ಬೆಂಗಳೂರು : ಬೆಂಗಳೂರು ಕನ್ನಡ ಜಾನಪದ ಪರಿಷತ್ ವತಿಯಿಂದ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಅವರಿಗೆ 2025ನೇ ಸಾಲಿನ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’ಯನ್ನು ದಿನಾಂಕ 25 ಜೂನ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ ನೀಡಿ ಗೌರವಿಸಲಾಯಿತು.
ಡಾ.ಜಮೀರ್ ಅಹಮದ್ ಇವರಿಗೆ ಕರ್ನಾಟಕ ಜಾನಪದ ಕಲೆ, ಸಾಹಿತ್ಯದ ಸಂರಕ್ಷಣೆಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ವಿದ್ಯಾರ್ಥಿಯಾಗಿರುವ ಜಮೀರ್ ಅಹಮದ್ ಇವರು ಶ್ರೀ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ. ಭಾಷೆ ನನ್ನ ಅಂತರಂಗದ ಮೃದಂಗ ಎಂಬ ಕನ್ನಡ ಪ್ರೇಮಿ ‘ಕಾಳಜಿಯ ಕನ್ನಡಿಗ’ ಎಂದೇ ಚಿರಪರಿಚಿತರು. ಕನ್ನಡ ಉಪನ್ಯಾನಕರಾಗಿ ಮತ್ತು ಪತ್ರಕರ್ತರಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಜೀವನದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಆರ್ಥಿಕವಾಗಿ ದುರ್ಬಲವಾಗಿರುವ ರೋಗಿಗಳಿಗೆ ಅದರಲ್ಲೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸಾಮಾಜಿಕ ಜಾಲತಾಣದ ಮತ್ತು ಮಾಧ್ಯಮದ ಸಹಾಯದೊಂದಿಗೆ ಆರ್ಥಿಕ ಸಹಕಾರ ಕೊಡಿಸುವಂತಹ ಸಾಮಾಜಿಕ ಕಾಳಜಿಗೆ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಟ್ಟಿರುವುದು ಧರ್ಮಾತೀತ ಮಾನವತಾ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ.
ಕನ್ನಡ ಉಪನ್ಯಾಸಕರಾಗಿ ಮತ್ತು ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಜಮೀರ್ ಅಹಮದ್ ಮೂಲತಃ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕ ಎಂ. ಡಿ. ಹಾಪಂ ತುಂಬಿದ ಮನೆ ಮತ್ತು ದಿ.ಮೊಖ್ಬುಲ್ ದಂಪತಿಗಳ ಪುತ್ರ. ಬಾಲ್ಯದಿಂದಲೂ ದೇಶ, ನಾಡು-ನುಡಿ ಬಗೆಗೆ ಅಪಾರ ಪ್ರೀತಿ ಹೊಂದಿದವರು, ಎಲ್ಲಾ ಸಮುದಾಯದ ನಿಕಟ ಒಡನಾಟ ಹೊಂದಿರುವ ಇವರು, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಜನಿಸಿರುವುದೇ ನನ ಪುಣ ಎಂದು ಹೆಮ್ಮೆ ಪಡುತ್ತಾರೆ. ಕರ್ನಾಟಕ ರಾಜ ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿ ಮೈಸೂರು, ಇಲ್ಲಿನ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪ್ರಾಧ್ಯಾಪಕರಾದ ಪ್ರೊ. ಡಿ ನಾಗಣ್ಣ ಇವರ ಮಾರ್ಗದರ್ಶನದಲ್ಲಿ ‘ಮೈಸೂರು ನಗರದ ಮುಸ್ಲಿಮರು: ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದಲ್ಲಿ ಪಿ. ಎಚ್. ಡಿ. ಪದವಿ ಪಡೆದುಕೊಂಡಿದ್ದಾರೆ. ನಾಡು-ನುಡಿ-ಸಂಸ್ಕೃತಿ, ಸಾಮಾಜಿಕ ಮತ್ತು ಶೈಕ್ಷಣಿಕ ವಿಚಾರಗಳಲ್ಲಿ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಗುರುತು ಹೊಂದಿರುವ ಇವರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಕೇವಲ ರಾಜ್ಯದಲ್ಲಷ್ಟೇ ಅಲ್ಲದೇ ದೇಶ ಮತ್ತು ವಿದೇಶದಲ್ಲಿರುವ ಕನ್ನಡಿಗರ ಆರ್ಥಿಕ ಸಹಕಾರದೊಂದಿಗೆ, ಬಹಳಷ್ಟು ಬಡ ಕುಟುಂಬದವರಿಗೆ ಹಣ ಸಂಗ್ರಹಿಸಿ ಕೊಡುವುದರಲ್ಲಿ ನೆರವಾಗುತ್ತಿದ್ದಾರೆ.
ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಮೊದಲಾದ ಸಂಘ ಸಂಸ್ಥೆಗಳಲ್ಲೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಆಯೋಜಿಸುವಂತಹ ಕಾರ್ಯಕ್ರಮಗಳಲ್ಲಿ ನಾಡು-ನುಡಿ, ಸಾಮಾಜಿಕ ವಿಚಾರ, ಮಾಧ್ಯಮದ ಜವಾಬ್ದಾರಿ, ಕನ್ನಡ ಸಾಹಿತ್ಯ ಮತ್ತು ಸಂಘ ಸಂಸ್ಥೆಗಳು, ಯುವ ಸಮುದಾಯ, ಮೊದಲಾದ ವಿಷಯಗಳ ಮೇಲೆ ವಿಶೇಷ ಉಪನ್ಯಾನ ನೀಡುತ್ತಾ ಬಂದಿದ್ದಾರೆ. ಇವರ ಸಮರ್ಪಿತ ಸೇವೆಯನ್ನು ಗುರುತಿಸಿ 2020ರಲ್ಲಿ ಕೊಡಗು ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ರಾಜ್ಯೋತ್ಸವ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2024ರಲ್ಲಿ ಸ್ನೇಹ ಸಿರಿ ಬಳಗ (ರಿ) ಕೊಡಗು “ಶಿಕ್ಷಕ ಸಿರಿ” ಪ್ರಶಸ್ತಿಯನ್ನು ನೀಡಿ ಇವರ ಶಿಕ್ಷಕ ವೃತ್ತಿಯ ಗೌರವವನ್ನು ಹೆಚ್ಚಿಸಿದೆ. ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ನಿರಂತರ ಸೇವೆಯನ್ನು ಗುರುತಿಸಿ 2024ರಲ್ಲಿ ಹಾಸನ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Subscribe to Updates
Get the latest creative news from FooBar about art, design and business.
ಉಪನ್ಯಾಸಕ, ಸಾಹಿತಿ ಡಾ. ಜಮೀರ್ ಅಹಮದ್ ಇವರಿಗೆ 2025ನೇ ಸಾಲಿನ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’
No Comments2 Mins Read