ಉಡುಪಿ : ಯಕ್ಷಗಾನ ಕೇಂದ್ರ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಹಯೋಗದಲ್ಲಿ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ 2025ನೇ ಸಾಲಿನ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ವೇಷಧಾರಿ ಶ್ರೀಯುತ ವಿದ್ಯಾಧರ ರಾವ್ ಜಲವಳ್ಳಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ 19 ಜುಲೈ 2025ರಂದು ಸಂಜೆ ಘಂಟೆ 3.00ಕ್ಕೆ ಉಡುಪಿ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬಡಗುತಿಟ್ಟಿನ ಕಲಾವಿದರ ಕೂಡುವಿಕೆಯಿಂದ ‘ಕೃಷ್ಣಾರ್ಜುನ ಕಾಳಗ ಹಾಗೂ ರಾಜಾಭದ್ರಸೇನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜಲವಳ್ಳಿ ವಿದ್ಯಾಧರ ರಾವ್ :
ಯಕ್ಷರಂಗದ ಡೈನಾಮಿಕ್ ಸ್ಟಾರ್ ಎಂದೇ ಹೆಸರಾದ ಅಭಿನಯ ಚಕ್ರವರ್ತಿ ಬಿರುದಾಂಕಿತ ಜಲವಳ್ಳಿ ವಿದ್ಯಾಧರ ರಾವ್ ಅವರು ಹೊನ್ನಾವರ ತಾಲೂಕು ಜಲವಳ್ಳಿಯಲ್ಲಿ, ಯಕ್ಷಕಲಾವಿದ ವೆಂಕಟೇಶ್ ರಾವ್ ಮತ್ತು ಕಲ್ಯಾಣಿ ದಂಪತಿಯ ಮಗನಾಗಿ 12 ಜುಲೈ 1972ರಲ್ಲಿ ಜನಿಸಿದರು. ಪ್ರೌಢ ಶಿಕ್ಷಣದ ಬಳಿಕ ತಂದೆಯವರಿಂದ ಯಕ್ಷ ಕಲಾಸಕ್ತಿಯನ್ನು ಮೈಗೂಡಿಸಿಕೊಂಡ ಇವರು, ನಂತರ ಯಕ್ಷಗಾನವನ್ನೇ ಬದುಕಾಗಿಸಿಕೊಂಡರು.
ಆರಂಭಿಕ ಯಕ್ಷಯಾನದಲ್ಲಿ ಗುಂಡಬಾಳ, ಗೋಳಿಗರಡಿ, ಕಮಲಶಿಲೆ ಮೇಳಗಳಲ್ಲಿ ಕಾಣಿಸಿಕೊಂಡ ಇವರು, ನಂತರ ಸಾಲಿಗ್ರಾಮ, ಪೆರ್ಡೂರು ಮೇಳದ ಕಲಾವಿದನಾಗಿ ಅಪಾರ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ವಿದ್ಯಾಧರ ಅವರು ಯಕ್ಷಗಾನ ರಂಗದ ಅಪೂರ್ವ ಕಲಾವಿದರು. ಅವರ ನಿರ್ವಹಣೆ – ನಿರೂಪಣೆಯಲ್ಲಿ, ಪೌರಾಣಿಕ-ನೂತನ ಪ್ರಸಂಗಗಳ ಪಾತ್ರಗಳಲ್ಲಿ ಅವರದೇ ಆದ ಛಾಪು-ರೂಪು, ನಡೆ-ನುಡಿ, ಬೆರಗು-ಮೆರಗು ಸೃಷ್ಟಿಸಿ ಪಾತ್ರಗಳಿಗೆ ಜೀವ ತುಂಬುತ್ತಾರೆ. ಸುಧನ್ವ, ಅರ್ಜುನ, ಕೌರವ, ಮಾಗಧ, ಭಸ್ಮಾಸುರ, ದುಷ್ಟಬುದ್ಧಿ, ಕಂಸ, ಕರ್ಣ, ಕೀಚಕ, ವಿಶ್ವಾಮಿತ್ರ, ಬಲರಾಮ, ಭದ್ರಸೇನ, ವಾಲಿ ಮೊದಲಾದ ಪಾತ್ರಗಳಲ್ಲಿ ಅವರ ನಟನೆಯ ಶೈಲಿ ಅದ್ಭುತವಾದುದು.
ಇವರ ಯಕ್ಷಲೋಕದ ಸಾಧನೆಗಾಗಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ, ಸನ್ಮಾನ ನೀಡಿ ಗೌರವಿಸಿವೆ. ‘ಯಕ್ಷ ಕಲಾಧರ’ ಪ್ರಶಸ್ತಿ, ‘ಯಕ್ಷರಾಜ’ ಪ್ರಶಸ್ತಿಗಳು ಇವರಿಗೆ ಲಭಿಸಿವೆ.