ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಪಡೀಲ್ ಅಮೃತ ಕಾಲೇಜ್ ಸಹಯೋಗದಲ್ಲಿ ಆಯೋಜಿಸಿರುವ ತುಳು ನಾಟಕ ಕಾರ್ಯಾಗಾರದ ಉದ್ಘಾಟನಾ ಸಮರಂಭವು ದಿನಾಂಕ 24 ಜೂನ್ 2025ರ ಮಂಗಳವಾರದಂದು ಪಡೀಲ್ ನಲ್ಲಿರುವ ಅಮೃತ ಕಾಲೇಜ್ ನಲ್ಲಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಮಾತನಾಡಿ “ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಪಂಜೆ ಮಂಗೇಶರಾಯರ ಕಾರಣದಿಂದಾಗಿ ಶತಮಾನಗಳ ಹಿಂದೆಯೇ ಶಾಲೆಗಳಲ್ಲಿ ನಾಟಕ ಪ್ರದರ್ಶನ ಆರಂಭವಾಗಿತ್ತು. ವಿದ್ಯಾರ್ಥಿಗಳು ತುಳು ನಾಟಕಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಾಲೆಯಿಂದಲೇ ತುಳು ನಾಟಕಗಳ ಬೆಳವಣಿಗೆ ಆರಂಭಗೊಂಡು ಅದು ಈಗ ವೃತ್ತಿಪರವಾಗಿ ಬೆಳವಣಿಗೆ ಹೊಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ” ಎಂದರು.
ಮುಖ್ಯ ಅತಿಥಿಯಾಗಿದ್ದ ನಟ ಪ್ರಭಾಕರ ಮಾತನಾಡಿ “ನಾಟಕದ ಮೂಲಕ ಸ್ನೇಹ, ಪ್ರೀತಿ, ಸಾಮರಸ್ಯವನ್ನು ಮೂಡಿಸಬೇಕು” ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಅಮೃತ ಕಾಲೇಜ್ ಇದರ ಪ್ರಾಂಶುಪಾಲರಾದ ಚಂದ್ರಹಾಸ ಕಣ್ವತೀರ್ಥ ಮಾತನಾಡಿದರು.
ಕಾರ್ಯಗಾರವು ಹತ್ತು ದಿನಗಳ ಕಾಲ ನಡೆಯಲಿದ್ದು, ಕೊನೆಯಲ್ಲಿ ಹೊಸ ತುಳು ನಾಟಕವನ್ನು ಪ್ರದರ್ಶಿಸಲಾಗುವುದು ಎಂದು ಶಿಬಿರದ ನಿರ್ದೇಶಕರಾದ ಜಗನ್ ಪವರ್ ಬೇಕಲ್ ತಿಳಿಸಿದರು. ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.