ರಥ ಶಿಲ್ಪಿ ಪರಮೇಶ್ವರಾಚಾರ್ಯ ಇವರೊಬ್ಬ ಶಾಸ್ತ್ರೀಯ ರೀತಿಯ ಅಪರೂಪದ ಕಲಾವಿದರು. ಶಿಲ್ಪಕಲೆಗೆ ಅನನ್ಯವಾದ ಕೊಡುಗೆಯನ್ನು ನೀಡಿದವರು. ಮಾನಾಚಾರ್ಯ ಮತ್ತು ವೀರಮ್ಮ ದಂಪತಿಗಳ ಪುತ್ರರಾದ ಇವರು ಹೊಳಲ್ಕೆರೆ ತಾಲೂಕಿನ ನೂಲೇನೂರಿನಲ್ಲಿ 24 ಜೂನ್ 1924ರಂದು ಜನಿಸಿದರು. ತಂದೆ ತಾಯಿ ಇಬ್ಬರದ್ದೂ ಶಿಲ್ಪಕಲೆಯನ್ನು ಶಾಸ್ತ್ರೀಯವಾಗಿ ಕರಗತಗೊಳಿಸಿಕೊಂಡ ಮನೆತನ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಇವರು ಸೋದರ ಮಾವಂದಿರಾದ ಕೆಂಚವೀರಾಚಾರ್ಯ ಮತ್ತು ಕಾಳಾಚಾರ್ಯರ ಪೋಷಣೆಯಲ್ಲಿ ಬೆಳೆದರು. ಬಾಲ್ಯದಲ್ಲಿ ರಥಶಿಲ್ಪವನ್ನು, ಶಿಲಾ ಮತ್ತು ಲೋಹ ಶಿಲ್ಪದ ವಿದ್ಯೆಯನ್ನು ಮಾವ ಕಾಳಾಚಾರ್ಯರ ಮಾರ್ಗದರ್ಶನದಲ್ಲಿ ಮತ್ತು ಶಿಲೆ, ಚಿನ್ನ, ಬೆಳ್ಳಿ ಹಾಗೂ ಎರಕದ ಕೆಲಸವನ್ನು ಮಾವ ಕೆಂಚವೀರಾಚಾರ್ಯರಿಂದ ಪಡೆದರು. ಪರಮೇಶ್ವರಾಚಾರ್ಯರ ವಿದ್ಯಾಭ್ಯಾಸ ಲೋಯರ್ ಸೆಕೆಂಡರಿಗೇ ನಿಂತಿತ್ತು. ಬಾಲ್ಯದಲ್ಲಿ ಮರಗೆಲಸದೊಂದಿಗೆ ಬದುಕನ್ನು ಆರಂಭಿಸಿದ ಇವರು ವಂಶ ಪಾರಂಪರ್ಯವಾಗಿ ಬಂದ ಶಿಲ್ಪಶಾಸ್ತ್ರ ಮತ್ತು ಶಿಲ್ಪಶಾಸ್ತ್ರವನ್ನು ಕುರಿತು ಗುರು ಮುಖೇನ ಮಾಡಿದ ಅಧ್ಯಯನದ ಪಾಂಡಿತ್ಯದಿಂದ ಕಂಚು, ಶಿಲೆ, ಪಂಚಲೋಹ, ಚಿನ್ನ, ಬೆಳ್ಳಿ, ತಾಮ್ರಗಳಲ್ಲಿಯೂ ಶಿಲ್ಪ ರಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರು. ರೇಖಾ ಚಿತ್ರಗಳ ರಚನೆ ಮತ್ತು ವಿಗ್ರಹದ ಕೆತ್ತನೆಯ ಕೆಲಸ ಬಾಲ್ಯದಿಂದಲೇ ಕರಗತವಾಗಿತ್ತು. ಸೋದರತ್ತೆಯ ಮಗ ಮೌನಾಚಾರ್ಯರೊಡನೆ ಸೇರಿ ಸೋದರ ಮಾವ ಕಾಳಾಚಾರ್ಯರ ಮಾರ್ಗದರ್ಶನದಲ್ಲಿ ಹೊಸದುರ್ಗದ ಬಳಿಯ ನೀಲಗುಂದದ ಭೈರವೇಶ್ವರ ರಥ ಮೊದಲು ರಚಿಸಿದ್ದು. ಇದು ಸುಮಾರು 25 ಅಡಿ ಎತ್ತರದ ರಥ. ಕಲಾತ್ಮಕವಾಗಿ ನಿರ್ಮಾಣವಾಗಿದ್ದ ಈ ರಥ ಎಲ್ಲರಿಂದ ಮೆಚ್ಚುಗೆಯನ್ನು ಪಡೆಯಿತು. ಇದರಿಂದ ಸ್ಪೂರ್ತಿಗೊಂಡ ಪರಮೇಶ್ವರಾಚಾರ್ಯರು ಅಜ್ಜಹಳ್ಳಿಯ ಶಿಲ್ಪಶಾಸ್ತ್ರ ಪ್ರವೀಣರಾದ ಮತ್ತು ಮೈಸೂರಿನ ರಾಜಾಶ್ರಯಯದಲ್ಲಿ ಶಿಲ್ಪಕಲೆಯನ್ನು ಬೆಳೆಸಿದ ನಾಗೇಂದ್ರಾಚಾರ್ಯರಲ್ಲಿ ಶಿಲ್ಪ ರಚನೆಯ ಉನ್ನತಮಟ್ಟದ ಶಿಕ್ಷಣವನ್ನು ಪಡೆದರು. ಮೈಸೂರು ಚಾಮುಂಡೇಶ್ವರಿಯ ಅಪೂರ್ವವಾದ ರಥವನ್ನು ರಚಿಸಿ ಪೂರ್ಣಗೊಳಿಸಿದವರು ನಾಗೇಂದ್ರಾಚಾರ್ಯರೇ. ಇದೇ ಸಂದರ್ಭದಲ್ಲಿ ಕುಸುರಿ ಕೆಲಸದಲ್ಲಿಯೂ ಪ್ರಾವೀಣ್ಯತೆಯನ್ನು ಪಡೆದರು. ಇವರಿಗೆ ಷಟ್ಪದಿಯಲ್ಲಿ ಪದ್ಯರಚನೆ ಮಾಡುವ ಹವ್ಯಾಸವಿತ್ತು. ನೂರಾರು ಪದ್ಯಗಳನ್ನು ತಾವೇ ಸ್ವತಃ ರಚನೆ ಮಾಡಿದ್ದಾರೆ. ಇವರ ಹಿರಿಯಮಗ ಶ್ರೀಕಂಠ ಆಚಾರ್ಯ ಒಬ್ಬ ಪರಿಣೀತ ಹಾಗೂ ಸಮರ್ಥ್ಯ ರಥಶಿಲ್ಪಿ. ತಂದೆಗೆ ಬೆಂಬಲವಾಗಿ ನಿಂತು ಕುಲಕಸುಬನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಮಾಡಿದ್ದಾರೆ. ಪರಮೇಶ್ವರಾಚಾರ್ಯರು ತಮ್ಮ ತಮ್ಮ ಅನೇಕ ಶಿಷ್ಯರಿಗೆ ನಿರ್ವಂಚನೆಯಿಂದ ಶಿಲ್ಪ ವಿದ್ಯೆಯನ್ನು ದಾನ ಮಾಡಿದ್ದಾರೆ.
ಪರಮೇಶ್ವರಾಚಾರ್ಯರ ಮಹತ್ವದ ರಥ ರಚನೆಗಳಲ್ಲಿ ಮೈಸೂರಿನ ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟರಮಣ ಸ್ವಾಮಿ ರಥ ಪ್ರಮುಖವಾದದ್ದು. ಸುಮಾರು ಇಪ್ಪತ್ತೆರಡುವರೆ ಅಡಿ ಎತ್ತರದ ಈ ರಥ ಸುತ್ತಲೂ ಕುಸುರಿ ಕೆತ್ತನೆಯಿಂದ ಜೀವ ತುಂಬಿದ ಮೂರ್ತಿಗಳಿಂದ ಕೂಡಿದೆ.
ರಥಶಿಲ್ಪ ಮಾತ್ರವಲ್ಲದೆ ಲೋಹ ಶಿಲ್ಪ ಮತ್ತು ಶಿಲಾಶೀಲದಲ್ಲಿಯೂ ಇವರು ಮಾಡಿದ ರಚನೆ ಅನನ್ಯವಾದುದು.
ಲೋಹದಲ್ಲಿ ದೇವರಹಳ್ಳಿ ರಂಗನಾಥ ಸ್ವಾಮಿಗೆ ಬೆಳ್ಳಿಯ ಪಲ್ಲಕ್ಕಿ, ಚಿತ್ರದುರ್ಗ ಜಿಲ್ಲೆಗೆ ಬೆಳ್ಳಿಯಲ್ಲಿ ವೀರಭದ್ರ ಸ್ವಾಮಿ, ತರೀಕೆರೆಗೆ ಪಂಚಲೋಹದ ಬನಶಂಕರಿ, ಮಳವಳ್ಳಿ ಆಂಜನೇಯ ಸ್ವಾಮಿಗೆ ಪ್ರಭಾವಳಿ ಹೀಗೆ ಬಹಳ ಅದ್ಭುತವಾದ ರಚನೆಯನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರರು. ಶಿಲೆಯಲ್ಲಿಯೂ ಅಪ್ರತಿಮ ಕಲಾ ಪ್ರೌಢಿಮೆ ಮೆರೆದವರು ಪರಮೇಶ್ವರಾಚಾರ್ಯರು. ಚಳ್ಳೆಕೆರೆಗೆ ಕುಮಾರಸ್ವಾಮಿ ವಿನಾಯಕ, ಶಿವಮೊಗ್ಗಕ್ಕೆ ಅಂಬಾಭವಾನಿ, ಬಳ್ಳಾರಿಗೆ ವೇಣುಗೋಪಾಲ, ಹೊಲಲೂರಿಗೆ ವೀರಭದ್ರ ಸ್ವಾಮಿ, ಚಿರಡೋಣಿಗೆ ಮಹಾಕಾಳಿಕಾಂಬಾ, ಅರಸೀಕೆರೆಗೆ ಅಂಬಾ ಭವಾನಿ ಮೂರ್ತಿಗಳನ್ನು ಶಾಸ್ತ್ರೀಯವಾಗಿ ನಿರ್ಮಾಣ ಮಾಡಿದ ಖ್ಯಾತಿ ಇವರದು.
ಸಿದ್ಧಾರೂಢ ಸ್ವಾಮಿಗಳು, ಹರ್ಡೇಕರ್ ಮಂಜಪ್ಪ, ಮಹಾತ್ಮ ಗಾಂಧಿ, ಮರಳು ಸಿದ್ದೇಶ್ವರ ಸ್ವಾಮಿ, ಮಾತ್ರವಲ್ಲದೆ ದಾವಣಗೆರೆಗೆ ಬಾಬಾ ಅಂಬೇಡ್ಕರರ ವಿಗ್ರಹ, ಆರ್. ಮರುಳಪ್ಪ ಮತ್ತು ಗಾಂಜಿ ವೀರಪ್ಪನವರ ಆಳೆತ್ತರದ ಎರಡು ಕಂಚಿನ ಮೂರ್ತಿಗಳು ಹೀಗೆ ವ್ಯಕ್ತಿ ಶಿಲ್ಪ ರಚನೆಯನ್ನು ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಇವು ಪರಮೇಶ್ವರಾಚಾರ್ಯರ ಮಹತ್ವದ ಕೃತಿಗಳೂ ಹೌದು.
ರಥ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಪಳಗಿಸಿಕೊಂಡ ಇವರು ಯಗಚಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ರಥ, ಬೆಂಡಿಗನವಿಲೆ ಚೆನ್ನಕೇಶವ ಸ್ವಾಮಿ ರಥ, ಹಂಪೆ ವಿರೂಪಾಕ್ಷ ಸ್ವಾಮಿ ರಥ, ನಾಯಕರ ಹಟ್ಟಿಯ ತಿಪ್ಪೆ ರುದ್ರಸ್ವಾಮಿ ರಥ ಮುಂತಾದವುಗಳು ಕಲಾತ್ಮಕವಾಗಿದ್ದು ಅವರ ವೈಶಿಷ್ಟ್ಯ ಪೂರ್ಣ ನಿರ್ಮಾಣವಾಗಿದೆ.
ಇವರ ಸಾಧನೆಗೆ ಕಲಾ ಪ್ರೌಢಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. 1995ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರಕಾರವು ಶಿಲ್ಪ ಕಲೆಗಾಗಿ ನೀಡುವ ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿಯನ್ನು 2000ನೇ ಇಸವಿಯಲ್ಲಿ ಪಡೆದಿದ್ದಾರೆ, ಮಾತ್ರವಲ್ಲದೆ ಹಲವಾರು ಪುರಸ್ಕಾರಗಳು ಸನ್ಮಾನಗಳು ಇವರಿಗೆ ಸಂದಿವೆ.
ರಥಶಿಲ್ಪಿ ಪರಮೇಶ್ವರಚಾರ್ಯರ ಜನ್ಮದಿನವಾದ ಇಂದು ಅವರ ಕಲಾನೈಪುಣ್ಯತೆಯನ್ನು ಸ್ಮರಿಸೋಣ.
-ಅಕ್ಷರೀ