ಬೆಂಗಳೂರು : ಶ್ರೀ ಗುರು ಪಂಚಾಕ್ಷರಿ ಪುಟ್ಟರಾಜ ಸಂಗೀತ ಶಾಲೆ ಬೆಂಗಳೂರು, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ಗೀತಾ ಸಂಗೀತ ಅಕಾಡೆಮಿ ಟ್ರಸ್ಟ್ (ರಿ) ಇವರ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ‘ಸಾಹಿತ್ಯ ಮತ್ತು ಕಲಾ ಉತ್ಸವ – 2025’ ಕಾರ್ಯಕ್ರಮವನ್ನು ದಿನಾಂಕ 28 ಜೂನ್ 2025 ಶನಿವಾರ ಮದ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ಗೀತ ಗಾಯನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ರಾಯಚೂರಿನ ಸಾಹಿತಿ ಡಾ. ಮಹೇಂದ್ರ ಕುರ್ಡಿ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ (ರಿ.) ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಭಾಗ್ಯ ಸರವನ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ರಾಮನಗರ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಂಬರೀಷ್ ಇವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶ್ರೀಮತಿ ರೇಣುಕಾ ವಾಯ್.ಎ. ಇವರ ‘ಸಾತ್ವಿಕ ಸಿರಿ’ ಕೃತಿಯನ್ನು ಸಾಹಿತಿ ಡಾ. ರಾಮಲಿಂಗೇಶ್ವರಾ ಇವರು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಭಾವಗೀತೆಗಳ ಪೋಸ್ಟರ್ ಬಿಡುಗಡೆಗೊಳ್ಳಲಿದೆ. ಕುಮಾರಿ ತೇಜಸ್ವಿನಿ ಎಸ್. ಮತ್ತು ತಂಡ ಹಾಗೂ ಶ್ರೀಮತಿ ಎಂ. ಜಯಶ್ರೀ ಮತ್ತು ತಂಡದವರಿಂದ ‘ಭರತನಾಟ್ಯ’, ಶ್ರೀಮತಿ ನೇತ್ರಾವತಿ ಮತ್ತು ತಂಡ ಹಾಗೂ ಕುಮಾರಿ ಋತುಸ್ಪರ್ಶ ಮತ್ತು ತಂಡದವರಿಂದ ‘ಶಾಸ್ತ್ರೀಯ ನೃತ್ಯ ಕಾರ್ಯಕ್ರಮ’, ಡಾ. ಹಂಸಲೇಖ ದೇಶಿ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಶ್ರೀ ಶ್ರೀ ತಾಯಪ್ಪ ಸ್ವಾಮಿಯವರ ಭಜನಾ ಮಂಡಳಿಯವರಿಂದ ‘ಭಜನಾ ಗಾಯನ’ ಪ್ರಸ್ತುತಗೊಳ್ಳಲಿದೆ.