ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 25 ಜೂನ್ 2025ರಂದು ಉಡುಪಿಯ ಗೀತಾ ಮಂದಿರದಲ್ಲಿ ಪರ್ಯಾಯ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಟ್ರಸ್ಟ್ ನ ಅಧ್ಯಕ್ಷರಾದ ಯಶ್ಪಾಲ್ ಎ. ಸುವರ್ಣ ಮತ್ತು ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತಿಯಲ್ಲಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ, ಅನುಮೋದಿಸಲಾಯಿತು.
ಬಳಿಕ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಗುರುಗಳ ಪ್ರಥಮ ಸಭೆ ಶಾಸಕರ ಉಪಸ್ಥಿತಿಯಲ್ಲಿ ನಡೆಯಿತು. ಉಡುಪಿ, ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳ 92 ಪ್ರೌಢಶಾಲೆಗಳಿಗೆ 40 ಗುರುಗಳನ್ನು ಯಕ್ಷಗಾನ ಕಲಿಸಲು ನಿಯುಕ್ತಿಗೊಳಿಸಲಾಯಿತು.
“ಯಕ್ಷಶಿಕ್ಷಣ ಒಂದು ಅಪೂರ್ವ ಯೋಜನೆ, ಇದಕ್ಕೆ ತನ್ನ ಸಂಪೂರ್ಣ ಸಹಕಾರವಿದೆ” ಎಂಬುದಾಗಿ ಶಾಸಕರು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಗುರುಗಳಿಗೆ ವಿಶೇಷ ಸೂಚನೆಗಳನ್ನು ನೀಡಿದರು. ಟ್ರಸ್ಟ್ ನ ವಿಶ್ವಸ್ಥರಾದ ಎಂ. ಗಂಗಾಧರ ರಾವ್, ನಾರಾಯಣ ಎಂ. ಹೆಗಡೆ, ವಿ. ಜಿ. ಶೆಟ್ಟಿ, ಮೀನಾ ಲಕ್ಷಣಿ ಆಡ್ಯಂತಾಯ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ರಾಜಗೋಪಾಲಾಚಾರ್ಯ, ಅನಂತರಾಜ ಉಪಾಧ್ಯ, ನಿರಂಜನ ಭಟ್ ಉಪಸ್ಥಿತರಿದ್ದರು. ನೂತನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಸಹಕರಿಸಿದರು. ಆರಂಭದಲ್ಲಿ, ಟ್ರಸ್ಟಿನ ಸದಸ್ಯರಾಗಿ, ಕೋಶಾಧಿಕಾರಿಯಾಗಿ ವಿಶೇಷ ಸೇವೆ ಸಲ್ಲಿಸಿ, ನಮ್ಮನ್ನಗಲಿದ ಹೆಚ್. ಎನ್. ಶೃಂಗೇಶ್ವರ ಹಾಗೂ ಪ್ರೊ. ಎಚ್. ಕೃಷ್ಣ ಭಟ್ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.