ಹೈದರಾಬಾದ್ : ಹಿರಿಯ ಸಾಹಿತಿ, ಕನ್ನಡ ನಾಡಿನ ಹೊರಗಿನ ಹೈದರಾಬಾದಿನಲ್ಲಿ ಸಕ್ರಿಯ ಕನ್ನಡ ರಾಯಭಾರಿಯಾಗಿ ಮತ್ತು ಬಹುಭಾಷಾ ಸಂಸ್ಕೃತಿಗಳ ಸಕ್ರಿಯ ಸೇತುವೆಯಾಗಿ ಮಹತ್ವದ ಕಾರ್ಯಾ ಮಾಡುತ್ತಾ ಬಂದಿದ್ದ ಪ್ರಭಾ ಮಟಮಾರಿ ದಿನಾಂಕ 24 ಜೂನ್ 2025ರಂದು ನಿಧನರಾಗಿದ್ದಾರೆ. ಇವರು ಮಹಾನ್ ಸಾಹಿತಿ ಶ್ರೀನಿವಾಸ ವೈದ್ಯರ ತಂಗಿ.
ಪ್ರಭಾ ಅವರು 1943ರ ಫೆಬ್ರವರಿ 6ರಂದು ನವಲಗುಂದದಲ್ಲಿ ಜನಿಸಿದರು. ತಂದೆ ಧಾರವಾಡದ ಸುಪ್ರಸಿದ್ಧ ವಕೀಲರಾದ ಬಿ.ಜಿ. ವೈದ್ಯರು. ಮನೆಯ ಸುಸಂಪನ್ನ ಮತ್ತು ಸಾಹಿತ್ಯಿಕ ವಾತಾವರಣ ಅವರ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿತು. ತಂದೆ ಬಿ.ಜಿ.ವೈದ್ಯರು “ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ” ಸಕ್ರಿಯರಾಗಿದ್ದರು. ಹೀಗಾಗಿ ಹೆಸರಾಂತ ಸಾಹಿತಿಗಳೆಲ್ಲ ಮನೆಗೆ ಬರುತ್ತಿದ್ದರು. ಬೇಂದ್ರೆ, ಗೋಕಾಕ, ಮುಗಳಿ, ಬೆಟಗೇರಿ ಕೃಷ್ಣಶರ್ಮಾ ಮುಂತಾದವರೆಲ್ಲ ತಂದೆಯವರ ಅಪ್ತ ಸ್ನೇಹಿತರು.
ಪ್ರಭಾ ಮಟಮಾರಿ ಅವರ ಅಣ್ಣ ಶ್ರೀನಿವಾಸ ವೈದ್ಯರಿಗೆ ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಗಿ ಇದ್ದ ಕಾರಣ ಶ್ರೀಮತಿ ಪ್ರಭಾ ಅವರಿಗೆ ಪುಸ್ತಕ ಓದುವ ಗೀಳು ಜೊತೆಗೂಡಿತು. “ಕರ್ನಾಟಕ ಏಕೀಕರಣ ” ಚಳವಳಿಕಾರ ಶ್ರೀ ರಾಮರಾವ್ ನರಗುಂದಕರ ಇವರ ತಾಯಿಯ ತಂದೆ. ದ.ರಾ.ಬೇಂದ್ರೆ ಅವರ ಸ್ನೇಹಿತರಾದರೆ, ಆಲೂರ ವೆಂಕಟರಾಯರು ಅವರ ಗುರುಗಳು. ಪ್ರಭಾ ಅವರ ತಾಯಿ ಕೂಡ ಓದುವ ಗೀಳಿದ್ದವರು. ಹೀಗಾಗಿ ಪ್ರಭಾ ಅವರ ಬರಹಗಳು ಹಲವಾರು ಮಾಸಪತ್ರಿಕೆ, ಮತ್ತು ವಾರಪತ್ರಿಕೆಗಳಲ್ಲಿ ಮೂಡುತ್ತಿತ್ತು. ಜೊತೆಗೆ ತಾವು ಓದಿದ ಲೇಖನಗಳ ಕುರಿತು ತಮ್ಮದೇ ಆದ ಅಭಿಪ್ರಾಯ ಬರೆದಿಡುವದೂ ಇವರ ನಿತ್ಯದ ರೂಡಿಯಾಗಿತ್ತು. ಪ್ರಭಾ ಮಟಮಾರಿ ಅವರ ಮೇಲೆ ಬೀchi ಅವರ ಲೇಖನಗಳ ಪ್ರಭಾವ ವಿಶೇಷವಾಗಿತ್ತು. ತ್ರಿವೇಣಿ, ಎಂ. ಕೆ. ಇಂದಿರಾ, ಅನುಪಮಾ, ನಿರಂಜನ ಮತ್ತು ಪ್ರಭಾ ಅವರ ಮೆಚ್ಚಿನ ಲೇಖಕಿಯರು.
ಪ್ರಭಾ ಮಟಮಾರಿ ಅವರು ಬರಹಗಳನ್ನು ಸುಧಾ, ಮಯೂರ, ಮಲ್ಲಿಗೆ, ಕಸ್ತೂರಿ ಕರ್ಮವೀರ ಮುಂತಾದ ನಿಯತಕಾಲಿಕಗಳಿಗೆ ಕಳಿಸುತ್ತಿದ್ದರು. ಆಕಾಶವಾಣಿ ಹೈದ್ರಾಬಾದ್ನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕೊಟ್ಟರು. ರೇಡಿಯೋ ನಾಟಕಗಳು, ವೇದಿಕೆಯ ನಾಟಕಗಳನ್ನೂ ಬರೆದರು. ಕತೆ, ಕವಿತೆ, ಹಾಸ್ಯಲೇಖನ, ಮುಂತಾದವುಗಳು ಪ್ರಕಟಗೊಂಡವು.
ಪ್ರಭಾ ಮಟಮಾರಿ ಅವರು ಹೈದರಾಬಾದಿನ “ಕರ್ನಾಟಕ ಸಾಹಿತ್ಯ ಮಂದಿರ” ಎಂಬ ಪ್ರಸಿದ್ಧ ಸಂಸ್ಥೆಯಲ್ಲಿ ಅತ್ಯಂತ ಚಟುವಟಿಕೆಯ ಸದಸ್ಯರಾಗಿದ್ದರು. ಸಾಹಿತ್ಯಮಂದಿರದ ಹವ್ಯಾಸಿ ಯುವ ಸಾಹಿತಿಗಳು ಹೊರಡಿಸಿದ “ಪರಿಚಯ” ಪತ್ರಿಕೆಗೆ ಪ್ರಾರಂಭದಿಂದಲೂ ತಮ್ಮ ಲೇಖನಗಳನ್ನು ಬರೆದು ಜನಪ್ರಿಯತೆ ಗಳಿಸಿದರು. ಕವಿ ಸಮ್ಮೇಳನ, ಬಹುಭಾಷಾ ಕವಿಸಮ್ಮೇಳನದಲ್ಲಿ ತಾವು ಬರೆದ ಕನ್ನಡ ಕವಿತೆಗಳ ಹಿಂದೀ ಭಾಷಾಂತರ ಮಾಡಿ ಓದಿ ಪ್ರೇಕ್ಷಕರನ್ನು ನಗೆಗಡಲಲ್ಲಿಯೂ ತೇಲಿಸಿದ್ದರಲ್ಲದೆ ಭಾವುಕರನ್ನಾಗಿಯೂ ಮಾಡಿದ್ದರು. ಇವರು ಮೂಡಿಸಿದ ಹಿಂದೀ ಬರಹಗಳು ‘ದಕ್ಷಿಣ ಸಮಾಚಾರ’, ‘ಪುಷ್ಪಕ’, ‘ಹಿಂದೀ ವಾರ್ತಾ’, ‘ಮಿಲಾಪ’, ‘ರಾಷ್ಟ್ರೊತ್ಥಾನ’ ಮುಂತಾದ ಹಿಂದೀ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 1997ರಲ್ಲಿ ‘ದೆಹಲಿ ಕನ್ನಡಿಗ’ ಪತ್ರಿಕೆಯ ಮೂಲಕ ಸಾ. ಮ. ಗ. ಅವರ ನೇತೃತ್ವದಲ್ಲಿ ನಡೆದ “ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಕಿತ್ತೂರ ಅವರು ಬರೆದ ‘ಅಜ್ಜಿ’ ನಾಟಕದ ನಿರ್ದೇಶನ ಮಾಡಿದರು. ಇದೇ ಸಮಾರಂಭದಲ್ಲಿ ಬಹುಭಾಷಾ ಕವಿಸಮ್ಮೇಳನದಲ್ಲಿ ಹಾಸ್ಯ ಪ್ರಧಾನ ಕವಿತೆಯನ್ನು ಕನ್ನಡ ಹಾಗೂ ಹಿಂದೀ ಎರಡೂ ಭಾಷೆಗಳಲ್ಲಿ ವಾಚಿಸಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದರು. ಈ ಸಂದರ್ಭದಲ್ಲಿ ‘ಕನ್ನಡ ಪ್ರಚಾರಕಿ’ ಎಂದು ಪುಸ್ತಕ ಪ್ರಾಧಿಕಾರದ ‘ಲಕ್ಕಪ್ಪ’ ಅವರಿಂದ ಪ್ರಶಂಶಾ ಪತ್ರದ ಜೊತೆಗಿನ ಸನ್ಮಾನ ಪಡೆದರು.
ಪ್ರಭಾ ಮಟಮಾರಿ ಅವರು ಹೈದರಾಬಾದಿನ ಸಾಕಷ್ಟು ಕನ್ನಡ ಸಂಸ್ಥೆಗಳಿಗೆ ಆಜೀವ ಸದಸ್ಯರಾಗಿದ್ದರು. ಕರ್ನಾಟಕ ಮಹಿಳಾ ಮಂಡಳಿಯ ದಕ್ಷ ಕಾರ್ಯದರ್ಶಿಯಾಗಿ ಎರಡು ದಶಕಗಳ ಸೇವೆ ಸಲ್ಲಿಸಿದ್ದರು.
ಸುಸಂಸ್ಕೃತ ಕುಟುಂಬದ ಉತ್ತಮ ಗೃಹಿಣಿಯಾಗಿ, ಜನಪ್ರಿಯ “ಸಮಾಜಸೇವಕಿ” ಯಾಗಿ ತುಂಬಿದ ಸಂಸಾರದಲ್ಲಿ ಹಿರಿವಯಸ್ಸಿನ ನಿಶ್ಚಿಂತ ಜೀವನ ನಡೆಸುತ್ತಿದ್ದರು.
Subscribe to Updates
Get the latest creative news from FooBar about art, design and business.