ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಮತ್ತು ಕಾಸರಗೋಡು ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಸಂಯುಕ್ತಾಶ್ರಯದಲ್ಲಿ ‘ಕೊಡಗು ಮಳೆಗಾಲ ಚುಟುಕು ಕವಿಗೋಷ್ಠಿ’, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 06 ಜುಲೈ 2025ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷರಾದ ಕವಿ, ಸಾಹಿತಿ, ವ್ಯಂಗ್ಯ ಚಿತ್ರಕಾರ, ಪತ್ರಕರ್ತ ಶ್ರೀ ವಿರಾಜ್ ಅಡೂರ್ ಹಾಗೂ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಇದರ ಪ್ರದಾನ ಕಾರ್ಯದರ್ಶಿಯಾದ ಸಂಘಟಕ, ಕಲಾವಿದ, ಫೋಟೋಗ್ರಾಫರ್ಸ್ ಅಸೋಶಿಯಷನ್ ಪದಾಧಿಕಾರಿಯಾದ ಶ್ರೀ ವಸಂತ್ ಕೆರೆಮನೆ ಇವರನ್ನು ಮಡಿಕೇರಿಯ ಪತ್ರಿಕಾ ಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಕನ್ನಡ ಭವನ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಇವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭವನ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಟೀಚರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಡಾ. ವಾಮನ್ ರಾವ್ ಬೇಕಲ್, ಅಧ್ಯಕ್ಷತೆ ವಹಿಸಿದ್ದ ಬೊಳ್ಳಜಿರ ಬಿ. ಅಯ್ಯಪ್ಪ, ಲೇಖಕಿ ಸ್ಮಿತಾ ಅಮೃತರಾಜ್ ಕನ್ನಡ ಚು.ಸಾ.ಪ. ಕೊಡಗು ಜಿಲ್ಲಾ ಅಧ್ಯಕ್ಷರಾದ ರುಬೀನ ಎಂ.ಎ., ಸಾಂದರ್ಭಿಕವಾಗಿ, ಕನ್ನಡ ಮನಸ್ಸುಗಳು, ಸಂಘಟಕರು, ಸಾಹಿತಿ, ಕವಿ, ಕನ್ನಡ ಕಾರ್ಯಕರ್ತರುಗಳು ಒಗ್ಗಟ್ಟಾಗಿ ಭಾಷೆ, ಸಾಹಿತ್ಯ, ಸಂಸ್ಕೃತಿ ಯ ಔನತ್ಯಕ್ಕಾಗಿ ದುಡಿಯಲಿರುವುದರ ಬಗ್ಗೆ ಮಾತನಾಡಿದರು.
ಕನ್ನಡ ಭವನದ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ಯನ್ನು ಕವಯತ್ರಿ, ಲೇಖಕಿ ಸ್ಮಿತಾ ಅಮೃತ ರಾಜ್, ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಮರ್ಕರ ಪೋಸ್ಟ್ ಸಂಪಾದಕರಾದ ಜೈರಸ್ ಥಾಮಸ್ ಅಲೆಗ್ಸಾಂಡೆರ್ ಇವರಿಗೆ ಕನ್ನಡ ಭವನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಟೀಚರ್ ನೀಡಿ ಗೌರವಿಸಿದರು.
ಕಿಗ್ಗಾಲು ಎನ್. ಗಿರೀಶ್ ಮೂರ್ನಾಡು, ಮೂಕಳೇರ ಟೈನಿ ಪೂಣಚ್ಚ ಪೊನ್ನಂಪೇಟೆ, ಪಂದ್ಯಂಡ ರೇಣುಕ ಸೋಮಯ್ಯ ಹೊಸೂರು ಅಮ್ಮತ್ತಿ, ಶ್ರೀಮತಿ ಅಪರ್ಣಾ ಹುಲಿತಾಳ ಮತ್ತು ಅಯ್ಯನೆರವಂಡ ಪ್ರಿತುನ್ ಪೂವಣ್ಣ ಇವರು ‘ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ’ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ‘ಕೊಡವ ಮಕ್ಕಡ ಕೂಟ’ದಿಂದ ಹೊರತರಲಾದ ಲೇಖಕಿ ಟಿ. ವೈಶಾಲಿನಿ ಮಂಜೇಶ್ವರ ಇವರು ರಚಿಸಿರುವ ‘ಮುಖವಾಡ’ ಎಂಬ ಸಂಕಲನವನ್ನು ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಇವರಿಗೆ ನೀಡಿ ಬಿಡುಗಡೆಗೊಳಿಸಿದರು. ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ‘ಕೊಡಗು ಮಳೆಗಾಲ ಕವಿಗೋಷ್ಠಿ’ಯಲ್ಲಿ ಸುಮಾರು 40 ಮಂದಿ ಬರಹಗಾರರು ಕವನ ವಾಚಿಸಿ ಗಮನ ಸೆಳೆದರು.
ರಂಜಿತ್ ಜಯರಾಮ್ ಮತ್ತು ನೀವ್ಯಾ ದೇವಯ್ಯ ಪ್ರಾರ್ಥಿಸಿ, ಅರುಣ್ ಕುಮಾರ್ ಸ್ವಾಗತಿಸಿ, ಹರ್ಷಿತಾ ಶೆಟ್ಟಿ, ವಿನೋದ್ ಮೂಡಗದ್ದೆ ನಿರೂಪಿಸಿ, ಚಂದನ್ ನಂದರಬೆಟ್ಟು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಸೋಮವಾರಪೇಟೆಯ ಖ್ಯಾತ ಗಾಯಕಿ ತೆರೇಸಾ ಲೋಬೊ ಹಾಡಿದರು. ಖ್ಯಾತ ಯುವ ನೃತ್ಯಪಟು ಎಸ್.ಎ. ರಿಶಾ ನೃತ್ಯ ಪ್ರದರ್ಶನ ನೀಡಿದರು.