ಬೆಲ್ಜಿಯಂ : ಬೆಲ್ಜಿಯಂ ಕಲಾ ವೇದಿಕೆ ವತಿಯಿಂದ ದಿನಾಂಕ 13 ಜೂನ್ 2025 ಎರಡನೇ ಶುಕ್ರವಾರದಂದು ಸಾಹಿತ್ಯ ಸಂಜೆ ಪ್ರಸಾರದ ಶುಭಾರಂಭವಾಗಿದೆ. ಮೊದಲಿಗೆ ಕನ್ನಡದ ಜ್ಞಾನಶಿಖರ ಡಾ. ಡಿ.ವಿ.ಜಿ. ಯವರ ಜೀವನ, ಸಾಹಿತ್ಯ ಮತ್ತು ಸಾಧನೆಗಳ ಅವಲೋಕನ ಹಾಗೂ ವಿಚಾರ ವಿನಿಮಯ ನಡೆಯಿತು. ಈ ಕಾರ್ಯದಲ್ಲಿ ಬೆಂಗಳೂರಿನ ನಿವಾಸಿ ಡಾ. ಎ. ಭಾನು ಇವರು ಬೆಲ್ಜಿಯಂ ಕಲಾ ವೇದಿಕೆಯೊಂದಿಗೆ ಸಹಕರಿಸುತ್ತಿದ್ದಾರೆ.
ಬೆಲ್ಜಿಯಂ ಕಲಾ ವೇದಿಕೆಯ ಆಶ್ರಯದಲ್ಲಿ ನಡೆಸಲಾಗುತ್ತಿರುವ ಹಲವಾರು ಕನ್ನಡ ಪರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯೂರೋಪಿನ ನೂರಾರು ಕನ್ನಡಿಗರು ಭಾಗವಹಿಸಿ ತಮ್ಮ ತಾಯ್ನಾಡಿನ ಬಗ್ಗೆ ಪ್ರೀತಿ ಮೆರೆಯುತ್ತಿರುವುದು ಹರ್ಷದಾಯಕ ಸಂಗತಿ. ಸಂಕ್ರಾಂತಿ, ಯುಗಾದಿ, ಗಣೇಶೋತ್ಸವ, ನವರಾತ್ರಿ, ದೀಪಾವಳಿ, ಕನ್ನಡ ರಾಜ್ಯೋತ್ಸವ ಮುಂತಾದ ಭಾರತದ ಪ್ರಮುಖ ಆಚರಣೆಗಳನ್ನು ದೂರದ ಬೆಲ್ಜಿಯಂ ದೇಶದಲ್ಲಿ ಆಯೋಜಿಸಿ, ಯಶಸ್ವಿಯಾಗಿ ನಡೆಸಿ ಅಲ್ಲಿನ ಹೆಮ್ಮೆಯ ಕನ್ನಡಿಗರ ಭಾಷಾಪ್ರೇಮದ ಅಭಿವ್ಯಕ್ತಿಗೆ ಅನುವು ಮಾಡಿಕೊಡುವ ಬೆ.ಕ.ವೇ ಪ್ರಯತ್ನ ಶ್ಲಾಘನೀಯ.
ಜರ್ಮನಿಯಲ್ಲಿರುವ ಹವ್ಯಾಸಿ ಯಕ್ಷಗಾನ ತಂಡದವರನ್ನು ಬೆಲ್ಜಿಯಂಗೆ ಕರೆಸಿ ಯಕ್ಷಗಾನ ಪ್ರಸಂಗದ ಪ್ರದರ್ಶನ ಮಾಡಿದ್ದು ಬೆ.ಕ.ವೇದಿಕೆಯ ಹೆಗ್ಗಳಿಕೆಗಳಲ್ಲೊಂದಷ್ಟೆ. ಜೂನ್ ತಿಂಗಳಿನಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ಮರಣೆ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ನೆದರ್ಲಾಂಡ್ಸ್ ಇತರೆ ದೇಶಗಳ ಕನ್ನಡಿಗರು ಪಾಲ್ಗೊಂಡು ಎಸ್.ಪಿ.ಬಿ.ಯವರಿಗೆ ಗಾನನಮನಗಳನ್ನು ಸಲ್ಲಿಸುವರು.
ಯೂರೋಪಿನಲ್ಲಿ ಕನ್ನಡ ಸಾಹಿತ್ಯ ಪರಿಚಯ ಹಾಗೂ ಪ್ರಚಾರ ಮಾಡುವ ಹೊಸ ಪ್ರಯತ್ನವನ್ನು ಬೆಲ್ಲಿಯಂ ಕಲಾ ವೇದಿಕೆ ಪ್ರಾರಂಭಿಸಿದೆ. ಪ್ರತಿ ತಿಂಗಳಿನ 2ನೇ ಮತ್ತು ನಾಲ್ಕನೆಯ ಶುಕ್ರವಾರ ಸಂಜೆ 6.30ರಿಂದ 7.30ರವರೆಗೆ ಅಂತರ್ಜಾಲದ ಮುಖಾಂತರ ಸಾಹಿತ್ಯ ಬಳಗವನ್ನು ಒಂದಾಗಿಸಿ ‘ಸಿರಿಗನ್ನಡ ಸಾಧಕರು’ ಎಂಬ ಸರಣಿ ಉಪನ್ಯಾಸ ಮಾಲಿಕೆಯ ಮೂಲಕ ಕನ್ನಡ ದಿಗ್ಗಜರ ಸಾಹಿತ್ಯ, ವ್ಯಕ್ತಿಚಿತ್ರಣ, ಜೀವನ, ಸಾಧನೆಗಳನ್ನು ತಿಳಿಸಿಕೊಡುವ ಅಧ್ಯಯನ ಕೂಟವನ್ನು ಏರ್ಪಡಿಸಲಾಗಿದೆ. ಬೆಲ್ಲಿಯಂ ಕಲಾ ವೇದಿಕೆಯು ಇನ್ನೂ ಹೆಚ್ಚು ಉತ್ತಮ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ, ಯೂರೋಪಿನ ಕನ್ನಡ ಮನಸ್ಸುಗಳನ್ನು ಬೆಸೆಯುವ ಪ್ರಯತ್ನ ಯಶ ಕಾಣಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಧ್ವನಿ ವಿಜೃಂಭಿಸಲಿ ಎಂದು ಶುಭಕೋರೋಣ.