ವಿರಾಜಪೇಟೆ : ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡಗಿನ ವಿದ್ಯಾರ್ಥಿನಿಯೊಬ್ಬರು ರಚಿಸಿದ ಕವನ ಸಂಕಲನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ವಿರಾಜಪೇಟೆ ಮೂಲದ ದುದ್ದಿಯಂಡ ಮುಸ್ಕಾನ್ ಸೂಫಿ ಇವರ ಚೊಚ್ಚಲ ಇಂಗ್ಲೀಷ್ ಕೃತಿ ‘ದಿಸ್ ಟೂ ಶೆಲ್ ಪಾಸ್’ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ಬುಕ್ ಲಿಫ್ ಪಬ್ಲಿಕೇಶನ್ ಪ್ರಕಟಿಸಿದ್ದು, ಅಮೆರಿಕ ಮೂಲದ ಪ್ರಸಿದ್ಧ ಕವಿ ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ನೀಡಲಾಗುವ 21ನೇ ಶತಮಾನದ ಅಂತಾರಾಷ್ಟ್ರೀಯ ಮಟ್ಟದ ‘ಇಂಡಿ ಆಥರ್ಸ್ ಅವಾರ್ಡ್ 2025’ಕ್ಕೆ ನಾಮನಿರ್ದೇಶನಗೊಂಡಿದೆ. ಬುಕ್ ಲಿಫ್ ಪಬ್ಲಿಕೇಶನ್ ಇತ್ತೀಚೆಗೆ ಏರ್ಪಡಿಸಿದ 21 ದಿನಗಳಲ್ಲಿ 21 ಕವನ ರಚಿಸುವ ‘ಸವಾಲುಗಳ ಅಭಿಯಾನ’ದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯ ಮತ್ತು ಮನೋ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ ಸೂಫಿ ಸವಾಲುಗಳ ನಿರ್ದಿಷ್ಟ ಗುರಿ ಸಾಧಿಸಿ ಗಮನ ಸೆಳೆದಿದ್ದಾರೆ.
ಕಾಲೇಜು ತರಗತಿಗಳ ಬಿಡುವಿನ ಸಮಯದಲ್ಲಿ ಕಾವ್ಯಕೃಷಿಯನ್ನು ಆರಂಭಿಸಿ ಕವನ ರಚನೆಗಳ ಕುರಿತ ಅಭಿಯಾನದ ಗುರಿ ಸಾಧಿಸಿದ ಮುಸ್ಕಾನ್ ಸೂಫಿ, ತಮ್ಮ ಮನದ ಮೂಸೆಯಲ್ಲಿ ಮೂಡಿ ಬಂದ ವಿವಿಧ ಪ್ರಕಾರಗಳ ಭಾವನೆಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಬಗೆಬಗೆಯ ಮನುಷ್ಯನ ಏರಿಳಿತಗಳು, ಸಮಾಜದ ಅನೇಕ ಬಗೆಯ ಹೊಯ್ದಾಟಗಳು, ಮನದ ತಳಮಳಗಳು, ಪ್ರಕೃತಿಯ ಸೌಂದರ್ಯ, ಅಂತಿಮವಾಗಿ ಮನುಷ್ಯ ಶರಣಾಗಲೇಬೇಕಾದ ಮರಣ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನಿಟ್ಟುಕೊಂಡು ಮುಸ್ಕಾನ್ ಸೂಫಿ ಕವನ ರಚಿಸಿ ಭಾವಗಳನ್ನು ಕವಿತೆಯಾಗಿಸಿದ್ದಾರೆ.
ಮುಸ್ಕಾನ್ ಸೂಫಿ ಅವರ ಕಾವ್ಯದಲ್ಲಿ ನೋವು, ಗುಣಪಡಿಸುವಿಕೆ ಮತ್ತು ಸ್ವಯಂ-ಅನ್ವೇಷಣೆಯ ವಿಷಯಗಳನ್ನು ಆಳವಾಗಿ ಬೇರೂರುವಂತೆ ಚಿತ್ರಿಸಲಾಗಿದೆ. ‘ದಿಸ್ ಟೂ ಶಲ್ ಪಾಸ್’ ಸಂಕಲನವು ಜೀವನದ ಕಠಿಣ ಕ್ಷಣಗಳಲ್ಲಿ ಕಂಡುಬರುವ ಶಾಂತ ಶಕ್ತಿಯನ್ನು ಸೆರೆಹಿಡಿದಿದೆ. ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಪದ್ಯಗಳ ಮೂಲಕ ದುರ್ಬಲತೆ ಮತ್ತು ಭರವಸೆಯನ್ನು ಸ್ವೀಕರಿಸಲು ಓದುಗರನ್ನು ಆಹ್ವಾನಿಸುವಂತೆ ಮುಸ್ಕಾನ್ ಕಾವ್ಯ ರಚಿಸಿರುವುದು ವಿಶೇಷವೆನಿಸಿದೆ. ಪ್ರಕೃತಿಯ ಶಾಂತತೆ ಮತ್ತು ದೈನಂದಿನ ಜೀವನದ ಸರಳ ಸೌಂದರ್ಯದಲ್ಲಿ ಶಾಂತಿಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಕಾವ್ಯದ ಮೂಲಕ ನಡೆಸಿರುವ ಮುಸ್ಕಾನ್, ಕಾವ್ಯವು ಆತ್ಮಗಳ ನಡುವಿನ ಸೇತುವೆ ಎಂದು ಕವಿತೆಯಲ್ಲಿ ಪ್ರತಿಪಾದಿಸಿದ್ದಾರೆ. ಮುಸ್ಕಾನ್ ಇವರ ಈ ಕವನ ಸಂಗ್ರಹವು ಬದುಕಿನ ಕತ್ತಲೆಯ ಸಮಯದಲ್ಲಿ ಸಾಂತ್ವನ ಮತ್ತು ಸಂಪರ್ಕವನ್ನು ಸಾಧಿಸುವ ಬಗ್ಗೆಯೂ ಬೆಳಕು ಚೆಲ್ಲಿದೆ.
ಮುಸ್ಕಾನ್ ಇವರ ಕವನಗಳಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳನ್ನು ಹೆಚ್ಚು ಬಳಸಲಾಗಿದೆ. ಕಾವ್ಯದ ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿದೆ. ನವೀನವಾದ ಪದಗಳ ಬಳಕೆಗೆ ಹೆಚ್ಚಿನ ನೀಡಲಾಗಿದೆ. ಕವನಗಳ ವಿಷಯವಸ್ತುಗಳನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿದೆ. ಸಂಕಲನದ ಬಹುತೇಕ ಕವನಗಳು ಆಧುನಿಕತೆಗೆ ಒತ್ತು ನೀಡಲಾಗಿದೆ. ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುವ ಮುಸ್ಕಾನ್ ಸೂಫಿಯವರ ಈ ಕವನ ಸಂಕಲನ ಮೊದಲ ಹಂತದಲ್ಲೇ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಇಂಗ್ಲೀಷ್ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದೆ.