ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಸಂಗೀತ ದಿನಾಚರಣೆಯನ್ನು ದಿನಾಂಕ 20 ಜೂನ್ 2025 ರಂದು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಆಚರಿಸಲಾಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಕ್ಸ್ಪರ್ಟ್ ಸಮೂಹ ಸಂಸ್ಥೆಗಳ ಐ. ಟಿ. ನಿರ್ದೇಶಕರಾಗಿರುವ ಅಂಕುಶ್ ಎನ್. ನಾಯಕ್ ಮಾತನಾಡಿ “ಶಕ್ತಿ ಶಾಲೆಯಲ್ಲಿ ಸಂಗೀತ ದಿನಾಚರಣೆಯನ್ನು ಆಚರಿಸುತ್ತಿರುವುದಕ್ಕೆ ಅಭಿನಂದನೆಯನ್ನು ತಿಳಿಸುತ್ತೇನೆ. ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ನಾವು ನಮ್ಮ ಹವ್ಯಾಸಗಳಿಗೆ ಮೀಸಲಿಡಬೇಕು, ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯ ಸಂಗೀತ ಕಲಿಯಬೇಕು, ಸಂಗೀತವು ನಮ್ಮಲ್ಲಿ ಕ್ರಿಯಾಶೀಲತೆಯನ್ನು ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಾವು ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತ ಶೈಲಿಯನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ಅರಿತು ಗೌರವಿಸಬೇಕು. ಭಾರತದ ಅನೇಕ ಯುವ ಸಂಗೀತಕಾರರು ಇಂದು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ನಮ್ಮ ದೇಶದ ಸಂಗೀತಕ್ಕೆ ಜಗತ್ತಿನಲ್ಲಿ ಮನ್ನಣೆಯಿದೆ. ಜಗತ್ತಿನ ಬೇರೆ ಬೇರೆ ದೇಶದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಅಲಿಸುವ ಜನರು ದೊಡ್ಡ ಪ್ರಮಾಣದಲ್ಲಿ ಸಂಗೀತ ಕಚೇರಿಯನ್ನು ಆಯೋಜಿಸಿದಾಗ ಸೇರುತ್ತಾರೆ. ಆದರೆ ಇಂದು ಭಾರತದಲ್ಲಿ ಆ ಸಂಖ್ಯೆ ಕಡಿಮೆಯಾಗುತ್ತಿರುವುದು ಸ್ವಲ್ಪ ನೋವನ್ನು ಕೊಡುತ್ತಿದೆ. ನಾವು ನಮ್ಮ ಶಾಲಾ ಹಂತದಲ್ಲಿ ಸಮಯವನ್ನು ಹೊಂದಾಣಿಕೆ ಮಾಡಿ ಸಂಗೀತಕ್ಕೆ ಒತ್ತು ಕೊಡಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವೇದಿಕೆಯಲ್ಲಿದ್ದ ಗಣ್ಯರು ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಸಂಗೀತ ದಿನಾಚರಣೆಯ ಪ್ರಯುಕ್ತ ಶಕ್ತಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ವಿವಿಧ ಸಂಗೀತ ವಾದ್ಯಗಳನ್ನೊಳಗೊಂಡ ಕಾರ್ಯಕ್ರಮವು ನಡೆಯಿತು.
ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಕೆ. ಸಿ. ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ ಶ್ರೀ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಶ್ರೀ ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶಕ್ತಿ ವಸತಿ ಶಾಲೆಯ ಶಿಕ್ಷಕಿ ಶ್ರೀಮತಿ ಅರುಣೀತ ಕಾರ್ಯಕ್ರಮವನ್ನು ನಿರೂಪಿಸಿದರು.