ಬೆಳ್ತಂಗಡಿ : ವಾಣಿ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ದಿನಾಂಕ 18 ಜುಲೈ 2025ರಂದು ‘ಬರಹ ಕೌಶಲ್ಯ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ. ರಾಮಕೃಷ್ಣಶಾಸ್ತ್ರಿ ಇವರು ‘ಬರಹ ಕೌಶಲ್ಯ’ ವಿಷಯದ ಕುರಿತು ಮಾತನಾಡಿ “ಸಾಹಿತ್ಯಾಸಕ್ತಿಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಬದುಕಿನೊಂದಿಗೆ ನೆಮ್ಮದಿ, ಗೌರವ, ಪ್ರಶಸ್ತಿಗಳನ್ನು ಪಡೆದುಕೊಳ್ಳಬಹುದು. ಜೀವನದ ಕಷ್ಟ ಸುಖದ ಅನುಭವಗಳನ್ನು ಮತ್ತು ನಮ್ಮ ಹತ್ತಿರದ ವಿಷಯ ಅಥವಾ ಘಟನೆಗಳನ್ನು ಆಸಕ್ತಿಯಿಂದ ಗಮನಿಸಿದಾಗ ಅದು ಬರವಣಿಗೆಗೆ ಸ್ಫೂರ್ತಿಯಾಗುತ್ತದೆ. ಸಾಹಿತ್ಯಕ್ಕೆ ವಿಷಯಗಳನ್ನು ನಾವೇ ಹುಡುಕಿಕೊಂಡು ಹೋಗಬೇಕಾಗುತ್ತದೆ. ಲೇಖನಗಳು ಅಥವಾ ಕಥೆಗಳು ಓದುಗರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರುವುದರೊಂದಿಗೆ ಸಮಾಜದಲ್ಲಿ ನೈತಿಕತೆಯನ್ನು ಕಂಡುಕೊಳ್ಳಬಹುದು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಚಿಸಿದ ‘ಅಕ್ಷರ ವಾಣಿ’ ಭಿತ್ತಿಪತ್ರಿಕೆಯನ್ನು ಹಿರಿಯ ಸಾಹಿತಿ ಪ. ರಾಮಕೃಷ್ಣಶಾಸ್ತ್ರಿ ಅನಾವರಣಗೊಳಿಸಲಾಯಿತು. ಕಾಲೇಜಿನ ಪ್ರಿನ್ಸಿಪಾಲ್ ವಿಷ್ಣು ಪ್ರಕಾಶ್ ಎಂ.ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಸಂಯೋಜಕರಾದ ರಮ್ಯಾ ಜೋಶಿ ಮತ್ತು ಅಭ್ಯುದಯ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸನಾ ಶರಿನಾ ಪಿಂಟೋ ಸ್ವಾಗತಿಸಿ, ಅಭಿಜ್ಞಾ ವಂದಿಸಿ, ಯಶಸ್ವಿ ಕಾರ್ಯಕ್ರಮ ನಿರೂಪಿಸಿದರು.