ಮಂಜೇಶ್ವರ : ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್ನ ಕೇರಳ ಗಡಿನಾಡ ಘಟಕದ ಪರಿಷತ್ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮದ ಅಂಗವಾಗಿ ಕಸೂತಿ ಮತ್ತು ಕರಕುಶಲ ತಜ್ಞೆ, ಸಾಹಿತಿ, ಅಂಕಣಗಾರ್ತಿ ಶಶಿಕಲಾ ಬಾಯಾರು ಅವರನ್ನು ಬಾಯಾರು ಸಮೀಪದ ಸಜಂಕಿಲದಲ್ಲಿರುವ ಅವರ ನಿವಾಸವಾದ ಸ್ವಸ್ತಿಕದಲ್ಲಿ ದಿನಾಂಕ 27 ಜೂನ್ 2025ರಂದು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಇದರ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಶಶಿಕಲಾ ಬಾಯಾರು ಇವರನ್ನು ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷರಾದ ಪ್ರೊ. ಪಿ. ಎನ್. ಮೂಡಿತ್ತಾಯ ಮಾತನಾಡಿ “ವಿದ್ವಾನ್ ಪೆರ್ಲ ಕೃಷ್ಣ ಭಟ್ ಇವರ ಪುತ್ರಿಯಾಗಿರುವ ಶಶಿಕಲಾ ಬಾಯಾರು ಕಾಸರಗೋಡಿನ ಹೆಮ್ಮೆಯ ಕಸೂತಿ ಚಿತ್ರಕಲಾವಿದೆ. ಅವರ ವ್ಯಕ್ತಿಚಿತ್ರಗಳು ಅಪೂರ್ವವಾದವುಗಳು. ಅವರ ಪತ್ರಾರ್ಜಿತ ಎಂಬ ಕೃತಿ, ಅಂಕಣ ಪತ್ರಗಳು, ಕಥೆಗಳು ವೈಶಿಷ್ಟ್ಯ ಪೂರ್ಣವಾದವುಗಳು. ಎಲೆಮರೆಯಕಾಯಂತಿರುವ ಶಶಿಕಲಾರ ಕಸೂತಿಚಿತ್ರಗಳು ನಾಡಿನಾದ್ಯಂತ ಪ್ರದರ್ಶನಗೊಳ್ಳಬೇಕಾಗಿವೆ” ಎಂದರು.
ಕವಯತ್ರಿ ಸಂಧ್ಯಾಗೀತಾ ಬಾಯಾರು ಮತ್ತು ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಮೀಯಪದವು ಅವರು ಶಶಿಕಲಾ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯದ ಕುರಿತು ಮಾತನಾಡಿದರು. ಶಿಕ್ಷಕ ಪ್ರಭಾಕರ, ಶಿಕ್ಷಕಿ ನಿವೇದಿತಾ, ಕೊಳಲು ತಜ್ಞ ಕೃಷ್ಣರಾಜ, ಚಿನ್ಮಯ ಕೃಷ್ಣ, ಆಶಯ, ಸ್ಮಿತಾ ಮುಂತಾದವರು ಉಪಸ್ಥಿತರಿದ್ದರು. ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ರವಿಲೋಚನ ಸಿ .ಎಚ್. ಧನ್ಯವಾದವಿತ್ತರು.