ಮಂಗಳೂರು : ಸುರತ್ಕಲ್ ರೋಟರಿ ಕ್ಲಬ್ ದಿನಾಂಕ 10 ಆಗಸ್ಟ್ 2025ರಂದು ಆಯೋಜಿದ್ದ ಆಟಿಯ ಹುಣ್ಣಿಮೆ.. ಆಟಿದ ಕೂಟದಲ್ಲಿ ಜಾನ್ ಎಫ್. ಕೆನಡಿ ಇವರನ್ನು ಸನ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಜಾನ್ ಎಫ್. ಕೆನಡಿ “ನಮ್ಮ ಹಿರಿಯರಿಂದ ಬಂದಿರುವ ಪಾರಂಪರಿಕ ಜ್ಞಾನ ವಿಚಾರಗಳನ್ನು ಯುವ ಸಮುದಾಯಕ್ಕೆ ತಲುಪಿಸಲು ಜ್ಞಾನದ ಮನೆ ತುಳುನಾಡ ವಸ್ತು ವಿಚಾರಗಳ ಸಂಗ್ರಹಾಲಯ ಸ್ಥಾಪನೆ ಮಾಡಲಾಯಿತು. ತುಳುನಾಡಿನ ಸಂಸ್ಕೃತಿಯ ಕುರಿತು ಹೆಚ್ಚಿನ ಆಸಕ್ತಿ ಮೂಡುತ್ತಿದ್ದು, ಇಲ್ಲಿರುವ ಒಂದೊಂದು ವಸ್ತುವು ಇತಿಹಾಸದ ವಿಚಾರಗಳನ್ನು ಹೇಳುತ್ತಿವೆ. ಅದನ್ನು ವೀಕ್ಷಿಸಿ ಅರ್ಥ ಮಾಡಿಕೊಳ್ಳುವ ತಾಳ್ಮೆ ನಮ್ಮಲ್ಲಿರಬೇಕು. ವಿದ್ಯಾರ್ಥಿಗಳಿಗೆ ಪೂರಕವಾಗಿರುವ ಇಲ್ಲಿನ ಸಂಗ್ರಹಣೆಯನ್ನು ವೀಕ್ಷಿಸಲು ಮುಕ್ತ ಅವಕಾಶ ಇದೆ” ಎಂದು ನುಡಿದರು.
ಕ್ಲಬ್ ಸರ್ವಿಸ್ ನಿರ್ದೇಶಕ ಪ್ರೊ. ಕೃಷ್ಣ ಮೂರ್ತಿ ಇವರು ಅಭಿನಂದನಾ ಮಾತುಗಳಲ್ಲಿ “ಪಾರಂಪರಿಕ ವಸ್ತುಗಳ ಮೂಲಕ ನಮ್ಮ ನಾಡಿನ ಇತಿಹಾಸವನ್ನು ಪುನರ್ ರಚಿಸಲು ಸಾಧ್ಯವಿದೆ. ಜಾನ್ ಎಫ್. ಕೆನಡಿಯವರ ಕಾರ್ಯಗಳಿಗೆ ಸೇವಾ ಹಾಗೂ ಕೈಗಾರಿಕಾ ಸಂಸ್ಥೆಗಳ ಬೆಂಬಲ ಅಗತ್ಯ” ಎಂದರು. ರೋಟರಿ ಕ್ಲಬ್ ಅಧ್ಯಕ್ಷರಾದ ರಾಮಚಂದ್ರ ಬಿ. ಕುಂದರ್ “ತುಳುನಾಡ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಆಟಿದ ಕೂಟಗಳು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದರು.
ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ.ಎನ್. ಶುಭ ಹಾರೈಸಿದರು. ರೋಟರಿ ಕುಟುಂಬ ಸದಸ್ಯರು ವಸ್ತು ಸಂಗ್ರಹಾಲಯ ವೀಕ್ಷಿಸಿದರು. ಸತೀಶ್ ಸದಾನಂದ ಅಪೂರ್ವವಾದ ಹಳೆ ಮಾದರಿಯ ಕ್ಯಾಮೆರಾವನ್ನು ಕೊಡುಗೆಯಾಗಿ ನೀಡಿದರು. ಕಾರ್ಯದರ್ಶಿ ರಾಮಮೋಹನ್ ವೈ. ವಂದಿಸಿದರು.