ಕಾಸರಗೋಡು : ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ನೇತೃತ್ವದಲ್ಲಿ ಕನ್ನಡದ ನಡಿಗೆ-ಶಾಲೆಯ ಕಡೆಗೆ ಹಾಗೂ ಮನೆ ಮನೆ-ಕನ್ನಡ ಜಾಗ್ರತಿ ಅಭಿಯಾನ ಕಾರ್ಯಕ್ರಮವು ದಿನಾಂಕ 20 ಜೂನ್ 2025ರಂದು ಮಂಗಳೂರಿನ ಸಂತ ರೀತಾ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಗೌರವ ಅಧ್ಯಕ್ಷರಾದ ಡಾ. ರವೀಂದ್ರ ಜೆಪ್ಪು “ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ ಕನ್ನಡ ಪ್ರಜ್ಞೆ ಮೂಡಿಸುವುದೇ ಕನ್ನಡ ಭವನದ ಉದ್ದೇಶ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಈ ಕಾರ್ಯಕ್ರಮ ಕನ್ನಡ ನಡಿಗೆ-ಶಾಲೆಯ ಕಡೆಗೆ ಹಾಗೂ ಮನೆ ಮನೆ-ಕನ್ನಡ ಜಾಗ್ರತಿ ಅಭಿಯಾನಕ್ಕೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಬೇಕಿದೆ” ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಡೋರಿನ್ ತಾವ್ರೊ ಈ ಕಾರ್ಯಕ್ರಮವನ್ನು ಕನ್ನಡಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ “ಇಂತಹ ಅತ್ಯುತ್ತಮ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲು ಕಾರಣಕರ್ತರಾದ ನಮ್ಮ ಶಾಲಾ ಶಿಕ್ಷಕಿ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಆಗಿರುವ ಶ್ರೀಮತಿ ರೇಖಾ ಸುದೇಶ್ ರಾವ್ ಇವರು ನಮ್ಮ ಶಾಲಾ ಶಿಕ್ಷಕಿ ಆಗಿರುವುದು ನಮಗೆ ಹೆಮ್ಮೆಯ ವಿಚಾರ. ಬಹು ಮುಖ ಪ್ರತಿಭೆಯಾಗಿರುವ ಇವರು ವಿದ್ಯಾರ್ಥಿಗಳ ಬಗೆಗಿನ ಅವರ ಕಾಳಜಿ, ಕನ್ನಡ ಪರ ಕಾರ್ಯಕ್ರಮಗಳ ಬಗೆಗಿನ ಆಸಕ್ತಿ, ಶ್ಲಾಘನೀಯ” ಎಂದು ಹೇಳಿದರು.
ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಅತಿಥಿ ಅಭ್ಯಾಗತರನ್ನು ಕನ್ನಡ ಶಾಲು ನೀಡಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷರಾದ ಉಮೇಶ್ ರಾವ್ ಕುಂಬ್ಳೆ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ರೂಪು ರೇಖೆ ಪ್ರಾಸ್ತಾವಿಕದಲ್ಲಿ ವಿವರಿಸಿದರು. ಶ್ರೀಮತಿ ಕೃಷ್ಣವೇಣಿ ಉಪಾಧ್ಯಕ್ಷರು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲೆ ಇವರು ವಿದ್ಯಾರ್ಥಿಗಳಿಗೆ ಶುಭಾಶಂಸನೆ ನೀಡಿದರು. ಸುಮಾರು 20 ವಿದ್ಯಾರ್ಥಿಗಳು ಚುಟುಕು, ಕವಿತೆ ಗಾಯನ ಆಶು ಭಾಷಣ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅಭಿನಂದನಾ ಪತ್ರ, ಪ್ರಮಾಣಪತ್ರ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮುಖ್ಯೋಪಾಧ್ಯಾಯಿನಿಯವರನ್ನು ಶಾಲು ಹೊದೆಸಿ, ಹೂ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ರೂಪಿಕಾ ಕಾರ್ಯಕ್ರಮದ ನಿರೂಪಣೆಗೈದರು. ಶ್ರೀಮತಿ ಜಾನೆಟ್ ಮಸ್ಕರಿನಸ್ ವಂದನಾರ್ಪಣೆಗೈದರು. ಸಂತ ರೀತಾ ಶಾಲೆಯ ಅಧ್ಯಾಪಕ, ವಿದ್ಯಾರ್ಥಿಗಳು ಅಪಾರ ಹರ್ಷ ವ್ಯಕ್ತಪಡಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.