ಮಂಗಳೂರು : ಕನ್ನಡ ಕರಾವಳಿ ಸುದ್ದಿ: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ ‘ಕೆಂಪೇಗೌಡ ಪ್ರಶಸ್ತಿ’ಯನ್ನು ಪರಮ ಪೂಜ್ಯ ಡಾ. ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕರ್ನಾಟಕ ಸರಕಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಶ್ರೀ ಡಾ. ಸಿ.ಎನ್. ಅಶ್ವತ್ ನಾರಾಯಣ್ ಇವರ ನೇತೃತ್ವದಲ್ಲಿ ಹಾಗೂ ಸಮಸ್ತ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವದ ಅಂಗವಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ಯಕ್ಷಗಾನ ಪ್ರಸಂಗಕರ್ತರು ನಿವೃತ್ತ ಶಿಕ್ಷಕರೂ ಯಕ್ಷ ಸಾಹಿತಿ ಅರ್ಥದಾರಿಗಳು ಯಕ್ಷಗಾನ ಕ್ಷೇತ್ರದ ದಿಗ್ಗಜರೂ ಆದ ಕಂದಾವರ ರಘರಾಮ ಶೆಟ್ಟಿಯವರಿಗೆ ದಿನಾಂಕ 27 ಜೂನ್ 2025ರಂದು ಅರಮನೆ ಮೈದಾನದಲ್ಲಿ ನೀಡಿ ಗೌರವಿಸಲಾಗುವುದು.
ಕಂದಾವರ ರಘುರಾಮ ಶೆಟ್ಟರ ರಚನೆಗಳಲ್ಲಿ ರಂಗದೃಷ್ಠಿ ಸ್ಪುಟವಾಗಿದ್ದು, ಇಡಿಯ ಪ್ರದರ್ಶನದ ಚೌಕಟ್ಟು, ಹಾಡುವಿಕೆ, ರಸವೈವಿಧ್ಯ, ವೇಷಗಳ ಅವಕಾಶ, ಒಟ್ಟು ಸಮತೋಲ, ನಾಟಕೀಯ ನಡೆ ಇವುಗಳನ್ನು ಗಮನಿಸಿ ಇವರು ರಚನೆಗಳನ್ನು ನೀಡಿದ್ದಾರೆ. ಪಾತ್ರ ಚಿತ್ರಣ, ಸನ್ನಿವೇಶ ಚಿತ್ರಣಗಳಿಗೆ ಗಮನವಿತ್ತಿದ್ದಾರೆ. ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ, ವಸುವರಾಂಗಿ, ಸೀತಾಪಾರಮ್ಯಗಳು ವಿಶಿಷ್ಟವಾದ ರಚನೆಗಳೆನ್ನಬಹುದು. ಆಧುನಿಕ ರಂಗದ ಅವಶ್ಯಕತೆಯಿಂದ ಪ್ರಸಂಗಕರ್ತನು ಹೇಗೆ ಒದ್ದಾಟಕ್ಕೊಳಗಾಗುತ್ತಾನೆ ಎಂಬುದಕ್ಕೂ ಇಲ್ಲಿಯ ರಚನೆಗಳಲ್ಲಿ ಪುರಾವೆಗಳಿವೆ. ಶೂದ್ರತಪಸ್ವಿನಿಯಲ್ಲಿ ರೂಪಕವೊಂದರಲ್ಲೂ, ಅಂಜನ ದೃಶ್ಯದಲ್ಲೂ ಸಾಂಪ್ರದಾಯಿಕ ಯಕ್ಷಗಾನದ ವಸ್ತು, ವೇಷಗಳನ್ನು ತಂದಿರುವ ರೀತಿ, ಹಾಗಾದರೂ ಅದನ್ನುಳಿಸುವ ಯೋಚನೆಗಳು, ರಂಗಭೂಮಿಯು ಓರ್ವ ಕವಿಯ ಮೂಲಕ ಕಂಡುಕೊಳ್ಳುವ ಹೊಸ, ಹೊಸ ದಾರಿಗಳಿಗೆ ಸಾಕ್ಷಿಯಾಗಿವೆ. ಇದೇ ರೀತಿ ಪಾತ್ರ ಕಲ್ಪನೆ, ಕಥಾಪರಿವರ್ತನೆಗಳಲ್ಲಿ ಪ್ರಸಂಗಕರ್ತರ ಪ್ರತಿಭೆ, ದೃಷ್ಟಿ ವೈಶಾಲ್ಯಗಳೂ ವ್ಯಕ್ತವಾಗಿವೆ.