದಲ್ಲಿ ಯಕ್ಷಗಾನ ಶಿಕ್ಷಣದ ಸಾಧ್ಯತೆ ಮತ್ತು ಶೈಕ್ಷಣಿಕ ವೈಧಾನಿಕತೆಯ ಬಗ್ಗೆ ಯಕ್ಷಗಾನ ಶಿಕ್ಷಕರಿಗೆ ಮಾಹಿತಿ ನೀಡಿದರು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಲಹಾ ಸಮಿತಿಯ ಗೌರವ ಸಲಹೆಗಾರರಾದ ಡಾ. ಎಂ. ಪ್ರಭಾಕರ ಜೋಷಿ ಯಕ್ಷಗಾನ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ ಯಕ್ಷಗಾನ ಶಿಕ್ಷಕರ ಸವಾಲು – ಸಾಧ್ಯತೆಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಯಕ್ಷಧ್ರುವ ದಶಮ ಪಟ್ಲ ಸಂಭ್ರಮದಲ್ಲಿ ಬಿಡುಗಡೆಯಾದ ‘ಯಕ್ಷಧ್ರುವ ಯಕ್ಷಶಿಕ್ಷಣ – ತೆಂಕುತಿಟ್ಟು ಯಕ್ಷಗಾನ ಶಿಕ್ಷಣ ತಂತ್ರಜ್ಞಾನಾಧಾರಿತ ಪಠ್ಯ ಪುಸ್ತಕ’ವನ್ನು ಯಕ್ಷಗಾನ ಶಿಕ್ಷಕರಿಗೆ ವಿತರಿಸಲಾಯಿತು. ಯಕ್ಷಗಾನ ಪಠ್ಯಪುಸ್ತಕವನ್ನು ಪರಿಚಯಿಸಿ ಅದರ ಉಪಯೋಗದ ವಿಧಾನವನ್ನು ಯಕ್ಷಗಾನ ಶಿಕ್ಷಕರಿಗೆ ತಿಳಿಸಲಾಯಿತು. ಆ ಬಳಿಕ ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯ ನೀತಿ ಸಂಹಿತೆಯನ್ನು ತಿಳಿಸುವುದರ ಜೊತೆಗೆ ಯಕ್ಷಗಾನ ಶಿಕ್ಷಕರೊಡನೆ ಸಂವಾದವನ್ನು ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಲಹಾ ಸಮಿತಿಯ ಸದಸ್ಯರಾದ ಸರಪಾಡಿ ಅಶೋಕ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಮಂಬೈ ಘಟಕದ ಸಂಚಾಲಕ ಕರ್ನೂರು ಮೋಹನ್ ರೈ, ಯಕ್ಷಗಾನ ಸಂಘಟಕ ರಮೇಶ್ ಮಂಜೇಶ್ವರ, ಪತ್ರಕರ್ತ ನಗರ ರಾಘವೇಂದ್ರ ಸೇರಿದಂತೆ 36 ಯಕ್ಷಗಾನ ಶಿಕ್ಷಕರು ಉಪಸ್ಥಿತರಿದ್ದರು.
ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ ಪ್ರಸಕ್ತ ಶೈಕ್ಷಣಿಕ ಸಾಲಿನ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಕಾರ್ಯವೈಖರಿಗಳನ್ನು ತಿಳಿಸುವುದರ ಜೊತೆಗೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ವಂದಿಸಿದರು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಂಯೋಜಕ ದೀವಿತ್ ಎಸ್.ಕೆ. ಪೆರಾಡಿ ಕಾರ್ಯಕ್ರಮ ನಿರ್ವಹಿಸಿದರು.