ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿರುವ ರಾಮಕೃಷ್ಣ ಕಾಲೇಜಿನಲ್ಲಿ ಯಕ್ಷ ಶರತ್ ತಂಡ ಪ್ರದರ್ಶಿಸಿದ ‘ಜಾಂಬವತಿ ಕಲ್ಯಾಣ’ ಯಕ್ಷಗಾನದ ಪ್ರದರ್ಶನವು ದಿನಾಂಕ 25 ಜುಲೈ 2025ರಂದು ಕಾಲೇಜಿನ ಯಕ್ಷವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನಸೂಯಾ ರೈ ಮಾತನಾಡಿ “ಯಕ್ಷಗಾನವು ವಿವಿಧ ಮಾಧ್ಯಮಗಳಿಂದ ವಿಶ್ವದ ಎಲ್ಲೆಡೆಯ ಕಲಾರಸಿಕರನ್ನು ತನ್ನಡೆಗೆ ಸೆಳೆಯುತ್ತದೆ. ದೃಶ್ಯ-ಶ್ರಾವ್ಯ ಕಲೆಯಾದ ಈ ಶ್ರೀಮಂತ ಕಲೆಯನ್ನು ಆರಾಧಿಸುವ ಒಂದು ವರ್ಗವೇ ಬೆಳೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕೂಡಾ ಅದನ್ನು ವಿದ್ಯಾರ್ಥಿಗಳಿಗೆ ಕಲಿಸುವ ವ್ಯವಸ್ಥೆ ಈಗಿದೆ ಇನ್ನು ಅದನ್ನು ಕಲಿಯುವ ಯುವ ಜನಾಂಗವೂ ಅಧಿಕವಾಗಿದೆ. ಗಂಡು- ಹೆಣ್ಣುಗಳೆಂಬ ಪ್ರಬೇಧವಿಲ್ಲದೇ ಇಂದು ಯಕ್ಷಗಾನ ಎಲ್ಲರಿಗೂ ಬೇಕಾಗಿರುವ ಅಂತೆಯೇ ಜೀವನ ಮೌಲ್ಯಗಳನ್ನು ವಿವರಿಸುವ ಕಲೆಯೂ ಹೌದು” ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಶ್ರೀ ಧನರಾಜ್, ಉಪಪ್ರಾಂಶುಪಾಲೆ ಶೀಮತಿ ಪ್ರತಿಮಾ ಶೆಟ್ಟಿ, ಪದವಿಪೂರ್ವ ಕಾಲೇಜಿನ ಶ್ರೀಮತಿ ಯಶೋದಾ ಶೆಟ್ಟಿ, ಪ್ರೌಢಶಾಲಾ ಪ್ರಾಂಶುಪಾಲೆ ಪ್ರೆಸಿಲ್ಲಾ ಮೇಡಂ ಉಪಸ್ಥಿತರಿದ್ದರು.
ಶ್ರೀರಾಮಕೃಷ್ಣ ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಡಾ. ಸಂಜೀವ ರೈ ಮಾರ್ಗದರ್ಶನವಿತ್ತು, ಖ್ಯಾತ ಭಾಗವತ ಅಡೂರು ಜಯರಾಮ ರವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿ, ವರ್ಕಾಡಿ ರವಿ ಅಲೆವೂರಾಯ ನಿರೂಪಿಸಿ, . ನಿಹಾಲ್ ಪೂಜಾರಿ ಸ್ಮರಣಿಕೆಗಳನ್ನತ್ತು ಅತಿಥಿಗಳನ್ನು ಗೌರವಿಸಿ, ಎ. ಮಧುಸೂದನ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷ ಶರತ್ ತಂಡದಿಂದ ಜಾಂಬವತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಂಡಿತು.