ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಇವರು ಶೈಕ್ಷಣಿಕ ಹಾಗೂ ಸಾಮಾಜಿಕ ವಲಯದಲ್ಲಿ ಜಿ. ಆರ್. ಎಂದೇ ಪ್ರಸಿದ್ದರು. ವಂಶದಿಂದ ಇವರ ಮೂಲ ಹೆಸರು ಗಂಪಲಹಳ್ಳಿ ರಾಮಕೃಷ್ಣ. ಸುಬ್ರಹ್ಮಣ್ಯಂ ಮತ್ತು ನರಸಮ್ಮ ದಂಪತಿಗಳ ಪುತ್ರನಾಗಿ 17 ಜೂನ್ 1939 ರಂದು ಮಾಗಡಿಯ ಸಮೀಪವಿರುವ ಕೆಂಪಸಾಗರದಲ್ಲಿ ಜನಿಸಿದರು.
ಇವರು ತಮ್ಮಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಕೆಂಪ ಸಾಗರ ಮತ್ತು ಮಾಗಡಿಯಲ್ಲಿ ಮುಗಿಸಿದರು. ಸಂಸಾರದಲ್ಲಿ ಆರ್ಥಿಕ ಮಿತಿ ಇದ್ದ ಕಾರಣ ಮೈಸೂರಿಗೆ ಹೋಗಿ ವಾರಾನ್ನ ಮಾಡಿಕೊಂಡು ಕಷ್ಟಪಟ್ಟು ಓದಿ, ಸಂಸ್ಕೃತ, ವೇದ, ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿ ಪಾಂಡಿತ್ಯವನ್ನು ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಸಂಸ್ಕೃತದಲ್ಲಿ ಎಂ. ಎ., ಪುಣೆ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಎಂ. ಎ. ಪದವಿಯನ್ನು ಪಡೆದುಕೊಂಡ ನಂತರ ಮೈಸೂರು ವಿಶ್ವ ವಿದ್ಯಾಲಯದಿಂದ “Origin and growth of rhuta in vedic literature” ಮಹಾಪ್ರಬಂಧಕ್ಕೆ ಪಿ. ಎಚ್. ಡಿ. ಪದವಿ ಮತ್ತು ವೇಲ್ಸ್ ವಿಶ್ವವಿದ್ಯಾಲಯದಿಂದ “ಕೋಲ್ ರಿಜ್ ಅಂಡ್ ಮಿಸ್ಟಿಸಿಸಂ’ ಎಂಬ ಮಹಾ ಪ್ರಬಂಧಕ್ಕೆ ಮತ್ತೊಂದು ಉನ್ನತ ಡಿಪ್ಲೋಮಾ ಪದವಿಯನ್ನು ಪಡೆದುಕೊಂಡರು.
ಜಿ. ರಾಮಕೃಷ್ಣ ಇವರು ಅಕೌಂಟೆಂಟ್ ಜನರಲ್ ಇವರ ಕಚೇರಿಯಲ್ಲಿ ಕೆಲಸಕ್ಕೆ ಸೇರುವ ಮೂಲಕ ವೃತ್ತಿ ಜೀವನಕ್ಕೆ ಕಾಲಿರಿಸಿದರು. ಅಲ್ಲಿಯ ಒಂದು ವರ್ಷದ ಸೇವೆಯ ನಂತರ ಮೈಸೂರು ವಿಶ್ವವಿದ್ಯಾಲಯದ ಯು. ಜಿ. ಸಿ. ರಿಸರ್ಚ್ ಫೆಲೋ ಆಗಿ ಆಯ್ಕೆಯಾದರು. ಸಂಶೋಧನಾ ಸಹಾಯಕರಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿಯೂ ಕೆಲಕಾಲ ಕೆಲಸ ಮಾಡಿದ ಹೆಗ್ಗಳಿಕೆ ಇವರದು. ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಹಂಪಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಮತ್ತು
ವಿಶ್ವದಾದ್ಯಂತ ಸಂಚರಿಸಿ ಅಪಾರ ಅನುಭವ ಪಡೆದವರು.
‘ಮಾಲೆ ಪ್ರಕಾಶನ’ ಮತ್ತು ‘ಅಚಲ’ ಮಾಸಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯನಿರ್ವಹಿಸಿದ ನಿಪುಣರಿವರು.
‘ಮುನ್ನೋಟ’, ‘ವೈಚಾರಿಕ ಜಾಗೃತಿ’, ‘ದೇವಿ ಪ್ರಸಾದ್’, ‘ಲೋಕಾಯತ ದರ್ಶನ’, ‘ವಾನರನಿಂದ ಮಾನವ’, ‘ಭಾರತೀಯ ವಿಜ್ಞಾನದ ಹಾದಿ’ ಇವೆಲ್ಲ ಡಾ. ರಾಮಕೃಷ್ಣರ ವೈಚಾರಿಕ ಸಾಹಿತ್ಯ ಕೃತಿಗಳು. ‘ಭಗತ್ ಸಿಂಗ್’, ‘ಭೂಪೇಶಗುಪ್ತ’, ‘ಚೆಗೆವಾರ’, ‘ಲೆನಿನ್’ ಮುಂತಾದವು ವ್ಯಕ್ತಿ ಚಿತ್ರಗಳು.
ಹಲವಾರು ಕೃತಿಗಳ ಸಂಪಾದನೆಯನ್ನು ಮಾಡಿದ್ದು ಮಾತ್ರವಲ್ಲದೆ ಪತ್ರಿಕೆಯ ಸಂಪಾದಕತ್ವವನ್ನೂ ನಿರ್ವಹಿಸಿದ್ದಾರೆ. ಭಾರತೀಯ ಮೂಲತತ್ವಗಳ ಮತ್ತು ಮಾಕ್ಸ್ ತತ್ತ್ವಗಳ ಬಗ್ಗೆ ಬಹಳ ಆಸಕ್ತಿಯನ್ನು ಹೊಂದಿದ ಇವರು ಆ ಬಗ್ಗೆ ಕನ್ನಡಕ್ಕೆ ಅನೇಕ ಅನುವಾದಗಳನ್ನು ಮಾಡಿದ್ದಾರೆ.
ಶಿಕ್ಷಣ ತಜ್ಞರಾಗಿ, ಸಂಸ್ಕೃತಿ ಚಿಂತಕರಾಗಿ, ಒಬ್ಬ ಶ್ರೇಷ್ಠ ವಿದ್ವಾಂಸರಾಗಿ ಡಾ. ಜಿ. ರಾಮಕೃಷ್ಣ ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಇವರ ‘ಮುನ್ನೋಟ’, ‘ಆಯತನ’, ‘ಭಾರತೀಯ ವಿಜ್ಞಾನದ ಹಾದಿ’ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಮತ್ತು ಜಿ. ಮಾದೇಗೌಡ ಸಮಾಜ ಪ್ರಶಸ್ತಿ ಇವೆಲ್ಲ ಇವರ ಸಾಹಿತ್ಯ ಸೇವೆಗೆ ಸಂದ ಗೌರವ.
ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.
-ಅಕ್ಷರೀ