ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯ ವತಿಯಿಂದ ಆ. 8, 9, 10 ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2025ʼರ ಎರಡನೇಯ ದಿನದ ಕಾರ್ಯಕ್ರಮಗಳು ದಿನಾಂಕ 9 ಆಗಸ್ಟ್ 2025ರ ಶನಿವಾರದಂದು ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ನಡೆದಿದ್ದು, ಹಲವು ವಿಚಾರಗೋಷ್ಠಿಗಳಿಗೆ ಸಾಹಿತ್ಯ ಉತ್ಸವದ 8 ವೇದಿಕೆಗಳು ಸಾಕ್ಷಿಯಾದವು.
ಉತ್ಸವದ ಮುಖ್ಯ ವೇದಿಕೆ ಮಂಟಪ ಸಭಾಂಗಣದಲ್ಲಿ ನಡೆದ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರ ʻಮಾರ್ನಿಂಗ್ ಮೆಲೋಡಿʼ ಕಾರ್ಯಕ್ರಮವು ಎರಡನೇಯ ದಿನದ ಕಾರ್ಯಕ್ರಮಕ್ಕೆ ಮುನ್ನುಡಿ ನೀಡಿತು. ನಂತರದಲ್ಲಿ ಇದೇ ವೇದಿಕೆಯಲ್ಲಿ ಪೌಲ್ ಜಚಾರೀಯ, ಎಚ್.ಎಸ್. ಶಿವಪ್ರಕಾಶ್, ಅಜಿತನ್, ವೋಲ್ಗಾ, ಅನುಜ ಚಂದ್ರಮೌಲಿ, ಟಿ. ಎಂ. ಕೃಷ್ಣ, ಸುಮಂಗಲಾ, ಶೈಲಜಾ, ಸಿ. ಮೃಣಾಲಿನಿ, ಕಿರುಂಗೈ ಸೇತುಪತಿ, ಕೆ. ಶ್ರೀನಿವಾಸ್, ರಶ್ಮೀ ವಾಸುದೇವ, ಸುಧೀಶ್ ವೆಂಕಟೇಶ್, ಮಯೂರ ಶೇಯಾಂಶ್ ಕುಮಾರ್, ವಿ. ಐಶ್ವರ್ಯ, ಮನು ಪಿಲ್ಲೈ, ವಿ.ಎಸ್. ಕೈಕಸಿ, ಆಡೂರು ಗೋಪಾಲಕೃಷ್ಣನ್, ಗಿರೀಶ್ ಕಾಸರವಳ್ಳಿ, ಅರ್ಚನಾ ವಾಸುದೇವನ್ ಅವರೊಂದಿಗೆ ವಿವಿಧ ಪ್ರಾಂತ್ಯಗಳ ಸಾಹಿತ್ಯ, ಭಾಷೆಯ ಕುರಿತ ಚರ್ಚೆಗಳು ನಡೆದವು.
ʻಅಂಗಳʼ ವೇದಿಕೆಯಲ್ಲಿ ನಡೆದ ʻಸಾಹಿತ್ಯ- ಹಾಸ್ಯದ ಹಾಸುಹೊಕ್ಕುʼ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದ ಹಾಸ್ಯ ಚಕ್ರವರ್ತಿ ಡುಂಡಿರಾಜ್, ಬಿ. ಆರ್. ಲಕ್ಷ್ಮಣ್ ರಾವ್, ವೈ. ಎನ್. ಗುಂಡುರಾವ್ ಅವರು ಭಾಗವಹಿಸಿದರು. ಹಾಸ್ಯ ನಮ್ಮ ಬದುಕಿಗೆಷ್ಟು ಮುಖ್ಯ ಹಾಗೂ ಅದರೊಂದಿಗೆ ನಾವು ನಮ್ಮನ್ನ ತೆರೆದುಕೊಳ್ಳುವ ಪರಿ ಎಷ್ಟು ಸಹಜ ಎನ್ನುವುದನ್ನು ಅವರು ಹಾಸ್ಯ ಚಟಾಕಿಗಳ ಮೂಲಕ ವಿವರಿಸಿದರು. ಹಾಸ್ಯವೆಂಬುದು ಮನೋರೋಗಕ್ಕೆ ಉಚಿತವಾಗಿ ಸಿಗುವ ಚಿಕಿತ್ಸೆ. ಸಾಹಿತ್ಯದ ಒಳ ಹೊರಗುಗಳಲ್ಲಿ ಹಾಸ್ಯದ ಅವಶ್ಯಕತೆ ಒಬ್ಬ ಓದುಗನಿಗೆ ತುಂಬಾ ಮುಖ್ಯ. ಯಾವುದೇ ಗಂಭೀರ ವಿಷಯಗಳನ್ನು ಹಾಸ್ಯಾತ್ಮಕವಾಗಿ ಕೇಳುಗನಿಗೆ ಮುಟ್ಟಿಸಿದಾಗ ಅದು ಅವನ ಹೃದಯಕ್ಕೆ ನಾಟುತ್ತದೆ. ಹಾಗಾಗಿ ನಮ್ಮ ದಿನ ನಿತ್ಯದ ಬದುಕಿನ ಹಲವು ಚಟುವಟಿಕೆಗಳು ಲವಲವಿಕೆಯಿಂದ ಕೂಡಿರಬೇಕೆಂದರೆ ಸಾಹಿತ್ಯಾತ್ಮಕ ಹಾಸ್ಯದ ಸದಾಭಿರುಚಿ ನಮ್ಮದಾಗಬೇಕು, ಎಂದು ತಮ್ಮ ವಿಚಾರಗಳ ಮೂಲಕ ಮಂಡಿಸಿದರು.
ನಂತರದಲ್ಲಿ ಇದೇ ವೇದಿಕೆಯಲ್ಲಿ ʻಕಾದಂಬರಿಯಾದ ಸಂಗೀತʼ ಗೋಷ್ಠಿ ನಡೆದಿದ್ದು, ಪ್ರವೀಣ್ ಗೋಡ್ಖಿಂಡಿ, ಶಿರೀಷ ಜೋಶಿ, ಬಾಳಸಾಹೇಬ ಲೋಕಾಪುರ, ʻಎಐ ಯುಗದಲ್ಲಿ ಕನ್ನಡ ಭಾಷೆ- ಸಾಹಿತ್ಯ ಗೋಷ್ಠಿಯಲ್ಲಿ ಕೆ. ಪಿ. ರಾವ್ ಅವರೊಂದಿಗೆ ಪವಿತ್ರಾ ಎಚ್, ʻನೆಲದ ಮಾತು: ಕೃಷಿ ಬರವಣಿಗೆಯ ನೆಲೆ-ಹಿನ್ನೆಲೆʼ ಗೋಷ್ಠಿಯಲ್ಲಿ ಶಿವಾನಂದ ಕಳವೆ, ವಿ. ಗಾಯತ್ರಿ, ಟಿ.ಎಸ್ ಚನ್ನೇಶ್, ಗಾಣಧಾಳು ಶ್ರೀಕಂಠ, ʻಮಿಡಿವ ಮನಸ್ಸು-ಹೃದಯ: ವೈದ್ಯರ ಅಕ್ಷರಲೋಕʼ ಗೋಷ್ಠಿಯಲ್ಲಿ ನಾ ಸೋಮೇಶ್ವರ, ವಸುಧೇಂದ್ರ ಭೂಪತಿ, ಕೆ.ಎಸ್. ಪವಿತ್ರಾ, ಅರುಣಾ ಯಡಿಯಾಳ್, ʻಜಾನಪದ ಲೋಕದ ವಿಸ್ತರಣೆ?- ನವಜಾನಪದʼದಲ್ಲಿ ಕೆ.ಆರ್ ಸಂಧ್ಯಾರೆಡ್ಡಿ, ಟಿ. ಗೋವಿಂದರಾಜ್, ಶಿಲ್ಪಾ ಮುಡಬಿ, ಕುರುವ ಬಸವರಾಜ್ ಉಪಸ್ಥಿತರಿದ್ದರು.
ಮುಖಾ – ಮುಖಿ ವೇದಿಕೆಯು ಅಡೂರು ಗೋಪಾಲಕೃಷ್ಣ, ಎಸ್. ಎಂ ಗೌಸ್, ಪೌಲ್ ಜಚಾರಿಯಾ, ಸಲ್ಮಾ, ನಾ. ಸೋಮೇಶ್ವರ, ಸಿ ಮೃಣಾಲಿನಿ, ಬಿ.ಆರ್ ಲಕ್ಷ್ಮಣರಾವ್, ಪ್ರವೀಣ್ ಗೋಡ್ಖಿಂಡಿ, ಇಮೈಯಮ್, ಮಧುರಂತಕಂಮ್ ನರೇಂದ್ರ, ಮನು ಪಿಲ್ಲೈಯಂತಹ ದಿಗ್ಗಜರ ಮಾತು ಕತೆ ಹಾಗೂ ಚರ್ಚೆಯ ವೇದಿಕೆಯಾಗಿ ಸಾಹಿತ್ಯಾಸಕ್ತರ ಮನ ಸೆಳೆಯಿತು.
ಅನಾವರಣ ವೇದಿಕೆಯಲ್ಲಿ ʻThe Dark Hours Of The Nightʼ, ʻVeetaayitheernnavalʼ, ʻOntarithanapu Kathaluʼ, ಐಬಿಎಚ್ ಪ್ರಕಾಶನದ ʻಮುಗಿಲಗಲ…ಜಗದಗಲʼ, ಬಹುರೂಪಿ ಪ್ರಕಾಶನದ ಸುಚಿತ್ರಾ ಹೆಗಡೆ ಅವರ ʻಮಿಂಚು ಹುಳದ ದಾರಿʼ, ಮನೋಹರಾ ಗ್ರಂಥಮಾಲಾ ಪ್ರಕಾಶನದ ʻಸಿಲ್ಕ್ ರೂಟ್ʼ, ಅಭಿನವ ಪ್ರಕಾಶನದ ʻಅನ್ನಾ ಕರೆನಿನಾʼ, ವೈಷ್ಣವಿ ಪ್ರಕಾಶನದ ʻಸಿಕ್ಕು-ದಿಡುಗುʼ, ಕಲಚವಾಡು ಪಬ್ಲಿಕೇಷನ್ ನ ʻOru mananala vitutiyin mikavum nampat takaata varalaarru arikkai – Ayfer tunc, ಆಕೃತಿ ಆಶಯ ಪ್ರಕಾಶನದ ʻಏರು ಘಟ್ಟದ ನಡಿಗೆʼ, ವಿಕ್ರಮ ಪ್ರಕಾಶನದ ಕೃತಿಗಳು ಲೋಕಾರ್ಪಣೆಗೊಂಡವು.
ಪುಸ್ತಕ, ಮಥನ, ಅಕ್ಷರ ವೇದಿಕೆಗಳಲ್ಲೂ ತೆಲುಗು, ತಮಿಳು, ಮಲಯಾಳಂ ಸಾಹಿತ್ಯ ದಿಗ್ಗಜರ ಹಲವು ಗೋಷ್ಠಿಗಳು ನಡೆದವು. ʻಚಿನ್ನರ ಲೋಕʼ ಸಭಾಂಗಣವು ಮಕ್ಕಳ ಕಲರವ ಹಾಗೂ ಮಕ್ಕಳ ಸಾಹಿತ್ಯದೊಂದಿಗೆ ತುಂಬಿದ್ದು, ಸಾಹಿತ್ಯ ಉತ್ಸವದ ಕಳೆಯನ್ನ ಮತ್ತಷ್ಟು ಹೆಚ್ಚಿಸಲು ಕಾರಣವಾಯಿತು. ಇಲ್ಲಿ ಅನುಪಮಾ ಹೇಳುವ ಕೆಂಪಿ ಕಥೆ, ಮಕ್ಕಳ ಕಥೆ ಶ್ಯಾಮ್ ಮಾಧವನ್ ಜೊತೆ, ಬಾದಲ್ ಜೊತೆ ಬಣ್ಣದ ಆಟ, ಸಂಜೆಯ ಮನರಂಜನೆ: ಫನಾ ದಿ ಬ್ಯಾಂಡ್ʼ ಕಾರ್ಯಕ್ರಮಗಳು ನಡೆದವು.
ಮಧ್ಯಾಹ್ನದ ವೇಳೆ ಮಂಟಪ ಸಭಾಂಗಣದ ರಂಗನ್ನು ಸಾಂಸ್ಕೃತಿಕ ಕಲರವದೊಂದಿಗೆ, ನೋಡುಗರ ಕಣ್ಮನ ಸೆಳೆಯುವ ದಾಟಿಯಲ್ಲಿ ಮಾನಸಿ ಪ್ರಸಾದ್ ಹಾಗೂ ಅವರ ತಂಡ ʻನದಿ ಮತ್ತು ಮಳೆಯ ಹಾಡಿನೊಂದಿಗೆʼ ಮನರಂಜಿಸಿದರು. ಟಿ.ಎಂ ಕೃಷ್ಣ ಅವರ ಶಾಸ್ತ್ರೀಯ ಸಂಗೀತವನ್ನು ಬುಕ್ ಬ್ರಹ್ಮ ಉತ್ಸವದಲ್ಲಿ ಹಮ್ಮಿಕೊಳ್ಳಲಾಯಿತು.