ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಹಕಾರದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ, ಕ.ಚು.ಸಾ.ಪ. ಕಾಸರಗೋಡು ಘಟಕ, ಅಭಿರುಚಿ ಬಳಗ ಮೈಸೂರು ಇವುಗಳ ವತಿಯಿಂದ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 5ನೇ ಸಮ್ಮೇಳನವನ್ನು ದಿನಾಂಕ 29 ಜೂನ್ 2025ರ ಆದಿತ್ಯವಾರ ಪೂರ್ವಾಹ್ನ ಗಂಟೆ 10-00ಕ್ಕೆ ಕಾಸರಗೋಡು ಸಿರಿಬಾಗಿಲು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಕವಿ ಪತ್ರಕರ್ತರಾದ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ದೀಪ ಪ್ರಜ್ವಲನೆ ಮಾಡಿ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದು, ಕಾಸರಗೋಡಿನ ಹಿರಿಯ ಚಿಂತಕರಾದ ಶ್ರೀ ವಿ.ಬಿ.ಕುಳಮರ್ವ ಇವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರಿಂದ ಚುಟುಕು ಸಾಹಿತ್ಯ ಪುಸ್ತಕಗಳ ಅನಾವರಣ ಮತ್ತು ‘ಚುಟುಕು ಚೇತನ ಗೌರವ ಪ್ರಶಸ್ತಿ’ ಪುರಸ್ಕಾರ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕುಮಾರಿ ಅವನೀಶ ಎಸ್. ನೀಲಗುಂದ ಉಣಕಲ್ ಇವರಿಂದ ‘ಮಯೂರಶರ್ಮನ’ ಏಕಪಾತ್ರ ಅಭಿನಯ ಪ್ರಸ್ತುತಗೊಳ್ಳಲಿದೆ.
ಮಧ್ಯಾಹ್ನ 11-30 ಗಂಟೆಗೆ ನಡೆಯಲಿರುವ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಶಿರಸಿಯ ಯಕ್ಷಗಾನ ತಜ್ಞರಾದ ಶ್ರೀ ಗಣಪತಿ ಭಟ್ಟ ವರ್ಗಾಸರ ಇವರು ವಹಿಸಲಿದ್ದು, ಉತ್ತರ ಕನ್ನಡದ ಹಿರಿಯ ಚಿಂತಕರಾದ ಡಾ. ವಸಂತ ನಾಯಕ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ಮೈಸೂರಿನ ಬಾನುಲಿ ನಿವೃತ್ತಿ ಅಧಿಕಾರಿ ಶ್ರೀ ಎನ್.ವಿ. ರಮೇಶ್ ಇವರು ‘ಚುಟುಕು ಸಾಹಿತ್ಯ’, ಗದಗದ ಶ್ರೀ ವೀರನಗೌಡ ಮರಿಗೌಡ ಇವರು ‘ವಚನ – ಚುಟುಕು ಸಾಹಿತ್ಯ ಅನುಬಂಧ’, ಮೈಸೂರಿನ ಕವಯಿತ್ರಿ ಶ್ರೀಮತಿ ಲತಾ ಮೋಹನ್ ಇವರು ‘ಇತ್ತೀಚಿನ ಚುಟುಕು ಸಾಹಿತ್ಯ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.
ಮಧ್ಯಾಹ್ನ 12-30 ಗಂಟೆಗೆ ಕವಿಗೋಷ್ಠಿ – ಸಮಾರೋಪ ಮಂಗಳೂರಿನ ಹಿರಿಯ ಕವಿಗಳಾದ ಡಾ.ಸುರೇಶ್ ನೆಗಲಗುಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಂಗಳೂರಿನ ಹಿರಿಯ ಚಿಂತಕರು ಡಾ. ಕೆ. ಗೋವಿಂದ ಭಟ್ಟರು ಆಶಯ ನುಡಿಗಳನ್ನಾಡಲಿದ್ದಾರೆ. ಕ.ಚು.ಸಾ.ಪ. ಶ್ರೀ ಶೇಖರಗೌಡ ಪಾಟೀಲ ಇವರು ನಿರ್ಣಯ ಮಂಡನೆ ಮಾಡಲಿದ್ದಾರೆ. 1-30 ಗಂಟೆಗೆ ಕಾಸರಗೋಡಿನ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಂದ ನೃತ್ಯ-ಸಂಗೀತ ವೈಭವ ಪ್ರಸ್ತುತಗೊಳ್ಳಲಿದೆ. ಮದ್ಯಾಹ್ನ 2-30 ಗಂಟೆಗೆ ‘ಹರಿಸರ್ವೋತ್ತಮ’ ಎಂಬ ಪ್ರಸಂಗ ಯಕ್ಷಗಾನ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಬಲಿಪ ಶಿವಶಂಕರ ಭಾಗವತ, ಗೋಪಾಲಕೃಷ್ಣ ನಾವಡ ಮಧೂರು, ಮುರಲೀ ಮಾಧವ ಮಧೂರು ಹಾಗೂ ಮುಮ್ಮೇಳದಲ್ಲಿ ವಾದಿರಾಜ ಕಲ್ಲೂರಾಯ, ಗಣೇಶ ಶೆಟ್ಟಿ ಕನ್ನಡಿಕಟ್ಟೆ ಸದಾಶಿವ ಆಳ್ವ ತಲಪಾಡಿ ಇವರು ಸಹಕರಿಸಲಿದ್ದಾರೆ.