ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೇಳನೇ ಉಪನ್ಯಾಸ ಕಾರ್ಯಕ್ರಮ ದಿನಾಂಕ 12 ಜುಲೈ 2025 ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಇಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಯುವ ಲೇಖಕಿ ಮತ್ತು ವಾಗ್ಮಿಯಾದ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ “ದಿಟ್ಟ ಮನಸ್ಸುಗಳ ನಿರ್ಮಾಣ – ಇಂದಿನ ಯುವಕರಿಗಾಗಿ ಸ್ವಾಮಿ ವಿವೇಕಾನಂದರ ಚಿಂತನೆ” ಎಂಬ ವಿಷಯದಲ್ಲಿ ಮಾತನಾಡಿ “ಸ್ವಾಮಿ ವಿವೇಕಾನಂದರು ಯುವಕರನ್ನು ದೇಶದ ನಿಜವಾದ ಶಕ್ತಿ ಎಂದು ಕರೆದು, ಅವರಿಗೆ ಆತ್ಮಶ್ರದ್ಧೆ ಎಂಬ ಅಮೋಘ ಶಸ್ತ್ರವನ್ನು ನೀಡಿದ್ದಾರೆ. ಅವರು ಬೋಧಿಸಿದಂತೆ, “ನೀನು ದೇವನಸ್ವರೂಪ, ನಿನ್ನೊಳಗೇ ಅನಂತ ಶಕ್ತಿ ಇದೆ” ಎಂಬ ನಂಬಿಕೆಯನ್ನು ಪ್ರತಿಯೊಬ್ಬ ಯುವಕನ ಮನಸ್ಸಿನಲ್ಲಿ ಬೆಳೆಸಿದವರು. ಭಯ, ಅನುಮಾನ, ಹತಾಶೆ – ಈ ಎಲ್ಲವುಗಳಿಂದ ಯುವಕರು ಅಸ್ತವ್ಯಸ್ತರಾಗುತ್ತಿರುವ ಈ ಸಮಯದಲ್ಲಿ, ವಿವೇಕಾನಂದರ ಚಿಂತನೆ ದಿಟ್ಟತನವಲ್ಲದೆ ಬೇರೇನಲ್ಲ. ಅವರು ಹೇಳಿದಂತೆ, “ಭಯವೇ ಪಾಪ”. ನಮ್ಮ ಮನಸ್ಸು ಭಯವನ್ನು ಜಯಿಸಿದಾಗಲೇ ದಿಟ್ಟತನಕ್ಕೆ ಪೂರ್ತಿ ಅರ್ಥ ಸಿಗುತ್ತದೆ. ದಿಟ್ಟತನ ಎನ್ನುವುದು ಗರ್ಜಿಸುವುದಲ್ಲ, ಬದಲಾಗಿ ಮೌನವಾದ ಧೈರ್ಯ, ನಂಬಿಕೆ, ಸಾಧನೆ ಮಾಡುವ ಶಕ್ತಿ. ಇಂದಿನ ಯುವಕರಿಗೆ ಬೇಕಾಗಿರುವುದು ಸಾಕಷ್ಟು ಅಂಕಗಳು, ಸೆಲ್ಫಿಗಳು ಅಥವಾ ಫಾಲೋವರ್ಸ್ಗಳು. ಆದರೆ ಬದುಕಿನಲ್ಲಿ ಬೇಕಾಗಿರುವುದು ಮೌಲ್ಯಗಳು. ಅದಕ್ಕೆ ಪ್ರೇರಣೆ ವಿವೇಕಾನಂದರು. ಅವರು ಧರ್ಮವನ್ನು ಬೋಧಿಸಿದಾಗ, ಅದು ಯಾವುದೇ ನಿರ್ದಿಷ್ಟ ಆಚರಣೆಗಳ ಕುರಿತಲ್ಲ – ಧರ್ಮ ಎಂದರೆ ನನ್ನೊಳಗಿನ ಶಕ್ತಿ, ನನ್ನೊಳಗಿನ ಶಾಂತಿ, ನನ್ನೊಳಗಿನ ಸೇವಾಭಾವನೆ. ಅವರು ತಿಳಿಸಿದಂತೆ, “ದೇವರನ್ನು ದೇವಸ್ಥಾನದಲ್ಲಿ ಹುಡುಕಬೇಡ; ಬಡವರ ಸೇವೆಯಲ್ಲಿ ನೋಡು.” ಸ್ವಾಮಿ ವಿವೇಕಾನಂದರು ಸ್ವಾವಲಂಬಿ ಭಾರತದ ಕನಸುಗಳನ್ನು ಬಿತ್ತಿದವರು. ಅವರು ಇಂದಿಗೂ ನಮ್ಮ ಕನಸುಗಳ ಮಾರ್ಗದರ್ಶಕರಾಗಿದ್ದಾರೆ. ಅವರು ಬಿತ್ತಿದ ಪ್ರೇರಣೆಯ ಬೀಜವನ್ನು ನಾವು ಇಂದು ಬೆಳೆಸಿದರೆ – ನಾಳೆಯ ಭಾರತ ದಿಟ್ಟ ಮನಸ್ಸುಗಳ ತೋಟವಾಗಿರುತ್ತದೆ.” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಇಲ್ಲಿನ ರಿಜಿಸ್ಟ್ರಾರ್ರಾದ ಡಾ. ಅಲ್ವಿನ್ ಡಿಸಾ, ಕಾರ್ಯಕ್ರಮದ ಸಂಯೋಜಕರಾದ ಡಾ. ಅಲ್ವಿನ್ ಮಿಸ್ಕ್ವಿತ್ ಹಾಗೂ ಉಪನ್ಯಾಸಕರು ಮತ್ತು ಎನ್. ಸಿ. ಸಿ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿಯಾದ ಏಂಜೆಲ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿ, ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಇಲ್ಲಿನ ಎನ್. ಸಿ. ಸಿ. ವಿದ್ಯಾರ್ಥಿನಿಯಾದ ಜಿಸೆಲ್ ವಾಸ್ ವಂದಿಸಿದರು.